ಚಾಮರಾಜನಗರ: ಹಣ ಅಂದ್ರೆ ಹೆಣ ಕೂಡಾ ಬಾಯಿ ಬಿಡುತ್ತಂತೆ. ಆದರೆ ಮನುಷ್ಯತ್ವ ಮರೆಯಾಗಿರುವ ಇತ್ತೀಚಿನ ದಿನಗಳಲ್ಲಿ ಹಣಕ್ಕಾಗಿ ತನ್ನ ಮಕ್ಕಳನ್ನೇ ಮಾರಾಟ (Child Sale) ಮಾಡಿದಂತಹ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇಂತಹದ್ದೇ ಪ್ರಕರಣ ಗಡಿಜಿಲ್ಲೆ ಚಾಮರಾಜನಗರದಲ್ಲಿ (Chamarajanagar) ಬೆಳಕಿಗೆ ಬಂದಿದೆ.
ನಗರದ ನಿವಾಸಿ ಬಸವ, ನಾಗವೇಣಿ ಎಂಬಾಕೆಯನ್ನು ಮದುವೆಯಾಗಿದ್ದು, ದಂಪತಿಗೆ 7 ವರ್ಷದ ಒಂದು ಗಂಡು ಮಗುವಿದೆ. 25 ದಿನಗಳ ಹಿಂದೆ ನಾಗವೇಣಿ ಮತ್ತೊಂದು ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಆದರೆ 2ನೇ ಮಗು ಜನಿಸಿದ್ದೇ ತಡ. ಬಸವ ಆ ಹಸೂಗೂಸನ್ನು 50 ಸಾವಿರ ರೂ. ಗೆ ಬೇರೆಯವರಿಗೆ ಮಾರಾಟ ಮಾಡಿದ್ದಾನೆ. ಮಗು ಮಾರಾಟ ಮಾಡುವುದಕ್ಕೆ ನಾಗವೇಣಿ ವಿರೋಧ ಮಾಡಿದ್ದಾಳೆ. ಆಗ ಬಸವ ಮಗು ಮಾರಾಟ ಮಾಡಲು ನೀನು ಒಪ್ಪದಿದ್ದರೆ ಎಲ್ಲರನ್ನೂ ಬಿಟ್ಟು ಎಲ್ಲಾದರೂ ದೂರ ಹೋಗಿಬಿಡುತ್ತೇನೆ ಎಂದು ಹೆದರಿಸಿದ್ದಾನೆ.
ಗಂಡನ ಬೆದರಿಕೆಗೆ ಭಯಬಿದ್ದ ನಾಗವೇಣಿ ಆ ಮಗುವನ್ನು ಮಾರಾಟ ಮಾಡಲು ಒಪ್ಪಿದ್ದಾಳೆ. ಆದರೆ ಈ ಪ್ರಕರಣವನ್ನು ಲಿಂಗತ್ವ ಅಲ್ಪಸಂಖ್ಯಾತೆ ದೀಪಾ ಬುದ್ದೆ ಬೆಳಕಿಗೆ ತಂದಿದ್ದಾರೆ. ಈ ಬಗ್ಗೆ ತಂದೆ ಬಸವನನ್ನು ಕೇಳಿದರೆ ಮಗು ಕೊಟ್ಟಿರುವುದು ಸತ್ಯ. ನನ್ನ ಮಡದಿ ಹಾಗೂ ನನಗೆ ಅನಾರೋಗ್ಯವಿದ್ದು, ಈ ಹಿನ್ನಲೆ ಕೊಟ್ಟಿದ್ದೇವೆ ಎಂದಿದ್ದಾನೆ. ಇದನ್ನೂ ಓದಿ: ಕಣ್ಣಿನ ಕ್ಯಾನ್ಸರ್ನಿಂದ ಬಳಲುತ್ತಿದ್ದ ಪುಟ್ಟ ಕಂದಮ್ಮನ ನೆರವಿಗೆ ನಿಂತ ಸಚಿವೆ ಜೊಲ್ಲೆ
ಲಿಂಗತ್ವ ಅಲ್ಪಸಂಖ್ಯಾತ ಸಂಘಟನೆ ಸಮತಾ ಸೊಸೈಟಿಯ ದೀಪಾ ಬುದ್ದೆ ಅವರು ಅಧ್ಯಯನ ಮಾಡಲು ಹೋದಾಗ ಮಗು ಮಾರಾಟ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಮಗುವನ್ನು ಚಾಮರಾಜನಗರದ ಗಾಳೀಪುರ ಮೂಲದ ವ್ಯಕ್ತಿಯೊಬ್ಬನ ಮೂಲಕ 50 ಸಾವಿರ ರೂ.ಗೆ ಮಾರಾಟ ಮಾಡಿ ಖಾಲಿ ಹಾಳೆಗೆ ಸಹಿ ಹಾಕಿಸಿಕೊಂಡಿದ್ದಾರೆ ಎಂದು ಮಗುವಿನ ತಾಯಿ ಲೈಂಗಿಕ ಅಲ್ಪಸಂಖ್ಯಾತೆಗೆ ತಿಳಿಸಿದ್ದಾಳೆ.
ಕೂಡಲೇ ದೀಪಾ ಬುದ್ದೆ ಈ ವಿಚಾರವನ್ನು ಪೊಲೀಸ್ ಅಧಿಕಾರಿಗಳಿಗೆ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ವಿಚಾರ ತಿಳಿದ ಪೊಲೀಸರು ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಬಸವ ತಾನು ಮಗು ಮಾರಾಟ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಇದನ್ನೂ ಓದಿ: ಮನೆ ಕಾಯಲೆಂದು ಎರಡು ನಾಯಿ ಸಾಕಿದ್ರೂ ಹಾಡಹಗಲೇ ಕಳ್ಳತನ
ಪ್ರಕರಣ ದಾಖಲಿಸಿಕೊಂಡಿರುವ ಮಕ್ಕಳ ರಕ್ಷಣಾ ಇಲಾಖೆಯ ಅಧಿಕಾರಿಗಳು ಸದ್ಯ ನಾಗವೇಣಿ ಹಾಗೂ ಆಕೆಯ ಮೊದಲ ಮಗುವನ್ನು ಬಾಲಮಂದಿರಕ್ಕೆ ಸೇರಿಸಿದ್ದಾರೆ. ಅಲ್ಲದೇ ಮಗುವನ್ನು ಮಾರಾಟ ಮಾಡಿಸಿದ ಹಾಗೂ ಮಗುವನ್ನು ಕೊಂಡವರ ಹುಡುಕಾಟದಲ್ಲಿ ನಿರತರಾಗಿದ್ದಾರೆ.