ಚಿಕ್ಕಬಳ್ಳಾಪುರ: ಪ್ರೇಮವಿವಾಹದ ವೈಮನಸ್ಸಿನಿಂದ ಯುವತಿ ಕಡೆಯವರು ಯುವಕನನ್ನು ಪೀಸ್ ಪೀಸ್ ಮಾಡಿ ಕೊಳವೆ ಬಾವಿಗೆ ಹಾಕಿದ್ದಾರೆ ಎಂದು ಜನರು ಶಂಕೆ ವ್ಯಕ್ತಪಡಿಸುತ್ತಿದ್ದರು. ಇದರಿಂದ ಮನನೊಂದ ತಂದೆಯೊರ್ವ ಮಗನನ್ನು ಕಳೆದುಕೊಂಡ ದುಃಖದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ನಾಮಗೊಂಡ್ಲು ಗ್ರಾಮದಲ್ಲಿ ನಡೆದಿದೆ.
ಗ್ರಾಮದ 50 ವರ್ಷದ ಕೃಷ್ಣಪ್ಪ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೃಷ್ಣಪ್ಪನ ಮಗ ರಾಜೇಶ್ ಫೆಬ್ರವರಿ 19 ರಂದು ಇದೇ ಗ್ರಾಮದ ಅನ್ಯ ಜಾತಿಯ ಯುವತಿಯೊರ್ವಳನ್ನು ಪ್ರೀತಿಸಿ ಮದುವೆಯಾಗಿ ಮನೆಗೆ ಕರೆದುಕೊಂಡು ಹೋಗಿದ್ದ. ಈ ವಿಚಾರದಲ್ಲಿ ಯುವತಿ ಕಡೆಯವರು ಯುವಕನ ಕಡೆಯವರ ನಡುವೆ ಗಲಾಟೆ ನಡೆದು ಯುವತಿಯನ್ನ ವಾಪಸ್ ಕರೆದುಕೊಂಡು ಹೋಗಿದ್ದರು. ಇದನ್ನೂ ಓದಿ: ಪುತ್ರನಿಗೆ ಈಜು ಕಲಿಸಲು ಹೋದ ತಂದೆ – ಇಬ್ಬರು ನೀರು ಪಾಲು
ಅದೇ ದಿನ ಮನೆಯಿಂದ ಹೋದ ಯುವಕ ರಾಜೇಶ್ ಗೌಡ 2 ತಿಂಗಳು ಕಳೆದ್ರೂ ಇದುವರೆಗೂ ಮನೆಗೆ ವಾಪಸ್ಸಾಗಿಲ್ಲ. ಆತನ ಸಣ್ಣ ಸುಳಿವು ಕೂಡ ಸಿಕ್ಕಿಲ್ಲ. ಅಲ್ಲಿದ್ದಾನೆ, ಇಲ್ಲಿದ್ದಾನೆ ಎಂಬ ಗಾಳಿ ಸುದ್ದಿಗಳು ಹರಿದಾಡಿದ್ದವು. ಅದರ ಜೊತೆಗೆ ರಾಜೇಶ್ ಬದುಕಿಲ್ಲ, ಯುವತಿ ಕಡೆಯವರು ಕೊಲೆ ಮಾಡಿ ಪೀಸ್ ಪೀಸ್ ಮಾಡಿ ಕೊಳವೆಬಾವಿಗೆ ಹಾಕಿದ್ದಾರಂತೆ. ಹಂಗಂತೆ ಹಿಂಗಂತೆ ಎಂಬ ಗಾಳಿ ಸುದ್ದಿಗಳು ಹರಿದಾಡಿದ್ದವು.
ಇದ್ರಿಂದ ಮಗನ ವಿಚಾರದಲ್ಲಿ ಮನನೊಂದ ತಂದೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಗ ನಾಪತ್ತೆ ಬಗ್ಗೆ ಫೆಬ್ರವರಿ 26 ರಂದೇ ತಂದೆ ಕೃಷ್ಣಪ್ಪ ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಸಿದ್ದರು. ಪೊಲೀಸರು ಎಲ್ಲೋ ಇರ್ತಾನೆ, ಬರ್ತಾನೆ ಬಿಡಿ ಅಂತ ಸುಮ್ಮನಾಗಿದ್ದರು. ಆದ್ರೆ ಈಗ ಈ ವಿಚಾರದಲ್ಲಿ ತಂದೆ ಅತ್ಮಹತ್ಯೆ ನಂತರ ಹಲವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಇದನ್ನೂ ಓದಿ: ಬುಧವಾರ ಎಲ್ಲ ರಾಜ್ಯಗಳ ಸಿಎಂ ಜೊತೆ ಮೋದಿ ತುರ್ತು ಸಭೆ