ಹುಬ್ಬಳ್ಳಿ: ತಾಲೂಕಿನ ಇನಾಂ ವೀರಾಪುರ ಗ್ರಾಮದಲ್ಲಿ ಕಳೆದ ಎರಡು ದಿನಗಳ ಹಿಂದೆ ನಡೆದಿದ್ದ ಮಾನ್ಯಾ ಮರ್ಯಾದಾ ಹತ್ಯೆಗೆ (Honour Killing) ಸಂಬಂಧಿಸಿದಂತೆ ಪೊಲೀಸರು ಮತ್ತೆ ಮೂವರನ್ನ ಬಂಧಿಸಿದ್ದಾರೆ. ಸದ್ಯ ಈ ಮರ್ಯಾದಾ ಹತ್ಯೆಯಲ್ಲಿ ಇಲ್ಲಿವರೆಗೆ ಆರು ಜನರನ್ನ ಬಂಧಿಸಲಾಗಿದ್ದು, ಮಾನ್ಯಾ ಕುಟುಂಬದ ಮಹಿಳೆಯರ ಮೇಲೂ ಕೂಡ ಕೊಲೆಯ ದೂರು ಇದೆ
ಕಳೆದ ಎರಡು ದಿನಗಳ ಹಿಂದೆ ಹುಬ್ಬಳ್ಳಿಯಲ್ಲಿ ತಲೆ ತಗ್ಗಿಸುವ ಮರ್ಯಾದಾ ಹತ್ಯೆ ನಡೆದಿತ್ತು. ಹುಬ್ಬಳ್ಳಿ (Hubballi) ತಾಲೂಕಿನ ಇನಾಂ ವೀರಾಪುರ ಗ್ರಾಮದಲ್ಲಿ ದಲಿತ ಯುವಕನನ್ನು ಪ್ರೀತಿಸಿ ಮದ್ವೆ ಮಾಡಿಕೊಂಡಿದ್ದಕ್ಕೆ ತಂದೆಯೇ ಏಳು ತಿಂಗಳ ಗರ್ಭಿಣಿ ಆಗಿದ್ದ ಮಗಳನ್ನ ಹತ್ಯೆ ಮಾಡಿದ್ದ. ಮೇಲ್ಜಾತಿ ಕುಟುಂಬದ ಮಾನ್ಯ ದಲಿತ ಯುವಕ ವಿವೇಕಾನಂದನನ್ನು ಮದುವೆ ಆಗಿದ್ದಳು. ಮದುವೆ ನಂತರ ಇವರು ಪ್ರಾಣಭಯದಿಂದ ಹಾವೇರಿ ಜಿಲ್ಲೆಯಲ್ಲಿ ವಾಸವಾಗಿದ್ದರು. ಮದುವೆ ನಂತರ ಮೊದಲ ಬಾರಿಗೆ ಆಗಮಿಸಿದ್ದ ಮಾನ್ಯ ಮತ್ತು ವಿವೇಕಾನಂದಗೆ ಕೊಲೆ ಮಾಡಲೆಂದೇ ಕಾದು ಕುಳಿತಿದ್ದ ಮಾನ್ಯಾಳ ತಂದೆ ಮತ್ತು ಆತನ ಕುಟುಂಬ ಆ ದಿನ ಸಂಜೆ ಮಾನ್ಯ ಹಾಗೂ ವಿವೇಕಾನಂದ ಮೇಲೆ ಅಟ್ಯಾಕ್ ಮಾಡಿದ್ದರು. ಇದರಲ್ಲಿ ಗಾಯಗೊಂಡಿದ್ದ ಗರ್ಭಿಣಿ ಮಾನ್ಯಾ ಸಾವನ್ನಪ್ಪಿದ್ದಳು. ಪ್ರಕರಣಕ್ಕೆ ಸಂಬಂಧಿಸಿದಂತೆ ಅದೇ ದಿನ ಪ್ರಕಾಶ್ ಗೌಡ ಪಾಟೀಲ್, ವೀರನಗೌಡ ಪಾಟೀಲ್, ಅರುಣ್ ಗೌಡ ಪಾಟೀಲ್ ಎಂಬ ಮೂವರನ್ನ ಹುಬ್ಬಳ್ಳಿ ಗ್ರಾಮೀಣ ಪೊಲೀಸರು ಬಂಧಿಸಿದ್ದರು. ಇದನ್ನೂ ಓದಿ: ಬೆಂಗಳೂರು| ಪತ್ನಿ ಜೊತೆ ಜಗಳ; ಗನ್ ತೆಗೆದು ಶೂಟೌಟ್ ಮಾಡಿದ ಪತಿ – ಮಹಿಳೆ ಸಾವು
