-ಇಬ್ಬರು ಮಕ್ಕಳಿಗೆ ಗಾಯ
ಬೆಂಗಳೂರು: ಹೊರವಲಯ ಆನೇಕಲ್ ತಾಲೂಕಿನ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ ವ್ಯಾಪ್ತಿಯ ಮುನೇಶ್ವರ ಬಡಾವಣೆಯಲ್ಲಿ ಮನೆಗಳಿಗೆ ಗ್ಯಾಸ್ ಸರಬರಾಜು ಮಾಡುವ ಗೇಲ್ ಗ್ಯಾಸ್ ಕಂಪನಿಯ ಪೈಪ್ ಒಡೆದು ಬ್ಲಾಸ್ಟ್ ಆಗಿದೆ. ಅವಘಡದಲ್ಲಿ ಇಬ್ಬರು ಬಾಲಕರು, ನಾಲ್ಕು ಮನೆಗಳು ಸೇರಿದಂತೆ 2 ಕಾರು ಜಖಂಗೊಂಡಿವೆ.
ಗಾಯಗೊಂಡ ಮಕ್ಕಳನ್ನು ಗಗನ್ (9) ರೋಷನ್(11) ಎಂದು ಗುರುತಿಸಲಾಗಿದೆ. ಪೈಪ್ ಲೈನ್ ಹಾದುಹೋಗುವ ಮಾರ್ಗದಲ್ಲಿ ವಿದ್ಯುತ್ ಸರಬರಾಜು ಮಾಡಲು ಗುಂಡಿ ತೋಡುತ್ತಿದ್ದ ಸಂದರ್ಭದಲ್ಲಿ ಗ್ಯಾಸ್ ಪೈಪ್ ಒಡೆದು ಅನಾಹುತ ಸಂಭವಿಸಿದೆ. ಗ್ಯಾಸ್ ಸೋರಿಕೆಯಾಗಿ 4 ಮನೆ ಕಾರುಗಳು ಜಖಂಗೊಂಡಿದ್ದು ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ.
ಗೇಲ್ ಗ್ಯಾಸ್ ಕಂಪನಿಯ ಪೈಪ್ ಒಡೆದು ಹಾದು ಹೋಗಿರುವ ಭೂಮಿಯ ಒಳ ಭಾಗದ ಪಕ್ಕದಲ್ಲಿ ಹೊಸದಾದ ಕೇಬಲ್ ಲೈನ್ ಅಳವಡಿಸಲಾಗುತ್ತಿದೆ. ಈ ಕಾಮಗಾರಿ ವೇಳೆ ಗ್ಯಾಸ್ ಪೈಪ್ ಲಿಕೇಜ್ ಆಗಿ ಮನೆಗೆ ಅಳವಡಿಸಿದ್ದ ಸ್ಯಾನಿಟ್ರಿ ಮೂಲಕ ಗ್ಯಾಸ್ ತುಂಬಿಕೊಂಡು ಅನಾಹುತ ಸಂಭವಿಸಿದೆ ಎಂದು ಸುತ್ತಮುತ್ತಲಿನ ನಿವಾಸಿಗಳು ಕಾಮಗಾರಿ ಮಾಡುತ್ತಿರುವವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಲದಿನಗಳ ಹಿಂದಷ್ಟೇ ಬೆಂಕಿ ಅನಾಹುತ ಸಂಭವಿಸಿದ್ದು, ಅದು ಮರೆಯುವ ಮುನ್ನವೇ ಮತ್ತೊಂದು ದುರಂತ ನಡೆದಿದೆ. ಗೇಲ್ ಗ್ಯಾಸ್ ಕಂಪನಿ ಹಾಗೂ ಬಿಬಿಎಂಪಿ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು ಪ್ರತಿನಿತ್ಯ ಒಬ್ಬರಲ್ಲ ಒಬ್ಬರು ನಾನಾ ಕಾಮಗಾರಿಗಳಿಗೆಂದು ರಸ್ತೆಯನ್ನು ಅಗೆಯುತ್ತಿದ್ದು, ಈ ಸಂದರ್ಭದಲ್ಲಿ ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೇ ಇರುವದರಿಂದ ಇಂತಹ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಿವೆ. ರಸ್ತೆ ಅಗೆಯಲು ಬರುವವರಿಗೆ ಬಿಬಿಎಂಪಿ ಕಣ್ಮುಚ್ಚಿ ಪರ್ಮಿಷನ್ ನೀಡುತ್ತಿರುವುದೇ ಈ ಸಮಸ್ಯೆಗೆ ಕಾರಣವಾಗಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv