ಬೆಂಗಳೂರು: ಶನಿವಾರ ಸಂಜೆ ಆನೇಕಲ್ ತಾಲೂಕಿನ ಮಂಚನಹಳ್ಳಿ ಗ್ರಾಮದಿಂದ ಕಾಣೆಯಾಗಿದ್ದ ಬಾಲಕರು ಇದೀಗ ಸುಖಾಂತ್ಯವಾಗಿ ಪೋಷಕರ ಮಡಿಲು ಸೇರಿದ್ದಾರೆ.
ಗ್ರಾಮದ ಚಂದನ್(12), ವಿಕಾಸ್(12), ನಂದನ್(12) ಹಾಗೂ ಕಾರ್ತಿಕ್(14) ಶನಿವಾರ ಸಂಜೆ ಆಟವಾಡಿ ಬಳಿಕ ಪೋಷಕರಿಗೆ ತಿಳಿಸದೆ ಹೊಸೂರು ಬೆಟ್ಟಕ್ಕೆ ತೆರಳಿ ಅಲ್ಲಿ ಇದ್ದ ಹಣವನ್ನು ಖರ್ಚು ಮಾಡಿಕೊಂಡಿದ್ದಾರೆ. ನಂತರ ಮನೆಗೆ ಬರಲು ಹಣವಿಲ್ಲದೆ ಹೊಸೂರು ಬಸ್ ನಿಲ್ದಾಣದಲ್ಲಿ ಕುಳಿತಿದ್ದರು. ಇವರನ್ನು ಗಮನಿಸಿದ ಹೊಸೂರು ಪೊಲೀಸರು ವಿಚಾರಿಸಿದಾಗ ನಡೆದ ಘಟನೆಯನ್ನು ವಿವರಿಸಿದ್ದಾರೆ.
ನಂತರ ಅತ್ತಿಬೆಲೆ ಪೊಲೀಸರಿಗೆ ಮಾಹಿತಿ ನೀಡಿದ ಹೊಸೂರು ಪೊಲೀಸರು ಕಳೆದ ರಾತ್ರಿ ಒಂದು ಗಂಟೆ ಸುಮಾರಿಗೆ ಮಕ್ಕಳನ್ನು ಅತ್ತಿಬೆಲೆ ಪೊಲೀಸರಿಗೆ ನೀಡಿದ್ದಾರೆ. ಬಳಿಕ ಮಕ್ಕಳು ಪೋಷಕರ ಮಡಿಲು ಸೇರಿದ್ದು, ಈ ಮೂಲಕ ಮಕ್ಕಳ ಕಳ್ಳರ ವದಂತಿಗೆ ಬ್ರೇಕ್ ಬಿದ್ದಂತಾಗಿದೆ.
ಶನಿವಾರ ಸಂಜೆ 5 ಗಂಟೆವರೆಗೂ ಗ್ರಾಮದಲ್ಲೇ ಬಾಲಕರು ಆಟವಾಡುತ್ತಿದ್ದರು. ಬಳಿಕ ನಾಪತ್ತೆಯಾಗಿದ್ದರಿಂದ ಇತ್ತೀಚೆಗೆ ಮಕ್ಕಳ ಕಳ್ಳರು ಬಂದಿದ್ದಾರೆ ಎಂಬ ವದಂತಿ ಹಿನ್ನೆಲೆಯಲ್ಲಿ ಪೋಷಕರಲ್ಲಿ ಆತಂಕ್ಕಕೀಡಾಗಿ ಅತ್ತಿಬೆಲೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.