ಕೊಪ್ಪಳ: ಬಿಜೆಪಿ ಇವತ್ತು ಮುಳುಗುವ ಹಡಗು ಆಗುತ್ತಿದೆ. ಮೋದಿ ಸಾಧನೆ ಎಂದು ಹೇಳುವ ಕಳ್ಳರನ್ನು ನಂಬಲು ನೀವು ಹೋಗಬೇಡಿ. ಯಾರು ಯಾರು ನಿಮ್ಮ ಓಣಿಯಲ್ಲಿ ಬಂದು ಮೋದಿ ಸಾಧನೆ ಎಂದು ಹೇಳುತ್ತಾರೋ ಅವರಿಗೆ ಇಲ್ಲಿಂದ ಹೋಗುತ್ತೀಯಾ ಅಥವಾ ನಮ್ಮ ಸಾಧನೆ ತೋರಿಸ್ಲಾ ಎಂದು ಹೇಳಿಬಿಡಿ. ಈ ಮೂಲಕ ನಿಮ್ಮ ಗಲ್ಲಿಯ ಸಾಧನೆ ತೋರಿಸಿ ಓಡಿಸಿ ಎಂದು ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಕಿವಿ ಮಾತು ಹೇಳಿದ್ರು.
ಮಂಗಳವಾರ ರಾತ್ರಿ ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಲ್ಲಿಯ ಕೆಲವು ಬಿಜೆಪಿ ಭಕ್ತರು, ಮೋದಿ ಭಕ್ತರು ಅವರಿಗೆ ಏನೂ ಕಾಣುವುದಿಲ್ಲ. ಅವರಿಗೆ ಕಾಮಾಲೆ ಬಂದಿದೆ. ಎಲ್ಲಿ ಬೇಕು ಅಲ್ಲಿ ಸುಮ್ನೆ ಮೋದಿ, ಮೋದಿ ಎಂದು ಕೂಗುತ್ತಾರೆ. ಮೋದಿ ಏನು ಮಾಡಿದ್ದಾರೆ. ಮೋದಿ ಸಾಧನೆ ನೋಡಿ ಎಂದು ಹೇಳುತ್ತಾರೆ. ಏನಿದು ಎಂದು ಅವರು ಸ್ವಲ್ಪ ಪಟ್ಟಿ ಮಾಡಿ ತೋರಿಸಲಿ ಎಂದು ಸವಾಲೆಸೆದ್ರು.
ನಿಮ್ಮ ಹಾಗೂ ಊರಿನ ಅಭಿವೃದ್ಧಿ ಕುಂಠಿತವಾಗುತ್ತಿದೆ. ಜಾತಿ ಬೀಜ ಜಾಸ್ತಿ ಬೆಳೆಸುತ್ತಿದ್ದಾರೆ. ಇಂದು ಬಿಜೆಪಿ ಹಾಗೂ ಮೋದಿಯವರು ನಮ್ಮ ದೇಶದಲ್ಲಿ ಚುನಾವಣೆ ಬಂತು ಅಂದ್ರೆ ದೇಶದ ಜನರಿಗೆ ಪಾಕಿಸ್ತಾನ ನೋಡಿ ಎಂದು ಹೇಳುತ್ತಾರೆ. ನಾವು ಯಾಕೆ ಪಾಕಿಸ್ತಾನವನ್ನು ನೋಡಬೇಕು. ನಮಗೇನು ಗ್ರಹಚಾರ ಕಾದಿದ್ಯಾ ಎಂದು ಪ್ರಶ್ನಿಸಿದ್ರು.
ನಮ್ಮ ದೇಶ ನೋಡೋ ಬದಲು ನಾವು ಪಾಕಿಸ್ತಾನವನ್ನು ನೋಡುವ ಅಗತ್ಯವಿಲ್ಲ. ಮಹಾತ್ಮಗಾಂಧಿ ಅಲ್ಲಿ ನಿಂತರೆ ಅವರನ್ನು ನಾವು ನೋಡುತ್ತೇವೆ. ನಾಥೂರಾಮ್ ಗೋಡ್ಸೆಯನ್ನು ನಾವು ನೋಡಲ್ಲ. ಒಟ್ಟಿನಲ್ಲಿ ಚುನಾವಣೆ ಬಂದ್ರೆ ಬಿಜೆಪಿಯವರು ಪಾಕಿಸ್ತಾನ ನೋಡಿ ಅನ್ನೋದು ಯಾಕೆ ಗೊತ್ತಾ, ನಮ್ಮ ದೇಶದಲ್ಲಿ ಹಿಂದೂ-ಮುಸ್ಲಿಮರು ಹೊಡೆದಾಡಿಕೊಳ್ಳಬೇಕು, ರಕ್ತಪಾತವಾಗಬೇಕು. ಆಗಿ ಬಿಜೆಪಿಗೆ ಮತ ಕೊಡಬೇಕು. ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂದು ಮೋದಿ ಹಾಗೂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ರು.