ಬಾಗಲಕೋಟೆ: ಬಿಜೆಪಿ ನೂತನ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ರಾಜಕೀಯ ಪರಿಪಕ್ವತೆಯೇ ಇಲ್ಲ ಎಂದು ಮಾಜಿ ಸಚಿವ ಎಸ್.ಆರ್.ಪಾಟೀಲ್ ಗುಡುಗಿದ್ದಾರೆ.
ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಬಂಧನದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯನವರ ಕೈವಾಡವಿದೆ ಎಂಬ ನಳಿನ್ ಕುಮಾರ್ ಕಟೀಲ್ ಹೇಳಿಕೆಗೆ ಎಸ್ಆರ್ ಪಾಟೀಲ್ ತಿರುಗೇಟು ನೀಡಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಕನಿಷ್ಠ ಜ್ಞಾನವಿಲ್ಲ. ಜಾರಿ ನಿರ್ದೇಶನಾಲಯ (ಇಡಿ) ಮತ್ತು ಆದಾಯ, ತೆರಿಗೆ ಸಂಸ್ಥೆಗಳು ಕೇಂದ್ರ ಸರ್ಕಾರದ ಅಡಿಯಲ್ಲಿ ಕೆಲಸ ಮಾಡುತ್ತವೆ. ಕಟೀಲ್ ಅವರು ಅಪ್ರಬುದ್ಧ ಹೇಳಿಕೆ ನೀಡಿದ್ದಾರೆ. ಇಂತವರಿಂದ ರಾಜ್ಯದ ಹಾಗೂ ದೇಶದ ಜನರು ಏನು ನಿರೀಕ್ಷೆ ಮಾಡಲು ಸಾಧ್ಯ ಎಂದು ವ್ಯಂಗ್ಯವಾಗಡಿದ್ದಾರೆ.
ನಳಿನ್ ಕುಮಾರ್ ಕಟೀಲ್ ಅಷ್ಟು ಅಪ್ರಬುದ್ಧ ಇದಾರೆ ಅಂತ ನಾನು ಭಾವಿಸಿರಲಿಲ್ಲ. ಅವರಿಗೆ ಯಾವ ಸಂಸ್ಥೆಗಳು ಎಲ್ಲಿ ಕೆಲಸ ಮಾಡುತ್ತವೆ ಎನ್ನುವುದು ಗೊತ್ತಿಲ್ಲ. ಇದು ಬಿಜೆಪಿ ರಾಜ್ಯ ಘಟಕದ ದುರ್ದೈವ ಎಂದು ವಾಗ್ದಾಳಿ ನಡೆಸಿದರು.
ಸಂವಿಧಾನಿಕ ಸಂಸ್ಥೆಗಳನ್ನು ಬಳಸಿಕೊಂಡು ಕಾಂಗ್ರೆಸ್ ನಾಯಕರ ನೈತಿಕ ಸ್ಥೈರ್ಯ ಕುಗ್ಗಿಸುತ್ತೇವೆ ಎಂಬುದು ಸಾಧ್ಯವಿಲ್ಲ. ಕಾಂಗ್ರೆಸ್ ನಾಯಕರ ನೈತಿಕ ಸ್ಥೈರ್ಯ ಯಾವುದೇ ಕಾರಣಕ್ಕೂ ಕುಗ್ಗುವುದಿಲ್ಲ. ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತೇವೆಂಬ ಬಿಜೆಪಿ ನಾಯಕರ ವರ್ತನೆ ತಿರುಕನ ಕನಸು ಲೇವಡಿ ಮಾಡಿದರು.
ನೂತನ ಮೋಟರ್ ಕಾಯ್ದೆ ಅಡಿ ಭಾರೀ ದಂಡ ವಸೂಲಿ ಮಾಡುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಮಾಜಿ ಸಚಿವರು, ಕರ್ನಾಟಕ ಸಹ ದೇಶದ ಒಕ್ಕೂಟ ವ್ಯವಸ್ಥೆಯ ಒಂದು ರಾಜ್ಯ. ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಗುಜರಾತ್ನವರೇ ಆಗಿದ್ದರೂ ಅಲ್ಲಿ ದಂಡವನ್ನು ಶೇ.50 ರಷ್ಟು ಇಳಿಸಿದ್ದಾರೆ. ಅದು ನಮ್ಮ ರಾಜ್ಯಕ್ಕೂ ಅನ್ವಯವಾಗಬೇಕು. ದಂಡ ಹೆಚ್ಚು ಹಾಕುವುದರಿಂದ ಸಾರ್ವಜನಿಕರ ಜೇಬಿಗೆ ಕತ್ತರಿ ಬಿದ್ದಿದೆ. ಇದು ಅಧಿಕಾರಿಗಳಿಗೆ ಹೆಚ್ಚು ಅನುಕೂಲವಾಗಿದೆ ಎಂದು ಹೇಳಿದರು.