ದಕ್ಷಿಣ ಭಾರತದ ಫಿಲ್ಮ್ ಫೇರ್ (Filmfare) ಪ್ರಶಸ್ತಿ ಪ್ರದಾನ ಸಮಾರಂಭವು ನಿನ್ನೆ ಬೆಂಗಳೂರಿನಲ್ಲಿ ನಡೆದಿದ್ದು, 2020 ಹಾಗೂ 2021ನೇ ಸಾಲಿನಲ್ಲಿ ಬಿಡುಗಡೆಯಾದ ಸಿನಿಮಾಗಳಿಗೆ 67ನೇ ಫಿಲ್ಮ್ ಫೇರ್ ಪ್ರಶಸ್ತಿಗಳನ್ನು ನೀಡಲಾಗಿದೆ. ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಸಿನಿಮಾಗಳಿಗೆ ಪ್ರತ್ಯೇಕವಾಗಿ ಈ ಪ್ರಶಸ್ತಿಗಳನ್ನು ನೀಡಲಾಗಿದ್ದು, ನಾಲ್ಕು ಸಿನಿಮಾ ರಂಗದ ಅನೇಕ ಕಲಾವಿದರು ಮತ್ತು ತಂತ್ರಜ್ಞರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.
ಎರಡು ವರ್ಷಗಳಲ್ಲಿ ಬಿಡುಗಡೆಯಾದ ಸಿನಿಮಾಗಳಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ (Mansore) ಅವರ ಆ್ಯಕ್ಟ್ 1978 ಸಿನಿಮಾಗೆ ಅತೀ ಹೆಚ್ಚು ಪ್ರಶಸ್ತಿಗಳು ದೊರೆತದ್ದು, ಇದೇ ಸಿನಿಮಾದ ನಟನೆಗಾಗಿ ಯಜ್ಞಾ ಶೆಟ್ಟಿ ಅವರು ಅತ್ಯುತ್ತಮ ನಟಿಯಾಗಿ ಹೊರ ಹೊಮ್ಮಿದ್ದಾರೆ. ಅತ್ಯುತ್ತಮ ನಟ ಪ್ರಶಸ್ತಿಯು ಡಾಲಿ ಧನಂಜಯ್ (Dhananjay) ಬಡವ ರಾಸ್ಕಲ್ ಸಿನಿಮಾದ ನಟನೆಗಾಗಿ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಪವನ್ ಕುಮಾರ್-ಫಾಸಿಲ್ ಕಾಂಬಿನೇಷನ್ನ ‘ಧೂಮ್ʼ ಚಿತ್ರದ ಅದ್ಧೂರಿ ಮುಹೂರ್ತ
ಈ ಬಾರಿ ಜೀವ ಮಾನ ಸಾಧನೆಗಾಗಿ ಪುನೀತ್ (Puneeth Rajkumar) ಅವರಿಗೆ ಮರಣೋತ್ತರ ಪ್ರಶಸ್ತಿಯನ್ನು ಘೋಷಿಸಿದ್ದು, ಈ ಪ್ರಶಸ್ತಿಯನ್ನು ಪುನೀತ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಪಡೆದುಕೊಂಡಿದ್ದಾರೆ. ಡಾ.ರಾಜ್ ಕುಟುಂಬದ ಕುಡಿ, ರಾಮ್ ಕುಮಾರ್ ಪುತ್ರಿ ಧನ್ಯಾ ರಾಮ್ ಕುಮಾರ್ ಅವರಿಗೆ ನಿನ್ನ ಸನಿಹಕೆ ಚಿತ್ರಕ್ಕಾಗಿ ಅತ್ಯುತ್ತಮ ಡೆಬ್ಯೂ ನಟಿ ಪ್ರಶಸ್ತಿಯು ದೊರೆತಿರುವುದು ಮತ್ತೊಂದು ವಿಶೇಷ.
ಆ್ಯಕ್ಟ್ 1978 ಸಿನಿಮಾಗೆ ಅತ್ಯುತ್ತಮ ಸಿನಿಮಾ, ಅತ್ಯುತ್ತಮ ನಟಿ, ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಬಿ.ಸುರೇಶ್ ಪಡೆದುಕೊಂಡಿದ್ದರೆ, ಅತ್ಯುತ್ತಮ ಗೀತ ಸಾಹಿತ್ಯಕ್ಕಾಗಿ ಜಯಂತ್ ಕಾಯ್ಕಿಣಿ ಪ್ರಶಸ್ತಿ ಸ್ವೀಕರಿಸಿದ್ದಾರೆ. ಅತ್ಯುತ್ತಮ ನಟಿ ಪ್ರಶಸ್ತಿ ಪಡೆಯಲು ಯಜ್ಞಾ ಗೈರಾದ ಕಾರಣದಿಂದಾಗಿ ಅವರ ಪರವಾಗಿ ನಿರ್ದೇಶಕ ಮಂಸೋರೆ ಈ ಪ್ರಶಸ್ತಿ ಸ್ವೀಕರಿಸಿದ್ದಾರೆ. ಅತ್ಯುತ್ತಮ ಚಿತ್ರದ ಪ್ರಶಸ್ತಿಯನ್ನು ನಿರ್ಮಾಪಕ ದೇವರಾಜ್ ಆರ್ ಪಡೆದುಕೊಂಡರು.
ಅತ್ಯುತಮ ನೃತ್ಯ ನಿರ್ದೇಶಕ ಜಾನಿ ಮಾಸ್ಟರ್ (ಯುವರತ್ನ), ಅತ್ಯುತಮ ಛಾಯಾಗ್ರಾಹಕ ಶ್ರೀಶ ಕುಡುವಳ್ಳಿ (ರತ್ನನ ಪ್ರಪಂಚ), ಅತ್ಯುತಮ ಹಿನ್ನೆಲೆ ಗಾಯಕಿ ಅನುರಾಧ ಭಟ್ (ಧೀರ ಸಮ್ಮೋಹಗಾರ-ಬಿಚ್ಚುಗತ್ತಿ), ಅತ್ಯುತಮ ಹಿನ್ನೆಲೆ ಗಾಯಕ ರಘು ದೀಕ್ಷಿತ್ (ನಿನ್ನ ಸನಿಹಕೆ), ಅತ್ಯುತಮ ಸಂಗೀತ ನಿರ್ದೇಶಕ ವಾಸುಕಿ ವೈಭವ್ (ಬಡವ ರಾಸ್ಕಲ್), ಅತ್ಯುತಮ ನಟಿ (ಕ್ರಿಟಿಕ್ಸ್) ಮಿಲನ ನಾಗರಾಜ್ (ಲವ್ ಮಾಕ್ಟೇಲ್), ಅಮೃತಾ ಅಯ್ಯಂಗಾರ್ (ಬಡವ ರಾಸ್ಕಲ್), ಅತ್ಯುತ್ತಮ ನಟ (ಕ್ರಿಟಿಕ್ಸ್) ಡಾರ್ಲಿಂಗ್ ಕೃಷ್ಣ (ಲವ್ ಮಾಕ್ಟೇಲ್) ಸಿನಿಮಾಗಳಿಗಾಗಿ ಪಡೆದಿದ್ದಾರೆ. ಗರುಡ ಗಮನ ವೃಷಭ ವಾಹನ ಚಿತ್ರದ ನಿರ್ದೇಶನಕ್ಕಾಗಿ ರಾಜ್ ಬಿ ಶೆಟ್ಟಿ (Raj B Shetty) ಅವರಿಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯು ಸಂದಿದೆ.