ಧಾರವಾಡ: ಜನರಿಗೆ ಸುಳ್ಳು ಹೇಳಿ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬಂದಿದ್ದು, 5 ವರ್ಷದಲ್ಲಿ ಹೇಳಿದ ಮಾತಿನಂತೆ ನಡೆದುಕೊಂಡಿಲ್ಲವೆಂದು ಕಾಂಗ್ರೆಸ್ಸಿನ ಮಾಜಿ ಸಚಿವ ವಿನಯ್ ಕುಲಕರ್ಣಿ ಕಿಡಿಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತೈಲದರ ಖಂಡಿಸಿ ಭಾರತ್ ಬಂದ್ ವೇಳೆ ಕೆಲವರು ತಮ್ಮ ಫೇಸ್ ಬುಕ್ ನಲ್ಲಿ ನೂರು ರೂಪಾಯಿ ಆದರೂ ನಾವು ಮೋದಿಗೆ ಓಟ್ ಹಾಕುತ್ತೇವೆ ಎಂದು ಹಾಕಿಕೊಂಡಿದ್ದರು. ಇದನ್ನು ಯಾವುದೇ ಸಾರ್ವಜನಿಕರು ಹಾಕಿಲ್ಲ. ಬಿಜೆಪಿಯವರೇ ಈ ರೀತಿ ಪೋಸ್ಟ್ ಗಳನ್ನು ಫೇಸ್ಬುಕ್ ನಲ್ಲಿ ಹಾಕಿದ್ದಾರೆ. ಬಿಜೆಪಿಯವರು ಸಾಮಾನ್ಯ ಜನರಲ್ಲ. ಮೋದಿಯ ಸುಳ್ಳಿನ ಕಂತೆ ಬಹಳ ದಿನ ನಡೆಯುವುದಿಲ್ಲ ಎಂದರು.
ಜನರಿಗೆ ಸುಳ್ಳು ಹೇಳಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಕಳೆದ 5 ವರ್ಷಗಳಲ್ಲಿ ತಾನು ಹೇಳಿದ್ದ ಮಾತಿನಂತೆ ಎಂದಿಗೂ ನಡೆದುಕೊಂಡಿಲ್ಲ. ಕೆಲವು ದಿನಗಳ ಹಿಂದೆ ರೈತರಿಂದ ಹೆಸರುಕಾಳಿಗೆ ಪ್ರತಿ ಕ್ವಿಂಟಾಲ್ಗೆ 6,800 ರೂಪಾಯಿಯಂತೆ ಖರೀದಿ ಮಾಡುತ್ತೇವೆಂದು ಹೇಳಿ, ಕೇವಲ 3 ರಿಂದ 4 ಕ್ವಿಂಟಾಲ್ ಖರೀದಿ ಮಾಡಿದ್ದರು. ಆದರೆ ಖರೀದಿ ಪ್ರಕ್ರಿಯಿಯನ್ನು ಏಕಾಏಕಿ ನಾಲ್ಕೇ ದಿನಕ್ಕೆ ನಿಲ್ಲಿಸಿದ್ದಾರೆ. ಇವರ ಸರ್ಕಾರದ ಅವಧಿಯಲ್ಲಿ ರೈತರ ಪರಿಸ್ಥಿತಿ ಅಧೋಗತಿಗೆ ತಲುಪಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ವೇಳೆ ಜನಾರ್ದನ ರೆಡ್ಡಿ ಕುರಿತು ಮಾತನಾಡಿದ ಅವರು, ಇಂಥವರನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದಕ್ಕೆ ಅವರ ಪರಿಸ್ಥಿತಿ ಏನಾಗಿದೆ ಎಂಬುದು ಗೊತ್ತಾಗುತ್ತಿದೆ. ಪ್ರಧಾನಿ ಮೋದಿಯವರು ಸಿಬಿಐ ಪ್ರಕರಣದಲ್ಲಿ ಏನು ಮಾಡಿದ್ದಾರೆ ಎಂಬುದು ಗೊತ್ತಿದೆ. ಇಂತಹ ಹಲವು ಪ್ರಕರಣಗಳಲ್ಲಿ ರಫೇಲ್ ಕೂಡ ಒಂದು. ಈ ದೇಶದಲ್ಲಿ ಯಾರಿಗೂ ಸ್ವತಂತ್ರವೇ ಇಲ್ಲವೆಂಬುವಂತೆ ಆಗಿದೆ. ರೆಡ್ಡಿ ಪ್ರಕರಣದ ಬಗ್ಗೆ ನನಗೆ ಯಾವುದೇ ಮಾಹಿತಿ ಗೊತ್ತಿಲ್ಲ. ಗೊತ್ತಿಲ್ಲದೇ ಮಾತನಾಡಲ್ಲ. ಬಿಜೆಪಿ ವಿರೋಧ ಅಲೆಗೆ ಉಪಚುನಾವಣೆಯ ಫಲಿತಾಂಶಗಳೇ ಸಾಕ್ಷಿ. ನಮಗೆ ಉಪಚುನಾವಣೆಯಲ್ಲಿ ಅಭೂತಪೂರ್ವ ಜಯ ತಂದು ಕೊಟ್ಟ ಜನರಿಗೆ ಧನ್ಯವಾದ ಹೇಳುತ್ತೇನೆ ಎಂದು ತಿಳಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv