– ಚಹಾ ಮಾರುವ ಹುಡುಗ ಪ್ರಧಾನಿ ಆಗಬಲ್ಲ ಎಂದು ತೋರಿಸಿದ ಪಕ್ಷ ಬಿಜೆಪಿ
– ಕಾಂಗ್ರೆಸ್ನಲ್ಲಿ ಶಾಸ್ತ್ರಿಗಳು ಬಿಟ್ರೆ ಉಳಿದ ಎಲ್ಲ ಪ್ರಧಾನಿಗಳೂ ಕಳಂಕಿತರು
ಬೆಂಗಳೂರು: ರಾಜಕೀಯ ಪಕ್ಷ ಅಧಿಕಾರ ಹಿಡಿಯಬೇಕಾದರೆ ಆಪರೇಷನ್ ಕಮಲ ಅನಿವಾರ್ಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದರು.
ಬಿಜೆಪಿ ಕಚೇರಿಯಲ್ಲಿ ಯುವ ಮೋರ್ಚಾ ಕಾರ್ಯಕಾರಿಣಿ ಸಭೆ ನಡೆದಿದ್ದು, ಯುವ ಮೋರ್ಚಾ ಕಾರ್ಯಕಾರಿಣಿ ಸಭೆ ಉದ್ಘಾಟಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗಾಂಧಿಯವರು ಸ್ವಾತಂತ್ರ್ಯ ನಂತರ ಭಾರತ ರಾಮರಾಜ್ಯ ಆಗಬೇಕು, ಭಾರತ ಜಾತ್ಯತೀತ ಆಗಬೇಕು ಅನ್ನಲಿಲ್ಲ. ರಾಮನ ಭಾರತ ಆಗಲು ಪ್ರತಿ ವ್ಯಕ್ತಿ ರಾಮ ಆಗಬೇಕು. ವ್ಯಕ್ತಿ ನಿರ್ಮಾಣದಿಂದ ರಾಷ್ಟ್ರ ನಿರ್ಮಾಣದ ಕಾರ್ಯ ಆಗಬೇಕು ಎಂದು ವಿವರಿಸಿದರು.
ಆಪರೇಷನ್ ಕಮಲ ಸಮರ್ಥಿಸಿಕೊಂಡ ಕಟೀಲ್ ಅವರು, ಹಿಂದೆ ಆಪರೇಷನ್ ಕಮಲ ಮಾಡಿದಾಗ ಬಹಳ ಜನ ಕೇಳಿದರು. ಬೇರೆ ಪಕ್ಷಗಳಿಂದ ನಿಮ್ಮ ಪಕ್ಷಕ್ಕೆ ಕರೆದುಕೊಂಡು ಬರುವುದೇ ನಿಮ್ಮ ಕೆಲಸನಾ ಎಂದು ಹಲವು ಜನರು ಹೇಳಿದ್ದಾರೆ. ಆದ್ರೆ ಆಪರೇಷನ್ ಕಮಲ ಅನಿವಾರ್ಯ. ಒಂದು ರಾಜಕೀಯ ಪಕ್ಷ ಅಧಿಕಾರ ಹಿಡಿಯಲು ಇದು ಅನಿವಾರ್ಯವಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಚಹಾ, ಸಿಗರೇಟ್ ತಂದುಕೊಡುವಂತಹ ರೌಡಿಗಳಿಂದ ನಾನೇನು ಕಲಿಯಬೇಕಿಲ್ಲ: ಯತ್ನಾಳ್
ಅಧಿಕಾರಕ್ಕಾಗಿ ಆಪರೇಷನ್ ಕಮಲ ಮಾಡಿರಬಹುದು. ಆದ್ರೆ ನಮ್ಮ ಪಕ್ಷದಲ್ಲಿ ಪಕ್ಷಕ್ಕಾಗಿ ದುಡಿದವರು, ಸಾಮಾನ್ಯ ಕಾರ್ಯಕರ್ತನನ್ನು ಶಾಸಕ ಮಾಡ್ತೀವಿ. ನಮ್ಮದು ಅಧಿಕಾರಕ್ಕಾಗಿ ಆದರ್ಶ ಅಲ್ಲ. ಕಾಂಗ್ರೆಸ್ ನಲ್ಲಿ ಈಗಲೂ ಇಂದಿರಾಗಾಂಧಿ, ಸೋನಿಯಾಗಾಂಧಿ, ರಾಹುಲ್ಗಾಂಧಿಗೆ ಜೈ ಅಂತಾರೆ. ನಾವು ಭಾರತ ಮಾತೆಗೆ ಜೈಕಾರ ಹಾಕ್ತೇವೆ ಎಂದರು.
