ಬೆಂಗಳೂರು:ನಾವು ದಲಿತರಿಗೆ ಮಾನಸಿಕವಾಗಿ ಶಕ್ತಿ ತುಂಬುವ ಕೆಲಸ ಮಾಡಿದ್ದೇವೆ. ಆದರೆ ವಿರೋಧ ಪಕ್ಷದವರು ನಾವು ಉಪಹಾರ ಸೇವಿಸಿದ ವಿಚಾರವನ್ನು ರಾಜಕಾರಣ ಮಾಡುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಸುರೇಶ್ ಕುಮಾರ್ ಹೇಳಿದ್ದಾರೆ.
ತುಮಕೂರಿನಲ್ಲಿ ದಲಿತ ನಾಯಕರ ಮನೆಯಲ್ಲಿ ಹೋಟೆಲ್ ಊಟ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದ ಅವರು, ದಲಿತರ ಮನೆಯಲ್ಲಿ ತಿಂಡಿ ತಯಾರಿಸಲಾಗಿತ್ತು. ಆದರೆ ಹೇಳಿದ್ದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಯಡಿಯೂರಪ್ಪ ಮತ್ತವರ ಬೆಂಬಲಿಗರು ಬಂದಿದ್ದರಿಂದ ತಿಂಡಿ ಸಾಲದ ಕಾರಣ ಹೋಟೆಲಿನಿಂದ ತರಿಸಲಾಯಿತು ಎಂದು ತಿಳಿಸಿದರು.
ಬಿಎಸ್ವೈ ಅವರು ಮನೆಯಲ್ಲಿ ಆಹಾರ ಸೇವಿಸಿದ್ದಾರೆ ಎಂದು ಆ ಮನೆಯವರೇ ಹೇಳಿದ್ದಾರೆ. ಆದರೆ ವಿರೋಧ ಪಕ್ಷಗಳು ಈ ವಿಚಾರವನ್ನು ಈಗ ರಾಜಕೀಯಕ್ಕೆ ಬಳಸುತ್ತಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ಪಕ್ಷ ದಲಿತರನ್ನು ಕೇವಲ ವೋಟ್ಬ್ಯಾಂಕ್ ಆಗಿ ಬಳಸಿಕೊಂಡಿದೆ. ನಾವು ದಲಿತರಿಗೆ ಮಾನಸಿಕವಾಗಿ ಶಕ್ತಿ ತುಂಬುವ ಕೆಲಸ ಮಾಡಿದ್ದೇವೆ. ಹೀಗಾಗಿಯೆ ದಲಿತರ ಮನೆಗೆ ಹೋಗಿ ಉಪಹಾರ ಸೇವಿಸಿದ್ದೇವೆ. ಇದನ್ನು ಅರಿಯದ ವಿರೋಧ ಪಕ್ಷದವರು ಇದನ್ನ ರಾಜಕಾರಣ ಮಾಡಿ ದಲಿತರನ್ನ ಅವಮಾನಿಸುತ್ತಿದೆ ಎಂದರು.
ಏನಿದು ವಿವಾದ:
ಗುರುವಾರ ತುಮಕೂರಿನ ಕೆಳಕೋಟೆಯಲ್ಲಿ ಮಧು ಎಂಬ ದಲಿತ ಬಿಜೆಪಿ ಬೆಂಬಲಿಗರ ಮನೆಗೆ ಯಡಿಯೂರಪ್ಪ ಜೊತೆ ನಾಯಕರು ಭೇಟಿ ನೀಡಿದ್ದರು. ಈ ವೇಳೆ ನಾವು ದಲಿತರ ಮನೆಯ ಆಹಾರವನ್ನು ಸೇವಿಸಿದ್ದೇವೆ, ದಲಿತರೆಂದರೆ ನಮಗೆ ಬೇಧವಿಲ್ಲ ಎಂದು ಬಿಜೆಪಿ ನಾಯಕರು ಹೇಳಿದ್ದರು. ಅಸಲಿಗೆ ಬಿಜೆಪಿ ನಾಯಕರು ಸೇವಿಸಿದ ಉಪಹಾರವನ್ನು ತುಮಕೂರು ನಗರದ ಅರಳೂರು ಹೋಟೆಲಿನಿಂದ ತರಿಸಲಾಗಿತ್ತು. ಈ ಹೋಟೆಲಿನಿಂದ 500 ತಟ್ಟೆ ಇಡ್ಲಿ, ಚಿತ್ರಾನ್ನ ಪಾರ್ಸೆಲ್ ತೆಗೆದುಕೊಂಡು ಹೋಗಲಾಗಿತ್ತು. ಈ ವಿಚಾರವನ್ನು ಹೋಟೆಲ್ ಮಾಲೀಕ ಶಿವಕುಮಾರ್ ತಿಳಿಸಿದ್ದರು. 500 ಇಡ್ಲಿ, 500 ವಡೆ, ಚಿತ್ರಾನವ್ನು ಪಾರ್ಸೆಲ್ ತೆಗೆದುಕೊಂಡು ಹೋಗಲಾಗಿತ್ತು ಎಂದು ತಿಳಿಸಿದ್ದರು.