ಹಾಸನದಲ್ಲಿ ಬಿಎನ್‍ಎಸ್ ಅಡಿ ದಾಖಲಾಯ್ತು ಮೊದಲ ಕೇಸ್

Public TV
1 Min Read
HASSAN CAR

ಹಾಸನ: ಸಹಜವಾಗಿಯೇ ರಾಜ್ಯದಲ್ಲಿಯೂ 3 ಹೊಸ ಕಾನೂನುಗಳು ಜಾರಿ ಆಗಿವೆ. ಬೆಂಗಳೂರು ಸೇರಿ ರಾಜ್ಯದ ಎಲ್ಲಾ ಠಾಣೆಗಳಲ್ಲಿಯೂ ಬಿಎನ್‍ಎಸ್ ಸೆಕ್ಷನ್‍ಗಳ ಅಡಿಯೇ ಕೇಸ್ ದಾಖಲಿಸಬೇಕು ಎಂದು ಪೊಲೀಸ್ ಇಲಾಖೆ ಸೂಚನೆ ನೀಡಿದೆ. ಈ ಬೆನ್ನಲ್ಲೇ ಹಾಸನ ಗ್ರಾಮೀಣ ಠಾಣೆಯಲ್ಲಿ ಮೊದಲ ಎಫ್‍ಐಆರ್ ದಾಖಲಾಗಿದೆ.

ವೈದ್ಯ ಶಂಕರೇಗೌಡ ನೀಡಿದ ದೂರಿನ ಮೇಲೆ ಕಾರು ಚಾಲಕ ಸಾಗರ್ ವಿರುದ್ಧ ಅತಿವೇಗ, ನಿರ್ಲಕ್ಷ್ಯದ ಚಾಲನೆ ಆರೋಪದ ಮೇಲೆ ಬಿಎನ್‍ಎಸ್ ಸೆಕ್ಷನ್ 281,106ರ ಅಡಿ ಕೇಸ್ ದಾಖಲಾಗಿದೆ. ಹಾಸನದ ಸೀಗೆಗೇಟ್ ಬಳಿ ಸಂಭವಿಸಿದ ಕಾರು ಅಪಘಾತದಲ್ಲಿ ವೈದ್ಯ ಶಂಕರೇಗೌಡರ ಅತ್ತೆ ಮೃತಪಟ್ಟಿದ್ರು. ತೀರ್ಥಯಾತ್ರೆ ಮುಗಿಸಿ ವಾಪಸ್ ಬರುವಾಗ ಈ ದುರಂತ ಸಂಭವಿಸಿತ್ತು. ಬಿಎನ್‍ಎಸ್ ಅಡಿ ರಾಜ್ಯದಲ್ಲಿಂದು 63 ಕೇಸ್ ದಾಖಲಾಗಿವೆ.

ಏನಿದು ಪ್ರಕರಣ..?; ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಹಳ್ಳಕ್ಕೆ ಕಾರು ಪಲ್ಟಿಯಾಗಿ ಓರ್ವ ಮಹಿಳೆ ಸ್ಥಳದಲ್ಲೇ ಮೃತಪಟ್ಟು, ಮತ್ತಿಬ್ಬರು ಗಂಭೀರ ಗಾಯಗೊಂಡಿರುವ ಘಟನೆ ಹಾಸನ ತಾಲೂಕಿನ ಸೀಗೆ ಗ್ರಾಮದ ಬಳಿ ನಡೆದಿದೆ. ಇಂದುಮತಿ (67) ಮೃತ ದುರ್ದೈವಿ. ಅಯೋಧ್ಯೆಗೆ ತೆರಳಿ ವಾಪಸ್ಸಾಗುತ್ತಿದ್ದು ಇಂದುಮತಿ ಪತಿ ಯೋಗೇಶ್ ಎಂಬವರು ಬೆಂಗಳೂರು ಏರ್‌ಪೋರ್ಟ್‍ನಿಂದ ಕಾರಿನಲ್ಲಿ ಪತ್ನಿಯನ್ನು ಮನೆಗೆ ಕರೆದುಕೊಂಡು ಬರುತ್ತಿದ್ದರು. ಇದನ್ನೂ ಓದಿ: ಹೊಸ ಕಾನೂನಿನಡಿ ಮೊದಲ ದಿನವೇ ರಾಜ್ಯಾದ್ಯಂತ 63 FIR ದಾಖಲು

KA-13-P-8779 ನಂಬರ್ ನ ವೆನ್ಯೂ ಕಾರಿನಲ್ಲಿ ಹಳೇಬೀಡಿನಲ್ಲಿರುವ ಮನೆಗೆ ತೆರಳುವಾಗ ಸೀಗೆ ಗ್ರಾಮದ ಬಳಿ ಕಾರು ಪಲ್ಟಿಯಾಗಿ ದುರಂತ ಸಂಭವಿಸಿದೆ. ಪತಿ ಯೋಗೀಶ್ ಹಾಗೂ ಕಾರುಚಾಲಕ ಕಿರಣ್‍ಗೆ ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಹಾಸನ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

Share This Article