ಬೆಂಗಳೂರು: ಸಮ್ಮಿಶ್ರ ಸರ್ಕಾರದ ಬಜೆಟ್ ನಲ್ಲಿ ಅಲ್ಪ ಸಂಖ್ಯಾತರನ್ನು ಕಡೆಗಣಿಸಲಾಗಿದೆ ಎಂದು ಮಾಜಿ ಸಚಿವರುಗಳಾದ ಎಚ್ ಕೆ ಪಾಟೀಲ್ ಹಾಗೂ ತನ್ವೀರ್ ಸೇಠ್ ಅವರು ಸಿಎಂ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ
ಮಾಧ್ಯಮಗಳ ಜೊತೆ ಮಾತನಾಡಿದ ಎಚ್ ಕೆ ಪಾಟೀಲ್, ಬಜೆಟ್ ನಲ್ಲಿ ಉತ್ತರ ಕರ್ನಾಟಕವನ್ನು ಸಂಪೂರ್ಣವಾಗಿ ನಿರ್ಲಕ್ಷ್ಯಿಸಲಾಗಿದೆ. ಯಾಕಂದ್ರೆ ಉತ್ತರ ಕರ್ನಾಟಕ್ಕೆ ಯಾವುದೇ ಯೊಜನೆಗಳನ್ನು ಪ್ರಸ್ತಾಪ ಮಾಡಿಲ್ಲ. ಇದರ ಜೊತೆಗೆ ಅಲ್ಪ ಸಂಖ್ಯಾತರ ವಿಚಾರದಲ್ಲಿ ಬಹಳ ದೊಡ್ಡ ಘೋಷಣೆಗಳನ್ನು ಅಪೇಕ್ಷಿಸಿದ್ದೆವು. ಈ ಸರ್ಕಾರ ಬರೋದಿಕ್ಕೆ ಬಹಳಷ್ಟು ಕಾರಣಕರ್ತರಾಗಿದ್ದವರು ಅಲ್ಪಸಂಖ್ಯಾತ ಸಮುದಾಯ. ಹೀಗಾಗಿ ಈ ಸಮುದಾಯ ಈ ಸರ್ಕಾರದಿಂದ ಬಹಳಷ್ಟು ನಿರೀಕ್ಷೆ ಮಾಡಿತ್ತು. ಆದರೆ ಕುಮಾರಸ್ವಾಮಿ ಅವರು ಮಂಡಿಸಿದ್ದ ಈ ಬಜೆಟ್ ನಲ್ಲಿ ನಿರೀಕ್ಷೆ ಹುಸಿಯಾಗಿದೆ ಅಂತ ಅವರು ಹೇಳಿದ್ರು.
ರೈತರ ಸಾಲಮನ್ನಾ ವಿಚಾರದಲ್ಲಿ ಬಹಳ ಗಂಭೀರ ಹಾಗೂ ಧೈರ್ಯವಾಗಿರುವಂತಹ ನಿರ್ಣಯವನ್ನು ತೆಗೆದುಕೊಂಡಿದ್ದಾರೆ. 34 ಸಾವಿರ ಕೋಟಿ ರೂಪಾಯಿ ರೈತ ಮೇಲಿನ ಹೊರೆಯನ್ನು ಇಂದು ಸರ್ಕಾರ ಸಂಪೂರ್ಣವಾಗಿ ಕೆಳಗಿಳಿಸಿದೆ. ಕಾಂಗ್ರೆಸ್ ಕೊಟ್ಟಿರುವಂತಹ ಬಲದಿಂದ ರೈತರ ಮೇಲಿನ ಹೊರೆ ಕಡಿಮೆಯಾಗಿದೆ. ಇದು ಬಹಳ ಸಂತಸದ ವಿಚಾರವಾಗಿದೆ ಅಂದ್ರು.
ತನ್ವೀರ್ ಸೇಠ್ ಅಸಮಾಧಾನ: ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗಿನ ಯೋಜನೆಗಳು ಮುಂದುವರಿಯುವುದು ಸಂತಸದ ವಿಚಾರವಾಗಿದೆ. ಆದ್ರೆ ನಾವು ಅಲ್ಪಸಂಖ್ಯಾತರಿಗೆ ಹೊಸದಾಗಿ ಕೆಲವೊಂದನ್ನು ನಿರೀಕ್ಷೆ ಮಾಡಿದ್ದೆವು. ಆದ್ರೆ ಇದೀಗ ನಮ್ಮ ನಿರೀಕ್ಷೆ ಹುಸಿಯಾಗಿದೆ. 78 ಪುಟಗಳ ಆಯವ್ಯಯದಲ್ಲಿ ಅಲ್ಪಸಂಖ್ಯಾತ ಎಂಬ ಪದ ಎಲ್ಲೂ ಇಲ್ಲ. ಸಾಕಷ್ಟು ಬೇಡಿಕೆ ಇತ್ತು. ಮುಜರಾಯಿಗೆ ಘೋಷಣೆ ಮಾಡಿದ್ರು. ಆದ್ರೆ ಹಜ್ ಪ್ರಸ್ತಾವನೆಯನ್ನ ಮಾಡಿಲ್ಲ. ಒಟ್ಟಿನಲ್ಲಿ ಸಾರಥ್ಯ ವಹಿಸಿದ್ದವರು ಎಲ್ಲರ ವಿಶ್ವಾಸ ತೆಗೆದುಕೊಳ್ಳಬೇಕಾಗಿರುವುದು ಅವರಿಗೆ ಬಿಟ್ಟಂತಹ ವಿಚಾರವಾಗಿದ್ದು, ನಾವೇನು ಮಂಡನೆ ಮಾಡಬೇಕೋ ಅದನ್ನು ಚರ್ಚೆ ಮೂಲಕ ಮಾಡುತ್ತೇನೆ ಅಂತ ಮಾಜಿ ಶಿಕ್ಷಣ ಸಚಿವ ತನ್ವೀರ್ ಸೇಠ್ ಕೂಡ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ
ಹಳೇ ಮೈಸೂರು ಭಾಗಕ್ಕೆ ಸಿಎಂ ಹೆಚ್ಚಿನ ಒತ್ತು ನೀಡಿದ್ದು, ಉತ್ತರ ಕರ್ನಾಟಕ. ಮುಂಬೈ ಕರ್ನಾಟಕ, ಮಲೆನಾಡು, ಕರಾವಳಿ ಭಾಗಕ್ಕೂ ಏನೂ ಕೊಟ್ಟಿಲ್ಲ. ಇಡೀ ಬಜೆಟನನ್ನು ಗಮನಿಸಿದ್ರೆ ಹಾಸನ, ಮೈಸೂರು, ಚನ್ನಪಟ್ಟಣ, ಕನಕಪುರ ಹಾಗೂ ರಾಮನಗರಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಒತ್ತು ನೀಡಿಲ್ಲ ಎಂದು ಕಿಡಿಕಾರಿದ್ದಾರೆ. ಈ ಮೂಲಕ ಸಮ್ಮಿಶ್ರ ಸರ್ಕಾರದ ಬಜೆಟ್ ಗೆ ಕಾಂಗ್ರೆಸ್ ನಲ್ಲೇ ಬಹಿರಂಗ ಅಸಮಾಧಾನ ಸ್ಫೋಟಗೊಂಡಿದೆ.