ನವದೆಹಲಿ: ಪಾಕಿಸ್ತಾನ ಮಾಜಿ ಕ್ರಿಕೆಟ್ ಆಟಗಾರ ಶಾಹಿದ್ ಅಫ್ರಿದಿ ತಮ್ಮ ಆತ್ಮಕಥೆ ‘ಗೇಮ್ ಚೇಂಜರ್’ ಪುಸ್ತಕವನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಟೀಂ ಇಂಡಿಯಾ ಮಾಜಿ ಆಟಗಾರ ಗೌತಮ್ ಗಂಭೀರ್ ಬಗ್ಗೆ ಕಿಡಿಕಾರಿದ್ದಾರೆ.
ಗೌತಮ್ ಗಂಭೀರ್ ಹಾಗೂ ನನ್ನ ನಡುವೆ ಹಲವು ಜಗಳಗಳು ಆಗಿದ್ದು, ಕೆಲವು ವೃತ್ತಿಗೆ ಸಂಬಂಧಿಸಿದ್ದರೆ ಕೆಲವು ವೈಯಕ್ತಿಕವಾಗಿತ್ತು. ಕ್ರಿಕೆಟಿನಲ್ಲಿ ಗಂಭೀರ್ ಗೌತಮ್ ಯಾವುದೇ ದಾಖಲೆಗಳನ್ನು ಹೊಂದಿಲ್ಲದಿದ್ದರೂ ಅವರಿಗೆ ಆ್ಯಟಿಟ್ಯೂಡ್ ಸಮಸ್ಯೆ ಇದೆ. ಆತ ತನ್ನನ್ನು ತಾನು ಡಾನ್ ಬ್ರಾಡ್ಮನ್, ಜೇಮ್ಸ್ ಬಾಂಡ್ ಮೀರಿಸುವ ಆಟಗಾರ ಎಂದು ತಿಳಿದುಕೊಂಡಿದ್ದಾರೆ ಎಂದು ಟೀಕಿಸಿದ್ದಾರೆ.
2007 ರಲ್ಲಿ ನಡೆದ ಜಗಳದ ಕುರಿತು ಪ್ರಸ್ತಾಪ ಮಾಡಿರುವ ಅಫ್ರಿದಿ, ಗೌತಮ್ ರನ್ ಓಡುತ್ತಿದ್ದ ವೇಳೆ ನಡೆದ ಘಟನೆ ನನಗೆ ನೆನಪಿದೆ. ಆತ ತನ್ನ ಒಂಟಿ ರನ್ ಪೂರ್ಣಗೊಳಿಸಲು ನನ್ನ ಮೇಲೆಯೇ ನುಗ್ಗಿ ಬಂದ. ಆ ವೇಳೆ ಅಂಪೈರ್ ನಡುವೆ ಬಂದು ತಿಳಿಸಿಗೊಳಿಸಿದ್ದರು ಎಂದು ಉಲ್ಲೇಖಿಸಿದ್ದಾರೆ.
ಇಬ್ಬರ ನಡುವೆ ಸಾಕಷ್ಟು ವಿಚಾರಗಳಿಗೆ ಜಗಳ ಆಗಿದೆ. ಕರಾಚಿಯಲ್ಲಿ ಇಂತಹ ವ್ಯಕ್ತಿಗಳನ್ನು ‘ಉರ್ಕೊಳ್ಳುವವರು’ ಎಂದು ಕರೆಯುತ್ತೇವೆ. ನನಗೆ ಉತ್ತಮ ನಡವಳಿಕೆ ಹೊಂದಿರುವ ವ್ಯಕ್ತಿಗಳನ್ನು ಕಂಡರೆ ಇಷ್ಟ. ಆದರೆ ಗೌತಮ್ ಯಾವಾಗಲು ನೆಗೆಟಿವ್ ಆಗಿರುತ್ತಿದ್ದರು ಎಂದು ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ.
ಕ್ರಿಕೆಟ್ ಮಾತ್ರವಲ್ಲದೇ ವೈಯಕ್ತಿಕ ವಿಚಾರದಲ್ಲಿಯೂ ಗಂಭೀರ್ ಹಾಗೂ ಅಫ್ರಿದಿ ನಡುವೆ ಹಲವು ಭಾರೀ ಸಮರ ನಡೆದಿದೆ. ಭಾರತವನ್ನು ಕೆಣಕಿ ಟ್ವಿಟ್ಟರ್ ನಲ್ಲಿ ಕಾಶ್ಮೀರ ಕುರಿತು `ಯುಎನ್’ (ಯುನೈಟೆಡ್ ನೇಷನ್ಸ್ ಅಥವಾ ವಿಶ್ವಸಂಸ್ಥೆ) ಯಾವ ಕಾರ್ಯ ಮಾಡುತ್ತಿದೆ ಎಂದು ಪ್ರಶ್ನಿಸಿ, ಭಾರತ ಸರ್ಕಾರ ಅಮಾಯಕರನ್ನು ಹತ್ಯೆ ಮಾಡುತ್ತಿದ್ದಾರೆ. ಅದರೂ ವಿಶ್ವಸಂಸ್ಥೆ ಹಾಗೂ ಇತರೇ ಸಂಸ್ಥೆಗಳು ಯಾವುದೇ ಕ್ರಮಕೈಗೊಳ್ಳದೇ ಸುಮ್ಮನೆ ಕುಳಿತಿರುವುದು ಏಕೆ ಎಂದು ಅಫ್ರಿದಿ ಪ್ರಶ್ನಿಸಿದ್ದರು. ಈ ಟ್ವೀಟ್ಗೆ ಗಂಭೀರ್ ವ್ಯಂಗ್ಯವಾಡಿ ಟಾಂಗ್ ನೀಡಿದ್ದರು. ಅಫ್ರಿದಿ ಅವರ ಹಿಂದುಳಿದ ನಿಘಂಟಿನಲ್ಲಿ ಯುಎನ್ ಎಂದರೆ `ಅಂಡರ್ ನೈಂಟೀನ್’ ಎಂಬ ಅರ್ಥವನ್ನು ನೀಡುತ್ತದೆ. ಮಾಧ್ಯಮಗಳು ಈ ವಿಷಯದಿಂದ ವಿಶ್ರಾಂತಿ ಪಡೆಯಬಹುದು. ಅಫ್ರಿದಿ ನೋಬಲ್ ನಲ್ಲಿ ಔಟಾದ ಸಂಭ್ರಮಾಚರಣೆ ಮಾಡುತ್ತಿದ್ದಾರೆ ಎಂದು ಟಾಂಗ್ ನೀಡಿದ್ದರು.