ಸಾಮಾಜಿಕ ಬದ್ಧತೆಯಿದೆ
ಚಹಾ ಮಾರುವ ಹುಡುಗ ಪ್ರಧಾನಿ ಆಗಬಲ್ಲ ಎಂದು ತೋರಿಸಿದ ಪಕ್ಷ ಬಿಜೆಪಿ. ಮತಗಟ್ಟೆ ಅಧ್ಯಕ್ಷರಾಗಿದ್ದ ಅಮಿತ್ ಶಾ ಅವರು ಇವತ್ತು ಕೇಂದ್ರದ ಗೃಹ ಸಚಿವ. ಹಳ್ಳಿಯಿಂದ ಬಂದವನೊಬ್ಬ ಸಾಮಾನ್ಯ ಬಿಜೆಪಿಯ ರಾಜ್ಯಾಧ್ಯಕ್ಷ ಆಗ್ತಾನೆ. ಮೂರು ಸಲ ಎಂಪಿ ಆಗ್ತಾನೆ. ಇದು ಬಿಜೆಪಿಯಲ್ಲಿ ಮಾತ್ರ ಸಾಧ್ಯ. ನಾವು ಪರಿವಾರವಾದದಿಂದ ಬಂದವರಲ್ಲ. ಹಣಬಲದಿಂದ ಬಂದವರಲ್ಲ. ರಾಷ್ಟ್ರಭಕ್ತಿ, ಸಾಮಾಜಿಕ ಬದ್ಧತೆಯಿಂದ ನಾವು ರಾಜಕೀಯಕ್ಕೆ ಬಂದವರು ಎಂದು ಕಾಂಗ್ರೆಸ್ಗೆ ತಿರುಗೇಟು ಕೊಟ್ಟರು.
ಭ್ರಷ್ಟಾಚಾರ, ಭಯೋತ್ಪಾದನೆ ಕಾಂಗ್ರೆಸ್ ಕೊಡುಗೆ
ಕಾಂಗ್ರೆಸ್ನಲ್ಲಿ ಪದಾಧಿಕಾರಿಗಳ ಟೀಂ ಸಾಂವಿಧಾನಿಕವಾಗಿಲ್ಲ. ಕಾಂಗ್ರೆಸ್ನಲ್ಲಿ ಅವ್ಯವಸ್ಥೆ ತುಂಬಿದೆ. ಅವರಿಗೆ ಪಕ್ಷ ಕಟ್ಟಲು ಗೊತ್ತಿಲ್ಲ. ಇನ್ನು ನಾಡನ್ನು ಏನ್ ಕಟ್ತಾರೆ? ಕಾಂಗ್ರೆಸ್ನಲ್ಲಿ 150 ಪ್ರಧಾನ ಕಾರ್ಯದರ್ಶಿ ಇದ್ದಾರೆ. ಅದು ಮುಂದೆ 250 ದಾಟುತ್ತೆ ಎಂದರು. ಪಂಚರಾಜ್ಯಗಳ ಫಲಿತಾಂಶ ಬಳಿಕ ಕಾಂಗ್ರೆಸ್ಗೆ ಭಯ ಶುರುವಾಗಿದೆ. ಕಾಂಗ್ರೆಸ್ ದೇಶದಲ್ಲಿ ತಿರಸ್ಕರಿಸಲ್ಪಡ್ತಿದೆ. ಅಧಿಕಾರದಲ್ಲಿ ಇದ್ದಾಗ ಅವರ ನಡವಳಿಕೆಗಳೇ ಇದಕ್ಕೆ ಕಾರಣ. ಭ್ರಷ್ಟಾಚಾರ, ಭಯೋತ್ಪಾದನೆಗಳೇ ಕಾಂಗ್ರೆಸ್ ಪರಿವಾರದ ಕೊಡುಗೆ ಎಂದು ಆರೋಪಿಸಿದರು.
ಕಾಂಗ್ರೆಸ್ನಲ್ಲಿ ಶಾಸ್ತ್ರಿಗಳು ಬಿಟ್ರೆ ಉಳಿದ ಎಲ್ಲ ಪ್ರಧಾನಿಗಳೂ ಕಳಂಕಿತರು. ವಾಜಪೇಯಿ, ಮೋದಿ ಕಳಂಕರಹಿತ, ಭ್ರಷ್ಟಾಚಾರ ರಹಿತ ಸರ್ಕಾರ ಕೊಟ್ಟವರು. ರಾಜ್ಯದಲ್ಲೂ ಎಲ್ಲ ಕಾಂಗ್ರೆಸ್ ಸಿಎಂಗಳು ಭ್ರಷ್ಟಾಚಾರಿಗಳು. ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಹ್ಯೂಬ್ಲೋಟ್ ವಾಚ್ ಯಾರು ಕೊಟ್ರು? ಅರ್ಕಾವತಿ ರೀಡೂ ಪ್ರಕರಣದ ತನಿಖೆ ಆದ್ರೆ ಸಿದ್ದರಾಮಯ್ಯ ಅವರು ಜೀವನಪರ್ಯಂತ ಜೈಲಿನಲ್ಲಿರ್ತಾರೆ. ಸಿದ್ದರಾಮಯ್ಯ ಅವರಷ್ಟು ಭ್ರಷ್ಟಾಚಾರಿ ಬೇರ್ಯಾರೂ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಿಎಂ ಬೊಮ್ಮಾಯಿ ಪಿಎಸ್ಐ ಅಕ್ರಮ ಆದಾಗ ಕೂಡಲೇ ತನಿಖೆಗೆ ಕೊಟ್ರು. ನಮ್ ಸರ್ಕಾರ ಪಾರದರ್ಶಕ ತನಿಖೆ ನಡೆಸ್ತಿದೆ. ಸಿದ್ದರಾಮಯ್ಯ ಅವರು ಡ್ರಗ್ಸ್ ಹಣದಲ್ಲಿ ಸರ್ಕಾರ ನಡೆಸಿದ್ರು. ನಮ್ಮ ಸರ್ಕಾರ ಬಂದು ಡ್ರಗ್ಸ್ ಮುಕ್ತ ಮಾಡ್ತು. ಡ್ರಗ್ಸ್ ಮುಕ್ತ ಕರ್ನಾಟಕ ಮಾಡಿದ್ದು, ನಮ್ಮ ಸರ್ಕಾರದಲ್ಲಿ ಎಂದರು. ಹುಬ್ಬಳ್ಳಿ ದಾಂಧಲೆ ಹಿಂದೆ ಸಿದ್ದರಾಮಯ್ಯ ಷಡ್ಯಂತ್ರ ಇದೆ. ಶಿವಮೊಗ್ಗದ ಗಲಭೆ, ಡಿಜೆ ಹಳ್ಳಿ ಕೆಜಿ ಹಳ್ಳಿ ಗಲಭೆ ಹಿಂದೆ ಸಿದ್ದರಾಮಯ್ಯ ಇದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ ಅಧ್ಯಕ್ಷ ತಿಹಾರ್ ಜೈಲಲ್ಲಿದ್ದು ಬಂದವರು. ಮೆರವಣಿಗೆಯಲ್ಲಿ ಹೋದ್ರು ಮೆರವಣಿಗೆಯಲ್ಲಿ ಬಂದ್ರು. ನಾಚಿಕೆ ಆಗಬೇಕು ಕಾಂಗ್ರೆಸ್ ಅಧ್ಯಕ್ಷರಿಗೆ. ಜೈಲಿಗೆ ಹೋಗೋರು ಕದ್ದುಮುಚ್ಚಿ ಹೋಗ್ತಾರೆ. ಇವ್ರು ಮೆರವಣಿಗೆಯಲ್ಲಿ ಹೋಗ್ತಾರೆ ಎಂದು ಡಿಕೆಶಿ ವಿರುದ್ಧ ವಾಗ್ದಾಳಿ ಮಾಡಿದರು.
ಕಾಂಗ್ರೆಸ್ ಅರಾಜಕತೆಯ ಸೃಷ್ಟಿಕರ್ತ. ಅಧಿಕಾರ ಇಲ್ಲದಿದ್ರೆ ಕೈ ನಾಯಕರು ವಿಲವಿಲ ಒದ್ದಾಡ್ತಾರೆ. ರಾಹುಲ್ ಗಾಂಧಿ ನೇಪಾಳಕ್ಕೆ ಹೋಗಿ ಏನ್ ಮಾಡಿದ್ರು? ಇದರ ಬಗ್ಗೆ ಯಾಕೆ ಸಿದ್ದರಾಮಯ್ಯ, ಡಿಕೆಶಿ ಮೌನವಾಗಿದ್ದಾರೆ? ನೇಪಾಳದಲ್ಲಿ ರಾಹುಲ್ ಗಾಂಧಿ ಯಾರ ಭೇಟಿ ಮಾಡಿದ್ರು ಹೇಳಿ. ದೇಶದ ವಿರೋಧಿ ಚೀನಾ ಜತೆ ಸ್ನೇಹ ಮಾಡ್ತೀರಾ? ಎಂದು ವ್ಯಂಗ್ಯವಾಡಿದರು. ಕಾಂಗ್ರೆಸ್ ದೇಶದಲ್ಲಿ ಬಾಂಬಿನ ಕಾರ್ಖಾನೆ ಸೃಷ್ಟಿಸಿತು. ಭಿಂದ್ರನ್ ವಾಲೆಯ ಸೃಷ್ಟಿ ಇಂದಿರಾಗಾಂಧಿ ಮಾಡಿದ್ದು, ಅವರೇ ಭಯೋತ್ಪಾದನೆಗೆ ಕಾರಣ. ಮೋದಿಯವರು ಎಂಟು ವರ್ಷದ ಆಡಳಿತದಲ್ಲಿ ಒಂದೇ ಒಂದು ಕಡೆ ಬಾಂಬ್ ಸ್ಫೋಟ ಆಗ್ಲಿಲ್ಲ ಎಂದರು.
