ದಾವಣಗೆರೆ/ಬಳ್ಳಾರಿ: ಸಜ್ಜನ ರಾಜಕಾರಣಿ ಅಂತಾನೇ ಗುರುತಿಸಿಕೊಂಡಿದ್ದ ಮಾಜಿ ಡಿಸಿಎಂ ಎಂಪಿ ಪ್ರಕಾಶ್ ಪುತ್ರ ಹರಪನಹಳ್ಳಿಯ ಮಾಜಿ ಶಾಸಕ ಎಂ.ಪಿ ರವೀಂದ್ರ ವಿಧಿವಶರಾಗಿದ್ದಾರೆ. ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಸರಳ ಸಜ್ಜನಿಕೆಯ ರವೀಂದ್ರ ಅವರ ಅಂತ್ಯಸಂಸ್ಕಾರ ಇಂದು ಲಿಂಗಾಯತ ಸಂಪ್ರದಾಯದಂತೆ ನಡೆಯಲಿದೆ.
ಮೃತರ ಪಾರ್ಥಿವ ಶರೀರವನ್ನು ಶನಿವಾರ ದಾವಣಗೆರೆ ಮತ್ತು ಹರಪನಹಳ್ಳಿಯಲ್ಲಿ ದರ್ಶನಕ್ಕೆ ಇಡಲಾಗಿತ್ತು. ಸಿಎಂ ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ, ಸೇರಿದಂತೆ ರಾಜಕೀಯ ಮುಖಂಡರು, ಗಣ್ಯಾತಿಗಣ್ಯರು, ಅಭಿಮಾನಿಗಳು ಅಂತಿಮ ದರ್ಶನ ಪಡೆದರು. ಮೆಚ್ಚಿನ ನಾಯಕನ ಅಗಲಿಕೆಗೆ ಕಂಬನಿ ಮಿಡಿದ್ರು.
ಲಿಂಗಾಯತ ಸಂಪ್ರದಾಯದಂತೆ ಬಳ್ಳಾರಿ ಜಿಲ್ಲೆಯ ಹಡಗಲಿಯ ತೋಟದಲ್ಲಿ ಎಂ.ಪಿ ರವೀಂದ್ರರವರ ಅಂತ್ಯಸಂಸ್ಕಾರ ನೆರವೇರಲಿದೆ. ರವೀಂದ್ರ ಅವರ ತಂದೆ ಎಂ.ಪಿ ಪ್ರಕಾಶ್ ಅವರ ಸಮಾಧಿ ಪಕ್ಕದಲ್ಲೇ ರವೀಂದ್ರ ಅವರ ಅಂತ್ಯಸಂಸ್ಕಾರ ನಡೆಯಲಿದೆ.
ಎಂ.ಪಿ ರವೀಂದ್ರರವರು ಹರಪನಹಳ್ಳಿ ಕ್ಷೇತ್ರದಿಂದ ಒಮ್ಮೆ ಶಾಸಕರಾಗಿ ಆಯ್ಕೆಯಾದ ಮೇಲೆ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದರು. ಹರಪನಹಳ್ಳಿ ತಾಲೂಕನ್ನು ಕಲಂ 371 ಜೆ ಗೆ ಸೇರ್ಪಡೆ ಮಾಡುವಲ್ಲಿ ಸಾಕಷ್ಟು ಶ್ರಮ ವಹಿಸಿದ್ದರು. ಅಲ್ಲದೇ ಸರಳತೆಯಿಂದ ಜನಮನ ಗೆದ್ದಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv