ಚಿತ್ರದುರ್ಗ: ಗಾಂಧಿ ಜಯಂತಿ ಬಂತಂದ್ರೆ ದೇಶದೆಲ್ಲೆಡೆ ಮಹಾತ್ಮ ಗಾಂಧೀಜಿ ಭಾವಚಿತ್ರವಿಟ್ಟು ಪೂಜಿಸೋದು ವಾಡಿಕೆ. ಆದರೆ ಚಿತ್ರದುರ್ಗ ತಾಲೂಕಿನ ತುರುವನೂರು ಗ್ರಾಮದಲ್ಲಿ ಮೊಟ್ಟ ಮೊದಲು ಶುರುವಾದ ಸ್ವಾತಂತ್ರ ಹೋರಾಟದ ಕಿಚ್ಚಿನ ಹೋರಾಟದ ಸವಿ ನೆನಪಿಗಾಗಿ ಗಾಂಧೀಜಿ ದೇಗುಲ ನಿರ್ಮಿಸಿ ನಿತ್ಯ ಪೂಜಾ ಕೈಂಕರ್ಯ ಮಾಡಲಾಗುತ್ತಿದೆ.
ಚಿತ್ರದುರ್ಗ ತಾಲೂಕಿನ ತುರುವನೂರು ಸ್ವತಂತ್ರ್ಯ ಹೋರಾಟದಲ್ಲಿ ತನ್ನದೇ ಛಾಪು ಮೂಡಿಸಿದ ಗ್ರಾಮ. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ನೇತೃತ್ವದಲ್ಲಿ ಅನೇಕ ಸ್ವತಂತ್ರ್ಯ ಹೋರಾಟಗಳು ಇಲ್ಲಿ ನಡೆದಿವೆ. ಇದೇ ತುರುವನೂರು ಗ್ರಾಮದಲ್ಲಿ ಈಚಲ ಮರದ ಚಳುವಳಿ ನಡೆದಿದೆ. ಹೀಗಾಗಿ ನೂರಾರು ಜನ ಸ್ವತಂತ್ರ ಹೋರಾಟಗಾರರು ಈ ಗ್ರಾಮದಿಂದಲೇ ಹೋರಾಟಕ್ಕೆ ಧುಮುಕಿದ್ದರು. ಆ ಹೋರಾಟದ ಸವಿನೆನಪಿಗಾಗಿ ಈ ತುರುವನೂರು ಗ್ರಾಮದಲ್ಲಿ ಸ್ವತಂತ್ರ್ಯ ಹೋರಾಟಗಾರರ ನೇತಾರ ಮಹಾತ್ಮ ಗಾಂಧೀಜಿಯವರ ದೇವಸ್ಥಾನವನ್ನೇ ನಿರ್ಮಿಸಲಾಗಿದೆ. ಅಲ್ಲದೇ ಏಳು ಅಡಿ ಎತ್ತರದ ಗಾಂಧೀಜಿಯವರ ಕಂಚಿನ ಪ್ರತಿಮೆಯು ದೆಹಲಿಯಲ್ಲಿ ಬಿಟ್ಟರೆ, ಈ ತುರುವನೂರು ಗ್ರಾಮದಲ್ಲಿ ಮಾತ್ರ ಇರೋದು ಈ ದೇಗುಲದ ವಿಶೇಷ.
ಈ ದೇಗುಲವನ್ನು ಅಕ್ಟೋಬರ್ 1, 1968 ರಂದು ಎಸ್.ನಿಜಲಿಂಗಪ್ಪನವರು ಈ ದೇಗುಲವನ್ನು ಉದ್ಘಾಟಿಸಿದ್ದರು. ಕೆಲ ದಿನಗಳ ಕಾಲ ದೇಗುಲವನ್ನು ಸೂಕ್ತ ನಿರ್ವಹಣೆ ಮಾಡುವವರಿಲ್ಲದೆ ಕಟ್ಟಡ ಅಲ್ಲಲ್ಲಿ ಬಿರುಕು ಬಿಟ್ಟಿತ್ತು. ಆಗ ಈ ಗ್ರಾಮದ ಹಿರಿಯರ ಸಲಹೆ ಮೇರೆಗೆ ಯುವಕರೆಲ್ಲ ಒಟ್ಟಾಗಿ ಈ ಅವಿಸ್ಮರಣೀಯ ಸ್ಮಾರಕವನ್ನು ಉಳಿಸಲು ಮುಂದಾಗಿದ್ದಾರೆ. ದೇಗುಲ ಪ್ರಾರಂಭವಾದಾಗಿನಿಂದ ಒಮ್ಮೆಯೂ ಜೀಣೋದ್ಧಾರವಾಗಿಲ್ಲ. ಹೀಗಾಗಿ ಈ ಗಾಂಧಿ ದೇಗುಲವನ್ನು ಸರ್ಕಾರ ಇನ್ನಷ್ಟು ಅಭಿವೃದ್ಧಿಪಡಿಸಿ ಐತಿಹಾಸಿಕ ಪ್ರವಾಸಿ ತಾಣವನ್ನಾಗಿಸುವ ಮೂಲಕ ಹೋರಾಟದ ಸವಿನೆನಪು ಅಚ್ಚಳಿಯದಂತೆ ಉಳಿಸಬೇಕೆಂಬ ಆಗ್ರಹ ಕೇಳಿಬಂದಿದೆ.
ಸ್ವತಂತ್ರ ಹೋರಾಟಗಾರರ ಸವಿ ನೆನಪಿಗಾಗಿ ತುರುವನೂರು ಗ್ರಾಮದಲ್ಲಿ ಗಾಂಧೀಜಿ ದೇಗುಲ ನಿರ್ಮಾಣವಾಗಿದ್ದು, ನಿತ್ಯವೂ ಪೂಜಾ ಕೈಂಕಾರ್ಯಗಳು ನಡೆಯುತ್ತಿವೆ. ಅಭಿವೃದ್ಧಿ ಹೆಸರಲ್ಲಿ ಮಠ-ಮಂದಿರಗಳಿಗೆ ಕೋಟ್ಯಾಂತರ ರೂಪಾಯಿ ಅನುದಾನ ನೀಡುವ ಸರ್ಕಾರ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾಪುರುಷನ ದೇಗುಲವನ್ನು ಅಭಿವೃದ್ಧಿಪಡಿಸದೆ ನಿರ್ಲಕ್ಷ್ಯ ತೋರಿರೋದು ಮಾತ್ರ ವಿಷಾದನೀಯ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.