ಕೋಲ್ಕತ್ತಾ: ಟೀಂ ಇಂಡಿಯಾ ಅಂಡರ್ 19 ತಂಡದ ಕೋಚ್ ರಾಹುಲ್ ದ್ರಾವಿಡ್ ಯುವ ಆಟಗಾರರಿಗೆ ನೀಡಿದ ಸಲಹೆಗಳು ಭವಿಷ್ಯದ ಟೀಂ ಇಂಡಿಯಾ ತಂಡವನ್ನು ಸೃಷ್ಟಿಸುವ ಗುರಿ ಹೊಂದಿರುತ್ತದೆ ಎಂಬುವುದಕ್ಕೆ ತಾಜಾ ಉದಾಹರಣೆಯೊಂದು ಸಿಕ್ಕಿದೆ.
ಹೌದು. ಕ್ರಿಕೆಟ್ ಕಡೆ ಗಮನ ಹರಿಸಿದರೆ ಹಣ ನಿಮ್ಮ ಹಿಂದೆ ಬರುತ್ತದೆ ಎಂದು ರಾಹುಲ್ ತಮಗೆ ತಿಳಿಸಿದ್ದರು ಎಂದು ಅಂಡರ್ 19 ವಿಶ್ವ ಕಪ್ ಗೆದ್ದ ಟೀಂ ಇಂಡಿಯಾ ಅಂಡರ್ 19 ತಂಡದ ಬೌಲರ್ ಶಿವಂ ಮಾವಿ ಹೇಳಿದ್ದಾರೆ.
ಏಪ್ರಿಲ್ 6ರಿಂದ ಆರಂಭವಾಗುವ ಐಪಿಎಲ್ ಟೂರ್ನಿಯಲ್ಲಿ ಮೂರು ಕೋಟಿ ರೂ.ಗೆ ಕೋಲ್ಕತ್ತ ನೈಟ್ ರೈಡರ್ಸ್ ಪಾಲಾಗಿರುವ ಶಿವಂ ಮಾವಿ, ಖಾಸಗಿ ಮಾಧ್ಯಮವೊಂದರ ಸಂದರ್ಶನದ ವೇಳೆ ರಾಹುಲ್ ದ್ರಾವಿಡ್ ನೀಡಿದ್ದ ಸಲಹೆಗಳನ್ನು ಬಿಚ್ಚಿಟ್ಟಿದ್ದಾರೆ.
ರಾಹುಲ್ ಸರ್ ನಮಗೆ, ಹಣ ನಿಮ್ಮ ಹಿಂದೆ ಬರುತ್ತದೆ. ಆದರೆ ನೀವು ಆಟದ ಬಗ್ಗೆ ಮಾತ್ರ ಗಮನ ಹರಿಸಬೇಕು. ಕ್ರಿಕೆಟ್ ಗೆ ನೀವು ಸಮಯವನ್ನು ನೀಡಿದರೆ ಕ್ರಿಕೆಟ್ ನಿಮಗೆ ಬೇಕಾದದನ್ನು ನೀಡುತ್ತದೆ ಎಂದು ಹೇಳಿದ್ದರು. ಈ ಮಾತುಗಳು ಇಂದಿಗೂ ನನ್ನ ಕಿವಿಯಲ್ಲಿ ಗುಂಯ್ಗುಡುತ್ತಿದೆ ಎಂದು ಮಾವಿ ಹೇಳಿದ್ದಾರೆ.
2018ರ ಅಂಡರ್ 19 ವಿಶ್ವಕಪ್ ಚಾಂಪಿಯನ್ ಭಾರತ ತಂಡದ ಆಟಗಾರರಾಗಿದ್ದ ಶಿವಂ ಮಾವಿ ಟೂರ್ನಿಯಲ್ಲಿ 140 ಪ್ಲಸ್ ವೇಗದಲ್ಲಿ ಬೌಲಿಂಗ್ ಮಾಡಿ ಎಲ್ಲರ ಗಮನ ಸೆಳೆದಿದ್ದರು. ಆದರೆ ಐಸಿಸಿ ಟೂರ್ನಿ ತನಗೆ ಸವಿ ನೆನೆಪಾಗಿದ್ದು, ಪ್ರಸ್ತುತ ತಾನು ಉತ್ತಮ ಪ್ರದರ್ಶನ ನೀಡಿದರೆ ಮಾತ್ರ ತಂಡದಲ್ಲಿ ಸ್ಥಾನ ಪಡೆಯಲು ಸಾಧ್ಯ. ರಾಹುಲ್ ಸರ್ ನನ್ನ ಬೌಲಿಂಗ್ನಲ್ಲಿ ಲೈನ್ ಅಂಡ್ ಲೆಂಥ್ ಪ್ರಮುಖವಾದದ್ದು ಎಂದು ತಿಳಿಸಿದ್ದಾರೆ. ಅದ್ದರಿಂದ ನಾನು ಈ ಅಂಶಗಳಿಗೆ ಹೆಚ್ಚು ಒತ್ತು ನೀಡುತ್ತಿದ್ದೇನೆ ಎಂದು ಹೇಳಿದರು.
ಇದೇ ವೇಳೆ ದೇಶೀಯ ಕ್ರಿಕೆಟ್ ಟೂರ್ನಿಯಲ್ಲಿ ಉತ್ತರ ಪ್ರದೇಶದ ರಣಜಿ ತಂಡದ ಪರ ಭಾಗವಹಿಸುವ ಆಸೆಯನ್ನು ಶಿವಂ ಮಾವಿ ವ್ಯಕ್ತಪಡಿಸಿದರು. ಅಲ್ಲದೇ ದೇಶಿಯ ಕ್ರಿಕೆಟ್ ನಲ್ಲಿ ಸ್ಥಾನ ಪಡೆಯಲು ಸೀಮಿತ ಓವರ್ ಗಳ ಐಪಿಎಲ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸವನ್ನು ವ್ಯಕ್ತಪಡಿಸಿದರು.