ಮಂಡ್ಯ: ಲೋಕಸಭಾ ಜೆಡಿಎಸ್ ಅಭ್ಯರ್ಥಿ, ನಟ ನಿಖಿಲ್ ಪರ ಪ್ರಚಾರ ಮಾಡುವಾಗ ಹುಮ್ಮಸ್ಸಿನಲ್ಲಿ ಚಿತ್ರನಟರಿಗೆ ಧಮ್ಕಿ ಹಾಕಿದ್ದ ಕೆಆರ್ ಪೇಟೆ ಶಾಸಕ ನಾರಾಯಣಗೌಡ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಇತ್ತೀಚೆಗೆ ಮಂಡ್ಯದ ಕೆ.ಆರ್ ಪೇಟೆಯಲ್ಲಿ ಮಾತನಾಡಿದ ನಾರಾಯಣಗೌಡ, ಅಂಬರೀಶ್ ಬಗ್ಗೆ ನಮಗೂ ಗೌರವ ಇದೆ. ಇತರೆ ಚಿತ್ರ ನಟರು ಗೊಂದಲ ಹುಟ್ಟು ಹಾಕ್ತಿದ್ದಾರೆ. ಕ್ಷೇತ್ರದ ಬಗ್ಗೆ ಮಾತಾಡಿ. ಅದು ಬಿಟ್ಟು ದೇವೇಗೌಡರ ಕುಟುಂಬದ ಬಗ್ಗೆ ಮಾತನಾಡಿದರೆ ಸುಮ್ಮನಿರಲ್ಲ. ತಕ್ಕ ಪಾಠ ಕಲಿಸ್ತೇವೆ ಎಂದು ಹೇಳಿದ್ದರು.
ಅಲ್ಲದೆ ರಾಜ್ಯದಲ್ಲಿ ನಮ್ಮದೇ ಸರ್ಕಾರವಿದ್ದು, ಸಿನಿಮಾ ನಟರು ಗೌರವದಿಂದ ಇರದಿದ್ದರೆ ಆಸ್ತಿ ತನಿಖೆಯಾಗುತ್ತೆ ಎಂದು ದರ್ಶನ್, ಯಶ್ಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದರು. ಹೇಳಿಕೆ ನೀಡಿ ನೀತಿಸಂಹಿತೆ ಉಲ್ಲಂಘಿಸಿದ್ದಕ್ಕೆ ಚುನಾವಣಾಧಿಕಾರಿ ರವಿಕುಮಾರ್ ಕೆಆರ್ ಪೇಟೆ ಠಾಣೆಯಲ್ಲಿ ದೂರು ನೀಡಿದ್ದು ಎಫ್ಐಆರ್ ದಾಖಲಾಗಿದೆ.
ಈ ಬಗ್ಗೆ ವಕೀಲ ನಾರಾಯಣಸ್ವಾಮಿ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಈ ರೀತಿಯ ವರ್ತನೆ ಸರಿಯದಲ್ಲ. ಅವರದ್ದೇ ಸರ್ಕಾರ ಇದೆ ಎಂದು ಈ ರೀತಿ ಮಾತನಾಡುವುದು ಸರಿಯಲ್ಲ. ಈ ರೀತಿ ಬೆದರಿಕೆ ಹಾಕಿದ್ರೆ ಜನಸಾಮಾನ್ಯರು ಹೇಗೆ ಮತದಾನ ಮಾಡುತ್ತಾರೆ. ನಾರಾಯಣಗೌಡ ವಿರುದ್ಧ ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದೇವೆ. ನಮ್ಮದೇ ಸರ್ಕಾರ ಇದೆ ರೇಡ್ ಮಾಡಿಸ್ತೀವಿ ಎಂದು ಬೆದರಿಕೆ ಭಾಷಣ ಮಾಡ್ತಾರೆ. ಹಾಗಾಗಿ ಚುನಾವಣಾ ಆಯೋಗಕ್ಕೆ ದೂರು ಕೊಡಲಾಗಿದೆ ಎಂದರು.
ಚುನಾವಣಾ ಅಧಿಕಾರಿಗಳು ದೂರು ಸ್ವೀಕರಿಸಿದ ಬಳಿಕ ಮಂಡ್ಯ ಡಿಸಿ ಜೊತೆ ಮಾತಾಡಿದ್ದಾರೆ. ಏನು ಭಾಷಣ ಮಾಡಿದ್ರು ಕೂಡಲೇ ಕ್ರಮ ತೆಗೆದುಕೊಳ್ಳಿ ಎಂದು ಕಾಲ್ ಮಾಡಿ ಮಾತನಾಡಿದ್ದಾರೆ. ಇಂತಹ ಭಾಷಣಗಳು ಜನ ಪ್ರತಿನಿಧಿ ಅನ್ನಿಸಿಕೊಂಡವರು ಮಾತಾಡಬಾರದು ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.