ಮೈಸೂರು: ದಿವಂಗತ ಶಾಸಕ ಚಿಕ್ಕಮಾದು ಶ್ರದ್ಧಾಂಜಲಿ ಆಚರಣೆಯಲ್ಲಿ ಆಯೋಜಕರು ಎಡವಟ್ಟು ಮಾಡಿದ್ದಾರೆ. ನಾಯಕನ ನೆನಪಿಗೆ ಭರ್ಜರಿ ಊಟ ತಯಾರಿಸಿದ್ದ ಆಯೋಜಕರು ಉಳಿದ ಅನ್ನವನ್ನ ಯಾರಿಗೂ ನೀಡದೆ ಗಬ್ಬೆದ್ದು ನಾರುವಂತೆ ಮಾಡಿದ್ದಾರೆ.
ಮೈಸೂರಿನ ಹೆಚ್.ಡಿ.ಕೋಟೆಯಲ್ಲಿ ನ.28 ರಂದು ಶ್ರದ್ಧಾಂಜಲಿ ಸಭೆ ನಡೆದಿತ್ತು. ಇದಕ್ಕಾಗಿ 25 ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಆದ್ರೆ ನಿರೀಕ್ಷೆಯಂತೆ ಅಭಿಮಾನಿಗಳು ಬಾರದ ಹಿನ್ನೆಲೆಯಲ್ಲಿ ಮಾಡಿದ ಅಡುಗೆಯೆಲ್ಲ ಹಾಗೆ ಉಳಿದಿತ್ತು. ಉಳಿದ ಊಟವನ್ನ ಆಯೋಜಕರು ಸಮುದಾಯ ಭವನವದಲ್ಲೆ ಬಿಟ್ಟು ಹೋಗಿದ್ದು, ಇದೀಗ ಸಮುದಾಯ ಭವನವೆಲ್ಲ ಹಳಸಿದ ಆಹಾರದಿಂದ ದುರ್ವಾಸನೆ ಬೀರುತ್ತಿದೆ.
ಎರಡು ಮೂರು ದಿನದಿಂದ ಊಟವೆಲ್ಲ ಕೊಳೆತು ದುರ್ವಾಸನೆ ಬರುತ್ತಿದ್ದು, ಸಮುದಾಯ ಭವನದ ಸುತ್ತ ಜನ ಮೂಗುಮುಚ್ಚಿ ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ಸ್ಥಳೀಯ ಮುಖಂಡರು ಈವರೆಗೂ ಆಹಾರ ತೆರವುಗೊಳಿಸಿಲ್ಲ.