ಗದಗ: ಜಿಲ್ಲೆಯಾದ್ಯಂತ ಮಳೆ ಸಾಕಷ್ಟು ಅವಾಂತರ ಸೃಷ್ಟಿಸಿದೆ. ಕಾರಿನೊಂದಿಗೆ ನಾಲ್ವರು ಹಳ್ಳದಲ್ಲಿ ಕೊಚ್ಚಿ ಹೋಗಿದ್ದು, ಅದೃಷ್ಟವಶಾತ್ ಬದುಕುಳಿದು ಬಂದ ಘಟನೆ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ನೆಲೋಗಲ್ ಬಳಿ ನಡೆದಿದೆ.
ಲಕ್ಷ್ಮೇಶ್ವರದಿಂದ ಹೆಬ್ಬಾಳ ಕಡೆಗೆ ನಾಲ್ವರು ಕಾರಿನಲ್ಲಿ ಹೊರಟಿದ್ದರು. ನೆಲೋಗಲ್ ಬಳಿ ಹಳ್ಳವೊಂದು ತುಂಬಿ ಹರಿಯುತ್ತಿದ್ದು, ರಾತ್ರಿ ಸಮಯವಾದ್ದರಿಂದ ನೀರು ಕಡಿಮೆ ಇರಬಹುದೆಂದು ತಿಳಿದು ದಾಟುವ ದುಸ್ಸಾಹಸಕ್ಕೆ ಮುಂದಾಗಿದ್ದಾರೆ. ನೀರಿನ ರಭಸಕ್ಕೆ ಕಾರು ಕೊಚ್ಚಿ ಹೋಗುತ್ತಿದ್ದಂತೆ ನಾಲ್ವರೂ ಹೊರಗೆ ಜಿಗಿದು, ಈಜಿ ದಡ ಸೇರಿದ್ದಾರೆ. ತಕ್ಷಣ ಸ್ಥಳಿಯರು ಅವರ ರಕ್ಷಣೆಗೆ ಮುಂದಾಗಿದ್ದಾರೆ. ಇದನ್ನೂ ಓದಿ: ಮದ್ವೆಯಾಗಲೆಂದು ಹುಡುಗಿ ನೋಡ್ಕೊಂಡು ಬರಲು ಹೋದ ಯುವಕ ನೀರುಪಾಲು
ಕಾರಿನಲ್ಲಿದ್ದ ಹೆಬ್ಬಾಳ ಗ್ರಾಮದ ಚನ್ನವೀರಗೌಡ ಪಾಟೀಲ್, ಪ್ರಭು ಮನ್ಸೂರ್, ಬಸನಗೌಡ ತೆಗ್ಗಿನಮನಿ ಹಾಗೂ ಕನಕವಾಡ ನಿವಾಸಿ ವಿರೇಶ್ ಡಂಬಳ ಅದೃಷ್ಟವಶಾತ್ ಬಚಾವ್ ಆಗಿದ್ದಾರೆ. ಕಾರು ಮಾತ್ರ ತೇಲಿ ಹೋಗಿ, ಸೇತುವೆಯಿಂದ ಸುಮಾರು 100 ಮೀ. ದೂರದ ಚೆಕ್ ಡ್ಯಾಮ್ನಲ್ಲಿ ಸಿಲುಕಿಕೊಂಡಿದೆ. ಸ್ಥಳಕ್ಕೆ ಶಿರಹಟ್ಟಿ ಸಿಪಿಐ ವಿಕಾಸ್ ಲಮಾಣಿ ಹಾಗೂ ಲಕ್ಷ್ಮೇಶ್ವರ ತಾಲೂಕು ಅಧಿಕಾರಿಗಳು ಭೇಟಿನೀಡಿದ್ದಾರೆ. ಇದನ್ನೂ ಓದಿ: ತಪ್ಪಿತು ಭಾರೀ ದುರಂತ – ಆಕ್ಸೆಲ್ ಕಟ್, ಅಡ್ಡಾದಿಡ್ಡಿ ಸಂಚರಿಸಿದ ಬಿಎಂಟಿಸಿ ಬಸ್
ಮಳೆ ಪ್ರಮಾಣ ಜೋರಾಗುತ್ತಿರುವುದರಿಂದ ಚೆಕ್ ಡ್ಯಾಮ್ ನಿಂದ ಕಾರನ್ನು ಹೊರ ತೆಗೆಯುವುದು ಸದ್ಯಕ್ಕೆ ಕಷ್ಟವಾಗಿದೆ. ಮಳೆ ನಿಂತ ಬಳಿಕ ಕಾರನ್ನು ಹೊರತೆಗೆಯುವ ಸಾಧ್ಯತೆ ಇದೆ. ಸೇತುವೆ ಮೇಲ್ಭಾಗದಲ್ಲಿ ನೀರು ತುಂಬಿ ಹರಿಯುತ್ತಿರುವುದರಿಂದ ಜನರು ಓಡಾಡದಂತೆ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.