ಬೆಂಗಳೂರು: ಪ್ರವಾಹ ಸಂತ್ರಸ್ತರ ಕಣ್ಣೀರೋಸುವ ಕೆಲಸವನ್ನು ಸರ್ಕಾರ ಮಾಡಿದೆ. ತಾತ್ಕಾಲಿಕ ಪರಿಹಾರ ಕೊಟ್ಟಿದ್ದೇವೆ, ಕೇಂದ್ರಕ್ಕಾಗಿ ಕಾದಿಲ್ಲ ಎಂದು ಸರ್ಕಾರ ಹೇಳುತ್ತಿದೆ. ಮುಖ್ಯಮಂತ್ರಿಯಿಂದ ಎಲ್ಲ ಸಚಿವರು ಕೂಡ ಈ ಬಗ್ಗೆ ಸಮರ್ಥನೆಯ ಹೇಳಿಕೆಗಳನ್ನು ನೀಡಿದ್ದು, 1500 ಕೋಟಿ ರೂ. ಕೊಟ್ಟಿದ್ದೇವೆ ಎಂದು ಹೇಳುತ್ತಿದ್ದಾರೆ.
ಸಂತ್ರಸ್ತರ ಕುಟುಂಬಗಳಿಗೆ ತಕ್ಷಣಕ್ಕೆ 10 ಸಾವಿರ, ಸಂಪೂರ್ಣ ಮನೆ ಹಾನಿಗೆ 5 ಲಕ್ಷ ರೂ. ಕೊಟ್ಟಿದ್ದೇವೆ ಎಂದು ಸಿಎಂ ಹೇಳಿದ್ದು, ಆದರೆ ಸರ್ಕಾರವೇ ಹೇಳಿರುವ ಅಧಿಕೃತ ದಾಖಲೆ ಪ್ರಕಾರ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಕೊಟ್ಟಿರುವುದು ಕೇವಲ 128.41 ಕೋಟಿ ಮಾತ್ರ. ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ ತಾನು ಕೊಟ್ಟಿರುವ ಪರಿಹಾರವನ್ನ ಅಧಿಕೃತವಾಗಿ ತನ್ನ ವೆಬ್ಸೈಟ್ನಲ್ಲಿ ಹಾಕಿದೆ. ಇದರ ಪ್ರಕಾರ ಅಂಕಿ ಅಂಶಗಳು ಇಂತಿದೆ.
ಇದುವರೆಗೂ 41,459 ಫಲಾನುಭವಿಗಳ ಖಾತೆಗೆ ಪರಿಹಾರ ಹಣ ಜಮೆಯಾಗಿದ್ದು, 128.41 ಕೋಟಿ ರೂ. ಪರಿಹಾರ ಹಣ ಜಮೆಯಾಗಿರುವ ಮಾಹಿತಿ ಲಭಿಸಿದೆ. ಗ್ರಾಮೀಣ ಭಾಗದ 37,132 ಫಲಾನುಭವಿಗಳ ಖಾತೆಗೆ 110.27 ಕೋಟಿ ರೂ. ಪರಿಹಾರ ಹಣ ಜಮೆಯಾಗಿದೆ. ಆದರೆ ಈ ಹಣ ತಾಂತ್ರಿಕ ದೋಷಗಳಿಂದ ಖಾತೆಗಳಿಗೆ ಜಮೆಯಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ನಗರ ಪ್ರದೇಶ 4,327 ಫಲಾನುಭವಿಗಳ ಖಾತೆಗೆ 18.14 ಕೋಟಿ ರೂ. ಪರಿಹಾರ ಹಣ ಜಮೆ ಎಂದಿದ್ದು, ಆದರೆ ಈ ಹಣ ತಾಂತ್ರಿಕ ದೋಷಗಳಿಂದ ಜಮೆ ಆಗಿಲ್ಲ ಎಂದ ಅಧಿಕಾರಿಗಳು ತಿಳಿಸಿದ್ದಾರೆ.
ಇದರಲ್ಲಿ ಕೆಲವರ ಖಾತೆಗೆ 10 ಸಾವಿರ, 25 ಸಾವಿರ, ಕೆಲವರಿಗೆ 1 ಲಕ್ಷ ರೂ.ವರೆಗೆ ಪರಿಹಾರ ಹಣವನ್ನು ಜಮೆ ಮಾಡಿದ್ದೇವೆ ಎಂಬ ಮಾಹಿತಿ ಲಭಿಸಿದೆ. ಈ ಅಂಕಿ ಅಂಶಗಳನ್ನೇ ಗಮನಿಸುವುದಾದರೆ, ಸರ್ಕಾರ ಹೇಳಿರುವ 1500 ಕೋಟಿ ರೂ. ಪೈಕಿ ಕೇವಲ 128.41 ಕೋಟಿ ಮಾತ್ರ ಜನರ ಖಾತೆಗೆ ಜಮೆಯಾಗಿದೆ. ಉಳಿದ 1,370 ಕೋಟಿಯನ್ನು ಎಲ್ಲಿ ಖರ್ಚು ಮಾಡಿದೆ? ಯಾರು ಖರ್ಚು ಮಾಡಿದ್ದಾರೆ? ಯಾರಿಗೆ ಪರಿಹಾರ ಕೊಟ್ಟಿದ್ದಾರೆ? ಉಳಿದ 1 ಲಕ್ಷಕ್ಕೂ ಹೆಚ್ಚು ಮನೆ ಕಳೆದುಕೊಂಡ ಸಂತ್ರಸ್ಥರಿಗೆ ಪರಿಹಾರ ಕೊಡುವವರು ಯಾರು ಎಂಬ ಪ್ರಶ್ನೆಗೆ ಉತ್ತರ ಬೇಕಿದೆ.