ವಿಶ್ವಸಂಸ್ಥೆ: ರಷ್ಯಾ ಮತ್ತು ಉಕ್ರೇನ್ ನಡುವೆ (Russia Ukraine War) ಶಾಂತಿಯನ್ನು ಸ್ಥಾಪಿಸಲು ಮಧ್ಯಸ್ಥಿಕೆ ವಹಿಸಲು ಭಾರತದ (India) ಪ್ರಧಾನಿ ನರೇಂದ್ರ ಮೋದಿ (Narendra Modi), ಪೋಪ್ ಫ್ರಾನ್ಸಿಸ್ ಮತ್ತು ವಿಶ್ವಸಂಸ್ಥೆಯ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರಸ್ ಅವರನ್ನು ಒಳಗೊಂಡ ಸಮಿತಿಯನ್ನು ರಚಿಸಬೇಕು ಎಂದು ಮೆಕ್ಸಿಕೋ ವಿಶ್ವಸಂಸ್ಥೆಯಲ್ಲಿ (United Nations) ಪ್ರಸ್ತಾಪಿಸಿದೆ.
ನ್ಯೂಯಾರ್ಕ್ನಲ್ಲಿ ನಡೆದ ವಿಶ್ವಸಂಸ್ಥೆಯ ಸೆಕ್ಯುರಿಟಿ ಕೌನ್ಸಿಲ್ ಚರ್ಚೆಯಲ್ಲಿ ಭಾಗವಹಿಸಿದ ಮೆಕ್ಸಿಕೊದ ವಿದೇಶಾಂಗ ಸಚಿವ ಮಾರ್ಸೆಲೊ ಲೂಯಿಸ್ ಎಬ್ರಾಡ್ ಕ್ಯಾಸೌಬಾನ್ ಅವರು ಈ ಪ್ರಸ್ತಾಪವನ್ನು ಮುಂದಿಟ್ಟಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಉಜ್ಬೇಕಿಸ್ತಾನ್ನ ಸಮರ್ಕಂಡ್ನಲ್ಲಿ ನಡೆದ ಶಾಂಘೈ ಸಹಕಾರ ಸಂಘಟನೆಯ 22 ನೇ ಶೃಗಸಭೆಯಲ್ಲಿ ಭೇಟಿಯಾಗಿ, ಇದು ಯುದ್ಧದ ಸಮಯವಲ್ಲ ಎಂದು ತಿಳಿಹೇಳಿದ್ದಾರೆ. ಇದರ ಬೆನ್ನಲ್ಲೇ ಮೆಕ್ಸಿಕೋ ಈ ಪ್ರಸ್ತಾಪವನ್ನು ಮುಂದಿಟ್ಟಿದೆ. ಇದನ್ನೂ ಓದಿ: ರಷ್ಯಾ-ಉಕ್ರೇನ್ ಯುದ್ಧ: ತಕ್ಷಣವೇ ಅಂತ್ಯಗೊಳಿಸಲು ವಿಶ್ವಸಂಸ್ಥೆಯಲ್ಲಿ ಭಾರತ ಕರೆ
ನರೇಂದ್ರ ಮೋದಿ ಪುಟಿನ್ ಅವರಿಗೆ ಇದು ಯುದ್ಧದ ಸಮಯವಲ್ಲ ಎಂದು ಹೇಳಿರುವುದಕ್ಕೆ ಅಮೆರಿಕ, ಫ್ರಾನ್ಸ್, ಬ್ರಿಟನ್ ಸೇರಿದಂತೆ ಪಾಶ್ಚಿಮಾತ್ಯ ರಾಷ್ಟ್ರಗಳು ಮೆಚ್ಚುಗೆ ವ್ಯಕ್ತಪಡಿಸಿವೆ.
ಇದೀಗ ಉಕ್ರೇನ್ ಹಾಗೂ ರಷ್ಯಾ ನಡುವೆ ಶಾಂತಿಯನ್ನು ಸ್ಥಾಪಿಸಲು ನಾವು ಅತ್ಯುತ್ತಮವಾದ ಪ್ರಯತ್ನವನ್ನು ಮಾಡುವುದು ಮುಖ್ಯವಾಗಿದೆ. ಇದಕ್ಕಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿ, ಪೋಪ್ ಫ್ರಾನ್ಸಿಸ್ ಸೇರಿದಂತೆ ಇತರ ರಾಷ್ಟ್ರಗಳ ಮುಖ್ಯಸ್ಥರನ್ನು ಒಟ್ಟುಗೂಡಿಸಿ ಸಮಿತಿಯನ್ನು ಸ್ಥಾಪಿಸಬೇಕು ಎಂದು ಕ್ಯಾಸೌಬಾನ್ ವಿಶ್ವಸಂಸ್ಥೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಪತ್ರಕರ್ತೆ ಹಿಜಬ್ ಧರಿಸದ್ದಕ್ಕೆ ಸಂದರ್ಶನವನ್ನೇ ರದ್ದುಗೊಳಿಸಿದ ಇರಾನ್ ಅಧ್ಯಕ್ಷ
ಮಾತುಕತೆ, ರಾಜತಾಂತ್ರಿಕತೆ ಹಾಗೂ ಪರಿಣಾಮಕಾರಿ ರಾಜಕೀಯ ಮಾರ್ಗಗಳನ್ನು ನಿರ್ಮಿಸುವುದರಿಂದ ಮಾತ್ರವೇ ಶಾಂತಿಯನ್ನು ಸ್ಥಾಪಿಸಬಹುದು ಎಂದು ಮೆಕ್ಸಿಕನ್ ವಿದೇಶಾಂಗ ಸಚಿವ ವಿಶ್ವಸಂಸ್ಥೆಯಲ್ಲಿ ಹೇಳಿದರು.