ಮಂಡ್ಯ: ಜಿಲ್ಲೆಯ ಪಾಂಡವಪುರ ತಾಲೂಕಿನ ಪ್ರಸಿದ್ಧ ಮೇಲುಕೋಟೆಯ ಯೋಗಾನರಸಿಂಹಸ್ವಾಮಿ ದೇವಾಲಯದ ಅರ್ಚಕರ ಜಗಳ ಬೀದಿಗೆ ಬಂದಿದೆ.
ಸರ್ಕಾರ ಬೆಟ್ಟದ ಯೋಗಾನರಸಿಂಹಸ್ವಾಮಿಗೆ ಪೂಜೆ ಸಲ್ಲಿಸಲು ಅರ್ಚಕ ನಾರಾಯಣ ಭಟ್ ಅವರನ್ನ ನೇಮಿಸಿತ್ತು. ಆದರೆ ನಾರಾಯಣ ಭಟ್ ತಮ್ಮ ಅನುಪಸ್ಥಿತಿಯಲ್ಲಿ ರಾಮಪ್ರಿಯ ಅವರಿಂದ ಪೂಜೆ ಮಾಡಿಸುತ್ತಿದ್ದರು. ರಾಮಪ್ರಿಯ ಪೂಜೆ ಮಾಡುವುದಕ್ಕೆ ತೀವ್ರವಾಗಿ ವಿರೋಧ ವ್ಯಕ್ತವಾಗಿತ್ತು. ಆದ್ದರಿಂದ ಸರ್ಕಾರ ನಾರಾಯಣ ಭಟ್ ಅರ್ಚಕರ ಅನುಪಸ್ಥಿತಿಯಲ್ಲಿ ಭಾಷ್ಯಂ ಸ್ವಾಮೀಜಿಗೆ ಪೂಜೆ ಸಲ್ಲಿಸಲು ಆದೇಶ ಹೊರಡಿಸಿತ್ತು.
ಸರ್ಕಾರದ ಆದೇಶದಂತೆ ಸಾಂಕೇತಿಕವಾಗಿ ಸೋಮವಾರ ಸಂಜೆ ಪೂಜೆ ಸಲ್ಲಿಸಲು ಭಾಷ್ಯಂ ಸ್ವಾಮೀಜಿ ಬಂದಿದ್ದರು. ಆದರೆ ನಾರಾಯಣ ಭಟ್ ಅರ್ಚಕರ ಸಾಂಕೇತಿಕ ಪೂಜೆಗೆ ಅವಕಾಶ ನೀಡಲಿಲ್ಲ. ಸರ್ಕಾರ ನನ್ನ ಅನುಪಸ್ಥಿತಿಯಲ್ಲಿ ಪೂಜೆ ಸಲ್ಲಿಸಲು ಆದೇಶ ನೀಡಿದೆ. ಆದರೆ ನಾನಿರುವಾಗಲೇ ಪೂಜೆ ಸಲ್ಲಿಸಲು ಅವಕಾಶ ನೀಡುವುದಿಲ್ಲವೆಂದು ಅರ್ಚಕ ನಾರಾಯಣ ಭಟ್ ಪಟ್ಟು ಹಿಡಿದಿದ್ದಾರೆ. ದೇವಾಲಯದ ಮುಖ್ಯ ಗುಮಾಸ್ಥರು, ಪಾರುಪತ್ತೆದಾರು ಭಾಷ್ಯಂ ಸ್ವಾಮೀಜಿಗೆ ಸಾಂಕೇತಿಕವಾಗಿ ಪೂಜೆ ಸಲ್ಲಿಸಲು ಅವಕಾಶ ಕೊಡಲು ಮನವಿ ಸಲ್ಲಿಸಿದ್ದಾರೆ. ಆದರೆ ಅರ್ಚಕ ನಾರಾಯಣ ಭಟ್ ಅವಕಾಶ ನೀಡಲು ನಿರಾಕರಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಭಕ್ತಾದಿಗಳ ಮುಂದೆಯೇ ಹೈಡ್ರಾಮಾ ನಡೆದಿದ್ದು, ಗರ್ಭಗುಡಿಯ ತೆರೆ ಎಳೆದು ಅರ್ಚಕರ ನಡುವೆ ವಾದ ವಿವಾದ ನಡೆದಿದೆ.ಇದರಿಂದ ಪೂಜೆಗೆ ಆಗಮಿಸಿದ ಭಕ್ತಾದಿಗಳಿಗೂ ತೊಂದರೆ ಆಗಿದೆ. ಹೀಗಾಗಿ ಭಾಷ್ಯಂ ಸ್ವಾಮೀಜಿ ಇಂದು ಪೊಲೀಸ್ ಭದ್ರತೆಯಲ್ಲಿ ಪೂಜೆ ಸಲ್ಲಿಸಲು ಆಗಮಿಸುತ್ತಿದ್ದಾರೆ.