ಇನ್ನು ದಲಿತ ಸಂಘಟನೆಗಳು ಉಳಿದ ಆರೋಪಿಗಳನ್ನು ಬಂಧಿಸಬೇಕು ಎಂದು ಒತ್ತಡ ಹೇರಿದ್ದವು. ಇದರ ಜೊತೆಗೆ ಮಾನ್ಯಾಳ ಗಂಡ ವಿವೇಕಾನಂದ 14 ಜನರ ಮೇಲೆ ದೂರು ನೀಡಿದ್ದ. ಅದರಲ್ಲಿ ಮಾನ್ಯಾಳ ಕುಟುಂಬದ ಐದು ಮಹಿಳೆಯರ ಮೇಲೆ ದೂರು ನೀಡಲಾಗಿತ್ತು. ಹೀಗಾಗಿ ಧಾರವಾಡ ಎಸ್.ಪಿ ಗುಂಜನ್ ಆರ್ಯ ಹುಬ್ಬಳ್ಳಿ ಗ್ರಾಮೀಣ ಪೊಲೀಸರ ನೇತೃತ್ವದಲ್ಲಿ ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ ಮಾಡಿದ್ದರು. ಸದ್ಯ ಮಾನ್ಯಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಮತ್ತೆ ಮೂವರು ಆರೋಪಿತರನ್ನು ಬಂಧಿಸಿದ್ದಾರೆ. ಒಟ್ಟು 14 ಜನರ ಮೇಲೆ ದೂರು ದಾಖಲಾಗಿದ್ದು, ಇಲ್ಲಿಯವರೆಗೆ ಒಟ್ಟು 6 ಜನರನ್ನು ಬಂಧಿಸಲಾಗಿದೆ. ಇಂದು ಗುರುಸಿದ್ಧಗೌಡ ಪಾಟೀಲ, ಫಕ್ಕೀರಗೌಡ ಪಾಟೀಲ ಹಾಗೂ ಕುಮಾರಗೌಡ ಪಾಟೀಲ ಎಂಬ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಸ್ಪಿ ಗುಂಜನ್ ಆರ್ಯ ತಿಳಿಸಿದ್ದಾರೆ. ಬಂಧಿತ ಆರೋಪಿಗಳೆಲ್ಲ ಹತ್ಯೆಯಾದ ಮಾನ್ಯಾಳ ತಂದೆಯ ಸಂಬಂಧಿಕರಾಗಿದ್ದಾರೆ. ಆರೋಪಿತರು ವಿವೇಕಾನಂದ ಅವರ ಇಡೀ ಕುಟುಂಬ ಮುಗಿಸುವ ಹುನ್ನಾರ ನಡೆಸಿದ್ದರು ಎಂಬ ವಿಷಯ ಕೂಡಾ ಇತ್ತು. ಇದಕ್ಕೆ ಪೂರ್ಣ ತನಿಖೆ ನಂತರವೇ ಎಲ್ಲ ವಿಷಯ ಗೊತ್ತಾಗಲಿದೆ ಎಂದು ಎಸ್ಪಿ ತಿಳಿಸಿದ್ದಾರೆ. ಇದನ್ನೂ ಓದಿ: ಪರಪ್ಪನ ಅಗ್ರಹಾರ ಜೈಲಿಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ, ಸಹೋದರ ದಿನಕರ್ ಭೇಟಿ
ಸದ್ಯ ಇನಾಂ ವೀರಾಪೂರ ಗ್ರಾಮದಲ್ಲಿ ಬೂದಿ ಮುಚ್ಚಿದ ಕೆಂಡದಂತ ಸ್ಥಿತಿ ಇದೆ. ಆದರೆ ಪೊಲೀಸರು ಇಡಿ ಗ್ರಾಮದಲ್ಲಿ ಕಟ್ಟೆಚ್ಚರ ವಹಿಸಿದ್ದು, ಇನ್ನಷ್ಟು ಆರೋಪಿಗಳನ್ನು ಬಂಧಿಸುವ ಸಾಧ್ಯತೆ ಇದೆ. ಇದನ್ನೂ ಓದಿ: ಪ್ರಿಯಾಂಕಾಗೆ ಪ್ರಧಾನಿ ಪಟ್ಟ – ಪಿಎಂ ಆಗುವ ಸಾಮರ್ಥ್ಯ ಅವರಿಗಿದೆ: ಸಂಸದ ಇಮ್ರಾನ್ ಮಸೂದ್


