ಬೆಂಗಳೂರು: ದಸರಾ ಹಬ್ಬಕ್ಕೆ ಈಗಾಗಲೇ ಕೌಂಟ್ ಡೌನ್ ಸ್ಟಾರ್ಟ್ ಆಗಿದೆ. ಸೋಮವಾರ ಹಾಗೂ ಮಂಗಳವಾರ ನಡೆಯುವ ಹಬ್ಬಕ್ಕೆ ಈಗಾಗಲೇ, ಭರ್ಜರಿ ಪ್ರಿಪರೇಷನ್ ನಡೆಸಲಾಗುತ್ತಿದೆ. ಇದರ ನಡುವೆ ಬೆಲೆ ಏರಿಕೆಯ ಬಿಸಿ ಜನರನ್ನು ಕಾಡುತ್ತಿದ್ದು, ದುಬಾರಿ ರೇಟ್ ಗೆ ಜನರು ಹೈರಾಣಾಗಿದ್ದಾರೆ.
ಸೋಮವಾರ ಆಯುಧ ಪೂಜೆ ಇದ್ದು, ಮಂಗಳವಾರ ವಿಜಯದಶಮಿ ಇದೆ. ಇವೆರಡು ದಿನ ನವದುರ್ಗೆಯರ ಅರ್ಚನೆ ಮಾಡಿ, ವಾಹನಗಳಿಗೆ ಪೂಜೆ ಮಾಡುವ ಉತ್ಸಾಹದಲ್ಲಿ ಜನರಿದ್ದಾರೆ. ಹೀಗಾಗಿ ಕೆ.ಆರ್ ಮಾರ್ಕೆಟ್ ಸೇರಿದಂತೆ ನಗರದ ಬಹುತೇಕ ಮಾರುಕಟ್ಟೆಗಳಲ್ಲಿ ಹಬ್ಬದ ಖರೀದಿ ಭರಾಟೆ ಜೋರಾಗಿದೆ. ಅದರಲ್ಲೂ ವಾಹನಗಳಿಗೆ, ಆಯುಧಗಳಿಗೆ ದೃಷ್ಟಿ ತೆಗೆಯಲು ಕುಂಬಳಕಾಯಿ ವ್ಯಾಪಾರ ದುಪ್ಪಟ್ಟಾಗಿದ್ದು, ಕೆ.ಜಿಗೆ 150ರೂ ಆಗಿದೆ. ನವದುರ್ಗೆಯರ ಪೂಜೆಗೆ ಬೇಕಾಗುವ ಹೂವು ಹಾಗೂ ಹಣ್ಣುಗಳ ಬೆಲೆ ದುಬಾರಿಯಾಗಿದೆ.
ಗಗನಕ್ಕೇರಿದ ಹೂವುಗಳ ಬೆಲೆ;
ಕನಕಾಂಬರ ಹಿಂದಿನ ದರ ಕೆ.ಜಿಗೆ 600 ರೂ. ಇದ್ದು, ಈಗಿನ ದರ 1500 ರೂ. ಆಗಿದೆ. ದುಂಡುಮಲ್ಲಿಗೆ ಮೊದಲು ಕೆಜಿಗೆ 400ರೂ. ಇತ್ತು, ಆದರೆ ಈಗ 1,000ರೂ. ಆಗಿದೆ. ಕಾಕಡ ಹಿಂದಿನ ದರ 200ರೂ, ಈಗ 500ರೂ. ಆಗಿದೆ. ಜಾಜಿ ಮಲ್ಲಿಗೆ 150 ರೂ. ಆಗಿದ್ದು, ಈಗ 200ರೂ. ಆಗಿದೆ. ಸೇವಂತಿಗೆ 40 ರೂ. ಇತ್ತು, ಆದರೆ ಈಗ 150 ರೂ. ಆಗಿದೆ. ಸುಗಂಧರಾಜ ಮೊದಲು 100ರೂ. ಇತ್ತು, ಆದರೆ ಈಗ 300ರೂ. ಆಗಿದೆ. ಗುಲಾಬಿ ಹೂವಿನ ಹಿಂದಿನ ದರ 150 ಇದ್ದು, ಈಗಿನ ದರ 200ರೂ. ಆಗಿದೆ. ತುಳಸಿ ಒಂದು ಮಾರಿಗೆ 50ರೂ. ಆಗಿದ್ದು, ಮಾವಿನ ಎಲೆ ಒಂದು ಕಟ್ಟಿಗೆ 40ರೂ. ಆಗಿದೆ.
ಹಣ್ಣುಗಳ ಬೆಲೆಗಳನ್ನು ನೋಡೋದಾದರೆ;
ಸೇಬುಹಣ್ಣು ಮೊದಲು 80ರೂ. ಇದ್ದು, ಈಗಿನ ಬೆಲೆ 120ರೂ. ಆಗಿದೆ. ಕಿತ್ತಳೆ ಹಿಂದಿನ ದರ 60 ರೂ. ಇದ್ದು, ಈಗ 80ರೂ. ಆಗಿದೆ. ಮೊಸಂಬಿ ಮೊದಲು 70ರೂ. ಇದ್ದು, ಈಗ 100ರೂ. ಹೆಚ್ಚಾಗಿದೆ. ಬಾಳೆಹಣ್ಣಿನ ಹಿಂದಿನ ದರ 50ರೂ, ಆದರೆ ಈಗ 80ರೂ. ಆಗಿದೆ. ಅನಾನಸ್ ಮೊದಲು 30ರೂ. ಇದ್ದು, ಈಗ 60 ರೂ. ಆಗಿದೆ. ದ್ರಾಕ್ಷಿ ಹಣ್ಣಿನ ಹಿಂದಿನ ದರ 90ರೂ. ಇದ್ದು, ಈಗ 120ರೂ. ಆಗಿದೆ. ಅಲ್ಲದೆ ದಾಳಿಂಬೆ ಮೊದಲು 80 ರೂ. ಇತ್ತು, ಆದರೆ ಈಗ 100ರೂ. ಆಗಿದೆ.
ಬೆಲೆ ಏರಿಕೆಗೆ ಕಾರಣಗಳು;
* ಅತಿಯಾದ ಮಳೆ
* ಹೂವು-ಹಣ್ಣುಗಳ ಇಳುವರಿ ಕಡಿಮೆಯಾಗಿರುವುದು
* ಮಾರುಕಟ್ಟೆಗೆ ಸಾಕಷ್ಟು ಪ್ರಮಾಣದಲ್ಲಿ ಸಪ್ಲೈ ಆಗದೇ ಇರುವುದು