ರಾಯಚೂರು: ಮಾಜಿ ಸಚಿವ ಕೆ.ಶಿವನಗೌಡ ನಾಯಕ್ (K Shivanagouda Naik) ಈಗ ನವಿಲುಗರಿ (Peacock Feather) ಹಾರ ವಿವಾದದಲ್ಲಿ ಸಿಲುಕಿದ್ದಾರೆ. ಜುಲೈ 14 ರಂದು ತಮ್ಮ ಹುಟ್ಟುಹಬ್ಬದ ಸಂಭ್ರಮದ ವೇಳೆ ನವಿಲುಗರಿಯ ಹಾರ ಧರಿಸಿದ ಫೋಟೋಗಳು ಎಲ್ಲೆಡೆ ವೈರಲ್ ಆಗಿವೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ ಉಲ್ಲಂಘನೆ ಆರೋಪದಲ್ಲಿ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ಶಿವನಗೌಡ ನಾಯಕ್ ವಿರುದ್ಧ ದೂರು ನೀಡಿದ್ದಾರೆ.
ಸಾಮಾಜಿಕ ಕಾರ್ಯಕರ್ತ ಕಲ್ಲಹಳ್ಳಿ ಇಮೇಲ್ ಮೂಲಕ ದೂರು ನೀಡಿದ್ದು, ರಾಷ್ಟ್ರಪಕ್ಷಿ ನವಿಲಿನ ಗರಿಯಿಂದ ತಯಾರಿಸಿದ ಹಾರವನ್ನ ಧರಿಸಿ ಸಾರ್ವಜನಿಕವಾಗಿ ಪ್ರದರ್ಶನ ಮಾಡಲಾಗಿದೆ. ಇದರಿಂದ ಸಾರ್ವಜನಿಕರಲ್ಲಿ ತಪ್ಪು ಸಂದೇಶ ಮೂಡಿ ಇತರರು ಕೂಡ ಪ್ರೇರಿತರಾಗುವ ಅಪಾಯವಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯನ್ನ ಮಾಜಿ ಸಚಿವ ಶಿವನಗೌಡ ನಾಯಕ್ ಉಲ್ಲಂಘಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ನವಿಲು ಗರಿಯ ಮೂಲ ಪತ್ತೆ ಹಚ್ಚಿ ಸಂಬಂಧಪಟ್ಟವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ತಮ್ಮೂರಿನ ರಸ್ತೆಗಾಗಿ ಪ್ರಧಾನಿ ಮೋದಿಗೆ ಪತ್ರ ಬರೆದ 8ನೇ ತರಗತಿ ವಿದ್ಯಾರ್ಥಿನಿ
ಶಿವನಗೌಡ ನಾಯಕ್ ಆಪ್ತರಾದ ಬೆಂಗಳೂರಿನ ಕೆಲ ಯುವಕರು ನವಿಲುಗರಿಯ ಹಾರವನ್ನ ಹಾಕಿ ಸನ್ಮಾನಿಸಿದ್ದಾರೆ. ಪ್ರಕರಣ ಕುರಿತು ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಕೆ.ಶಿವನಗೌಡ ನಾಯಕ್, ಹುಟ್ಟುಹಬ್ಬ ಹಿನ್ನೆಲೆ ಶುಭಾಶಯ ಕೋರಲು ಮನೆಗೆ ಸುಮಾರು ಜನ ಬಂದಿದ್ದರು. ಆಗ ಬಹುಶಃ ಬೆಂಗಳೂರಿನ ಕೆಲ ಕಾರ್ಪೊರೇಟರ್ಗಳು ನವಿಲುಗರಿ ಹಾರ ಹಾಕಿದ್ದಾರೆ. ಆ ಸಮಯದಲ್ಲಿ ನಾನು ಅಷ್ಟಾಗಿ ಗಮನಿಸಿರಲಿಲ್ಲ. ಅಸಲಿ ನವಿಲು ಗರಿಯ ಹಾರ ಅದು. ಯಾರೋ ದೂರು ನೀಡಿದ್ದಾರೆ ಎಂದು ತಿಳಿಯಿತು. ಹಾರವನ್ನು ತೆಗೆದು ಇಟ್ಟಿದ್ದೇನೆ. ವಿಚಾರಣೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಬಂದಾಗ ಹಾರವನ್ನ ಮರಳಿಸುತ್ತೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಉದ್ದೇಶಪೂರ್ವಕವಾಗಿ ಸಿಲುಕಿಸಲಾಗಿದೆ, ನನಗೂ ಕೊಲೆಗೂ ಯಾವುದೇ ಸಂಬಂಧವಿಲ್ಲ: ಬೈರತಿ ಬಸವರಾಜ್