ಬೆಂಗಳೂರು: ಇನ್ಫೋಸಿಸ್ ಕಂಪೆನಿಯ ಚೀಫ್ ಆಪರೇಟಿಂಗ್ ಆಫೀಸರ್ (ಸಿಒಒ) ಯುಬಿ ಪ್ರವೀಣ್ ರಾವ್ ಅವರ ಸಂಬಳ ಏರಿಸಿದ್ದಕ್ಕೆ ಸಂಸ್ಥಾಪಕ ನಾರಾಯಣ ಮೂರ್ತಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಫೆಬ್ರವರಿ ತಿಂಗಳಲ್ಲಿ ನಿರ್ದೇಶಕರ ಮಂಡಳಿಯು ಯು ಬಿ ಪ್ರವೀಣ್ ರಾವ್ ಅವರಿಗೆ ಅಗಾಧ ಮೊತ್ತದ ಸಂಬಳವನ್ನು ಏರಿಸಿದ್ದು ಯಾಕೆ ಎಂದು ಪ್ರಶ್ನಿಸಿ ನಾರಾಯಣ ಮೂರ್ತಿ ಮಾಧ್ಯಮ ಸಂಸ್ಥೆಗೆ ಇಮೇಲ್ ಮಾಡಿದ್ದಾರೆ.
ಕಂಪೆನಿಯ ಹೆಚ್ಚಿನ ನೌಕರರಿಗೆ ಶೇ.6ರಿಂದ ಶೇ.8ರಷ್ಟು ಸಂಬಳವನ್ನು ಏರಿಸಿದರೆ, ಪ್ರವೀಣ್ ರಾವ್ ಅವರಿಗೆ ಶೇ.60ರಿಂದ ಶೇ.70ರಷ್ಟು ಸಂಬಳ ಏರಿಸಿದ್ದು ಸರಿಯಲ್ಲ ಎಂದಿದ್ದಾರೆ. ಈ ರೀತಿ ಸಂಬಳ ಏರಿಸಿದ್ದು ಕಂಪೆನಿಯ ನೌಕರರಲ್ಲಿ ಆಡಳಿತ ವರ್ಗ ಮತ್ತು ನಿರ್ದೇಶಕ ಮಂಡಳಿಯ ಮೇಲಿರುವ ವಿಶ್ವಾಸ ಕಡಿಮೆಯಾಗಲಿದೆ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಸ್ಟಾರ್ಟ್ಅಪ್ ಕಂಪೆನಿಗಳಲ್ಲಿ ಟೆಕ್ಕಿಗಳಿಗೆ ವಿಶ್ವದಲ್ಲೇ ಬೆಂಗಳೂರಿನಲ್ಲಿ ಕಡಿಮೆ ಸಂಬಳ: ಯಾವ ನಗರದಲ್ಲಿ ಎಷ್ಟು ಸಂಬಳ?
ಪ್ರವೀಣ್ ನನ್ನು 1985ರಲ್ಲಿ ನಾನೇ ನೇಮಕ ಮಾಡಿದ್ದೆ. ನಾನು ಇನ್ಫೋಸಿಸ್ನಲ್ಲಿ ಇದ್ದಾಗ ಆತನನ್ನು ಬೆಳೆಸಿದ್ದೆ. ಆದರೆ ಆ ಬಳಿಕ ಆತನನ್ನು ಸೈಡ್ಲೈನ್ ಮಾಡಲಾಯಿತು. 2013ರಲ್ಲಿ ನಾನು ಇನ್ಫಿಗೆ ಮರಳಿದಾಗ ಪ್ರವೀಣ್ ಕಾರ್ಯಕಾರಿ ಮಂಡಳಿಯಲ್ಲಿ ಇರಲಿಲ್ಲ. ವಿಶಾಲ್ ಸಿಕ್ಕಾ ಅವರನ್ನು ಸಿಇಒ ಹುದ್ದೆಗೆ ನೇಮಕ ಮಾಡಿದಾಗ ಪ್ರವೀಣ್ ರಾವ್ನನ್ನು ಇಒಒ ಹುದ್ದೆಗೆ ಏರಿಸಲಾಯಿತು. ಈಗ ಶೇ.60-70ರಷ್ಟು ಸಂಬಳ ಏರಿಕೆಯ ಆಕ್ಷೇಪಕ್ಕೂ ಪ್ರವೀಣ್ಗೂ ಯಾವುದೇ ಸಂಬಂಧವಿಲ್ಲ ಎಂದು ಮೂರ್ತಿ ಸ್ಪಷ್ಟಪಡಿಸಿದ್ದಾರೆ.
ಈಗ ಎಷ್ಟು ಸಂಬಳ:
ಪ್ರವೀಣ್ ರಾವ್ಗೆ ಒಟ್ಟು ವಾರ್ಷಿಕವಾಗಿ 12.5 ಕೋಟಿ ರೂ. ಪಡೆಯುತ್ತಿದ್ದಾರೆ. ಇದರಲ್ಲಿ 4.62 ಕೋಟಿ ರೂ. ಸಂಬಳ, 3.88 ಕೋಟಿ ರೂ. ಪರಿಹಾರ, 4 ಕೋಟಿ ರೂ. ಸ್ಟಾಕ್ ಕಾಂಪನ್ಸೇಶನ್ ಪಡೆಯುತ್ತಿದ್ದಾರೆ.
ಇದನ್ನೂ ಓದಿ: ಟೀಂ ಇಂಡಿಯಾದಲ್ಲಿ ಯಾರಿಗೆ ಎಷ್ಟು ಸಂಬಳ? ಕೋಚ್ ಗಳಿಗೆ ಎಷ್ಟು ಸಿಗುತ್ತೆ?