ಬೆಂಗಳೂರು: ತಮ್ಮ ನೆಚ್ಚಿನ ನಟರಿಗೆ ಅಭಿಮಾನಿಗಳು ಪ್ರಾಣ ಕೊಡೋಕೆ ತಯಾರಿರುತ್ತಾರೆ. ಅಂತೆಯೇ ಇಲ್ಲೊಬ್ಬರು ಅಭಿಮಾನಿ ತನ್ನ ನೆಚ್ಚಿನ ನಟ ಸಾಹಸ ವಿಷ್ಣುವರ್ಧನ್ ಗಾಗಿ ರಕ್ತದ ಅಭಿಷೇಕವನ್ನೇ ಮಾಡಿದ್ದಾರೆ.
ಮೈಸೂರು ಮೂಲದ ವ್ಯಕ್ತಿ ಸಾಹಸಸಿಂಹ ವಿಷ್ಣುವರ್ಧನ್ ಅವರ ಅಪ್ಪಟ ಅಭಿಮಾನಿಯಾಗಿದ್ದು, ವಿಷ್ಣುದಾದಾ ಅಂದ್ರೆ ಇವರಿಗೆ ಎಲ್ಲಿಲ್ಲದ ಪ್ರೀತಿ ಹಾಗೂ ಅಭಿಮಾನ. ಈ ಅಭಿಮಾನಿಯ ರಕ್ತಾಭಿಮಾನ ಹಾಗೂ `ನಯಾ ನಾಗರಹಾವು’ ಸಿನಿಮಾಗೆ ಸಿಕ್ತಿರುವ ರೆಸ್ಪಾನ್ಸ್ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದೆ.
ನಾಗರಹಾವು ಸಿನಿಮಾ ರೀ-ರಿಲೀಸ್ ಆಗಿದ್ದು, ಕರುನಾಡ ಮಂದಿ ಅದ್ಧೂರಿಯಾಗಿ ನಯಾ ನಾಗರಹಾವು ಚಿತ್ರವನ್ನ ಚಿತ್ರಮಂದಿರಕ್ಕೆ ಬರಮಾಡಿಕೊಂಡಿದ್ದಾರೆ. ಕಳೆದ ಎರಡು ದಿನಗಳಿಂದ ಥಿಯೇಟರ್ ಮುಂದೆ ಹಬ್ಬ ಮಾಡಿ ಸಂಭ್ರಮಿಸುತ್ತಿದ್ದಾರೆ. ಡಿಜಿಟಲ್ ರೂಪ ಪಡೆದುಕೊಂಡಿರುವ ನಾಗರಹಾವು ಆರ್ಭಟಕ್ಕೆ ವಿಷ್ಣು ಅಭಿಮಾನಿ ಖುಷಿಯಾಗಿದ್ದಾರೆ. ಆದರೆ ಮೈಸೂರಿನ ಅಭಿಮಾನಿ ದಾದಾನ ಕಟೌಟ್ಗೆ ನೆತ್ತರ ಅಭಿಷೇಕ ಮಾಡಿ ಅಭಿಮಾನದ ಪರಾಕಾಷ್ಠೆ ಮೆರೆದಿದ್ದಾರೆ. ಇದನ್ನೂ ಓದಿ: ಕಲರ್ ಫುಲ್ ನಾಗರಹಾವಿಗೆ ಮನಸೋತ ಅಭಿಮಾನಿಗಳು- ಸಿನಿಮಾ ವೀಕ್ಷಿಸಿದ್ರು ಹ್ಯಾಟ್ರಿಕ್ ಹೀರೋ ಶಿವಣ್ಣ
45 ವರ್ಷಗಳ ಹಳೆಯ ಸಿನಿಮಾವಾದರೂ ಬೆಳ್ಳಿತೆರೆ ಮೇಲೆ ಮೋಡಿ ಮಾಡ್ತಿರುವುದು ವಿಶೇಷ. ಪ್ರೇಕ್ಷಕರಿಂದ ಹಿಡಿದು ಸ್ಟಾರ್ ಗಳು ಕೂಡ ವಿಷ್ಣು ಅಭಿನಯದ ನಾಗರಹಾವು ಸಿನಿಮಾ ನೋಡೋದಕ್ಕೆ ಮುಗಿಬೀಳ್ತಿದ್ದಾರೆ. ಇಂಟ್ರೆಸ್ಟಿಂಗ್ ಅಂದ್ರೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕೂಡ ಅಭಿಮಾನಿಗಳ ಜೊತೆ ಕುಳಿತು ಸಿನಿಮಾ ನೋಡಿದ್ದರು. ಒಬ್ಬ ಅಭಿಮಾನಿಯಂತೆ ಕರುನಾಡ ಚಕ್ರವರ್ತಿ ಶಿವಣ್ಣ, ಸಾಹಸಸಿಂಹನ ಅಭಿನಯವನ್ನ ಕಣ್ತುಂಬಿಸಿಕೊಂಡಿದ್ದರು.
ಒಟ್ಟಿನಲ್ಲಿ ರಾಮಾಚಾರಿಯ ಆರ್ಭಟ ಕರುನಾಡಲ್ಲಿ ಜೋರಾಗಿದೆ. ರಾಜಾದ್ಯಂತ ಎಲ್ಲಾ ಚಿತ್ರಮಂದಿರಗಳು ಹೌಸ್ ಫುಲ್ ಪ್ರದರ್ಶನ ಕಾಣ್ತಿದೆ. ಇದರ ಮೂಲಕ ಅಭಿಮಾನಿಗಳ ಹೃದಯದಲ್ಲಿ ವಿಷ್ಣುದಾದಾ ಚಿರಸ್ಥಾಯಿ ಅನ್ನೋದು ಮತ್ತೊಮ್ಮೆ, ಮಗದೊಮ್ಮೆ ಸಾಬೀತಾಗಿದೆ.