ನಾವು ಪಾರದರ್ಶಕವಾಗಿದ್ದೇವೆ. ಇವತ್ತು ಹಗರಣಗಳಾಗಿವೆ ಅಂತಾರಲ್ಲ ಎಲ್ಲವನ್ನೂ ತನಿಖೆಗೆ ಕೊಡಲಾಗಿದೆ. ಎಷ್ಟೇ ದೊಡ್ಡವರಿದ್ರೂ ಬಂಧಿಸ್ತೇವೆ. ಪ್ರಿಯಾಂಕ್ ಖರ್ಗೆ, ಮಲ್ಲಿಕಾರ್ಜುನ ಖರ್ಗೆ ಸಾವಿರಾರು ಕೋಟಿ ಒಡೆಯರು. ಈ ಸಾವಿರಾರು ಕೋಟಿ ಎಲ್ಲಿಂದ ಬಂತು ಎಂದು ಪ್ರಶ್ನಿಸಿದರು.
ಮಾಜಿ ಸಿಎಂ ಯಡಿಯೂರಪ್ಪ ಮಾರ್ಗದರ್ಶನ, ಬೊಮ್ಮಾಯಿ ಅವರ ನೇತೃತ್ವದಲ್ಲಿ ಮುಂದಿನ ಚುನಾವಣೆ ಗೆಲ್ತೇವೆ. ಕಾಂಗ್ರೆಸ್, ಜೆಡಿಎಸ್ನಿಂದ ಬಹಳ ಜನ ಬಿಜೆಪಿ ಬಾಗಿಲು ತಟ್ತಿದ್ದಾರೆ. ನಮಗೆ ಪುರುಸೊತ್ತಿಲ್ಲ, ಅಷ್ಟು ಜನ ಬರ್ತಿದ್ದಾರೆ. ಹಾಗಾಗಿ ನಾವು ಲಿಸ್ಟ್ ಮಾಡ್ಕೊಂಡು ಸೇರ್ಪಡೆ ಮಾಡ್ಕೊಳ್ತಿದ್ದೇವೆ. ಬಿಜೆಪಿ ಕಚೇರಿ ಯುವ ಮೋರ್ಚಾ ಕಾರ್ಯಕರ್ತರಿಗೆ ಎಚ್ಚರಿಕೆ ಜೊತೆಗೆ ಕಿವಿಮಾತು ಹೇಳಿದರು. ಇದನ್ನೂ ಓದಿ: ಪತಿ ಆಸೆ ಈಡೇರಿಸಿದ ಮಡದಿ: ಹುತಾತ್ಮ ಯೋಧನ ಪತ್ನಿ ಈಗ ಲೆಫ್ಟಿನೆಂಟ್
ಯುವ ಮೋರ್ಚಾ ಕಾರ್ಯಕರ್ತರು ಮನೆ-ಮನೆಗೆ ತೆರೆಳಿ ಕೆಲಸ ಮಾಡಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಕೆಲಸದ ಬಗ್ಗೆ ಜನರಿಗೆ ತಿಳಿಸಬೇಕು. ಸರ್ಕಾರದ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ಯಾರು ಸಹ ವಿಧಾನ ಸೌಧ, ಸಚಿವರ ಮನೆಗಳ ಬಳಿ ಹೋಗಬಾರದು. ನಿಮಗೆ ಅಧಿಕಾರ ಕೊಟ್ಟಿರುವುದು ಪಕ್ಷದ ಕೆಲಸ ಮಾಡಲು. ಮನೆ ಮನೆಗೆ ತೆರೆಳಿ ಕೆಲಸ ಮಾಡಿದ್ರೆ ಮುಂದೆ ನಿಮಗೆ ಹೆಚ್ಚಿನ ಜವಾಬ್ದಾರಿ ಜೊತೆಗೆ ಅಧಿಕಾರ ಸಿಗಲಿದೆ. ನೀವು ಎಲ್ಲಿ ಹೋಗಿ ಏನ್ ಮಾಡುವಿರಿ ಎಂದು ನಮಗೆ ಮಾಹಿತಿ ಬರುತ್ತೆ ಎಂದರು.