ಬೆಂಗಳೂರು: ಸಂಜಯನಗರದಲ್ಲಿರುವ ಮಾಜಿ ಸಚಿವ ಮಹದೇವಪ್ಪ ನಿವಾಸದಲ್ಲಿ ಸಿದ್ದರಾಮಯ್ಯ ಆಪ್ತರು ಗೌಪ್ಯ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಸಿದ್ದರಾಮಯ್ಯ ಆಪ್ತ ಕೆಲವು ಶಾಸಕರು, ಪರಿಷತ್ ಸದಸ್ಯರು ಹಾಗೂ ಮಾಜಿ ಸಂಸದರು, ಸಚಿವರುಗಳು ಸೇರಿದಂತೆ 15 ಮುಖಂಡರು ಭಾಗಿಯಾಗಿದ್ದರು.
ವಿಪಕ್ಷ ನಾಯಕನ ಸ್ಥಾನಕ್ಕೆ ಹಾಗೂ ಸಿಎಲ್ಪಿ ನಾಯಕನ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ಒಂದು ತಿಂಗಳು ಕಳೆದರೂ ಹೈ ಕಮಾಂಡ್ ಮನವೊಲಿಕೆಗೆ ಮುಂದಾಗದ ಹಿನ್ನೆಲೆಯಲ್ಲಿ ಈ ಸಭೆ ನಡೆಸಲಾಗಿದೆ.
ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಬೇರೆ ಮುಖಂಡರ ಅಭಿಪ್ರಾಯಕ್ಕೆ ಮಣೆ ಹಾಕದೇ ಪರಮೇಶ್ವರ್ ಅವರಿಗೆ ಮಾತ್ರ ಮಣೆ ಹಾಕಿದ್ದಾರೆ. ಅಲ್ಲದೇ ಲಾಬಿ ಮಾಡಲು ದೆಹಲಿಗೆ ಯಾರೂ ಬಾರದಂತೆ ಸೂಚಿಸಿದ್ದಾರೆ. ಈ ಎಲ್ಲಾ ಬೆಳವಣಿಗೆಯಿಂದ ಆತಂಕಕ್ಕೆ ಒಳಗಾದ ಸಿದ್ದರಾಮಯ್ಯ ಬಣ ಸೋಮವಾರದ ನಂತರ ದೆಹಲಿಗೆ ಹೋಗಿ ಲಾಬಿ ಮಾಡುವ ಸಂಬಂಧ ಮಹದೇವಪ್ಪ ನಿವಾಸದಲ್ಲಿ ಸಭೆ ನಡೆಸಿದ್ದಾರೆ.
ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಭೇಟಿ ಸಾಧ್ಯವಿಲ್ಲ. ಅದರ ಬದಲು ಉಳಿದ ಎಐಸಿಸಿ ನಾಯಕರ ಭೇಟಿ ಮಾಡಿ ಸಿದ್ದರಾಮಯ್ಯ ಮನವೊಲಿಕೆಗೆ ಮುಂದಾಗುವಂತೆ ಸೋನಿಯಾ ಗಾಂಧಿ ಅವರನ್ನು ಒಪ್ಪಿಸಲು ಮಹದೇವಪ್ಪ ನೇತೃತ್ವದಲ್ಲಿ ದೆಹಲಿಗೆ ತೆರಳಲು ಬಣ ನಿರ್ಧಾರ ಕೈಗೊಂಡಿದೆ. ಬಹುತೇಕ ಸೋಮವಾರವೇ ಸಿದ್ದರಾಮಯ್ಯ ಬಣ ದೆಹಲಿಗೆ ತೆರಳುವ ಸಾಧ್ಯತೆಯಿದೆ.