ಮಂಡ್ಯ: ಅರಣ್ಯ ಇಲಾಖೆಯವರು ಶವಸಂಸ್ಕಾರಕ್ಕೆ ಅಡ್ಡಿ ಪಡಿಸಿದಕ್ಕೆ ಬುಡಕಟ್ಟು ಜನಾಂಗದ ಜನರು ರಸ್ತೆಯಲ್ಲಿ ಬೆಂಕಿ ಹಾಕಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಜಿಲ್ಲೆಯ ನಾಗಮಂಗಲ ತಾಲೂಕಿನ ಶಿಕಾರಿಪುರ ಗ್ರಾಮದಲ್ಲಿ ನಡೆದಿದೆ.
ಇಂದು ಶಿಕಾರಿಪುರ ಗ್ರಾಮದಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಗ್ರಾಮಸ್ಥರು ಮೃತದೇಹವನ್ನು ಈ ಹಿಂದೆ ಅಂತ್ಯಕ್ರಿಯೆ ಮಾಡುತ್ತಿದ್ದ ಜಾಗಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಈ ವೇಳೆ ಇದು ಅರಣ್ಯ ಇಲಾಖೆಗೆ ಸೇರಿದ ಜಾಗವೆಂದು ಹೇಳಿ ಅರಣ್ಯ ಇಲಾಖೆಯವರು ಅಂತ್ಯಕ್ರಿಯೆ ನಡೆಸದಂತೆ ತಡೆದಿದ್ದಾರೆ. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಶ್ರವಣಬೆಳಗೋಳ- ನಾಗಮಂಗಲ ರಸ್ತೆಗೆ ಬೆಂಕಿ ಹಾಕಿ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ.
ಬುಡಕಟ್ಟು ಜನಾಂಗದವರಾದ ನಾವು 100 ವರ್ಷದಿಂದ ಇಲ್ಲೆ ವಾಸಿಸುತ್ತಿದ್ದೇವೆ. ಆದರೆ ಈಗ ಎಕಾಏಕಿ ಗ್ರಾಮವನ್ನು ಖಾಲಿ ಮಾಡಿ, ಶವಸಂಸ್ಕಾರ ಮಾಡಬೇಡಿ ಎಂದು ಅರಣ್ಯ ಇಲಾಖೆಯವರು ಹೇಳುತ್ತಿದ್ದಾರೆ. ನಾವು ಎಲ್ಲಿ ಹೋಗಬೇಕು. ಸರ್ಕಾರದ ವತಿಯಿಂದ ಶಾಲೆ, ಬ್ಯಾಂಕುಗಳಿಂದ ಸಾಲ ಕೂಡ ನಮಗೆ ಕೊಡುತ್ತಾರೆ. ನಮಗೆ ಆಧಾರ್ ಕಾರ್ಡ್, ವೋಟರ್ ಕಾರ್ಡ್ ಎಲ್ಲಾ ನೀಡಿ ಈಗ ಖಾಲಿ ಮಾಡಿ ಎಂದು ಹೇಳುವುದು ಎಷ್ಟು ಸರಿ ಎಂದು ಅರಣ್ಯಾಧಿಕಾರಿಗಳನ್ನು ಗ್ರಾಮಸ್ಥರು ಪ್ರಶ್ನಿಸಿದ್ದಾರೆ.
ಅಷ್ಟೆ ಅಲ್ಲದೇ ಈ ರೀತಿ ತೊಂದರೆ ನೀಡಿದರೆ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದ್ದಾರೆ. ಸ್ಥಳಕ್ಕೆ ಆಗಮಿಸಿದ ನಾಗಮಂಗಲ ಪಟ್ಟಣದ ಗ್ರಾಮಾಂತರ ಠಾಣೆಯ ಪೊಲೀಸರು, ಶವಸಂಸ್ಕಾರ ಮಾಡಲು ಅವಕಾಶ ಮಾಡಿಕೊಡುವಂತೆ ಅರಣ್ಯ ಇಲಾಖೆಯವರಲ್ಲಿ ಮನವಿ ಮಾಡಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv