ಬಾಗಲಕೋಟೆ: ಬೈಕ್ ನಿಂದ ಪುಟಿದು ನದಿಗೆ ಬಿದ್ದ ಮಗಳನ್ನ ರಕ್ಷಿಸಲು ಹೋಗಿ ತಂದೆ ಹಾಗೂ ಪುಟ್ಟ ಮಗಳು ಇಬ್ಬರೂ ಸಾವನ್ನಪ್ಪಿರುವ ಘಟನೆ ಜಿಲ್ಲೆ ಬೀಳಗಿ ತಾಲೂಕಿನ ಗಲಗಲಿ ಗ್ರಾಮದಲ್ಲಿ ನಡೆದಿದೆ.
ಮೂರು ವರ್ಷದ ಆನಮ್ ಹಾಗೂ 29 ವರ್ಷದ ದಸ್ತಗೀರ್ ಗೌಂಡಿ ಮೃತ ದುರ್ದೈವಿಗಳು. ತಂದೆ ದಸ್ತಗೀರ್ ಗೌಂಡಿ, ಪಕ್ಕದಲ್ಲಿರುವ ಚಿಕ್ಕ ಗಲಗಲಿ ಗ್ರಾಮದ ಶಾಲೆಗೆ ತೆರಳಿ ಮಗಳನ್ನ ಬೈಕ್ ಮೇಲೆ ಮನೆಗೆ ಕರೆದುಕೊಂಡು ವಾಪಸ್ಸಾಗುವ ವೇಳೆ ಕೃಷ್ಣಾ ನದಿ ಸೇತುವೆ ಮೇಲೆ ಈ ಘಟನೆ ನಡೆದಿದೆ.
ಗೌಂಡಿ ಸ್ವಲ್ಪ ಬೈಕ್ ವೇಗವಾಗಿ ಚಲಿಸುತ್ತಿದ್ದರಿಂದ ಬೈಕ್ ಮೇಲಿದ್ದ ಮಗಳು ಆನಮ್ ಪುಟಿದು ನೇರವಾಗಿ ಕೃಷ್ಣಾ ನದಿಯಲ್ಲಿ ಬಿದ್ದಿದ್ದಾಳೆ. ತಕ್ಷಣ ಮಗಳನ್ನ ರಕ್ಷಿಸಲು ತಂದೆ ನದಿಗೆ ಹಾರಿದ್ದಾರೆ. ಆದರೆ ದಸ್ತಗೀರ್ ಸಹ ಮಗಳ ಜೊತೆ ನೀರುಪಾಲಾಗಿದ್ದಾರೆ. ಸದ್ಯ ತಂದೆ ಮಗಳ ಶವಗಳನ್ನ ಹೊರತಗೆಯಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಮಳೆಗಾಲದ ಪ್ರವಾಹ ಸಂದರ್ಭದಲ್ಲಿ ಈ ಸೇತುವೆ ಮುಳುಗುತ್ತಿದ್ದ ಕಾರಣ ಸಮೀಪದಲ್ಲೇ ದೊಡ್ಡ ಸೇತುವೆಯನ್ನು ನಿರ್ಮಾಣ ಮಾಡಲಾಗಿದೆ. ಹೊಸ ಸೇತುವೆ ನಿರ್ಮಾಣ ಆಗಿದ್ದರೂ ತಡೆಗೋಡೆ ಇಲ್ಲದ ಹಳೆ ಸೇತುವೆಯಲ್ಲಿ ಜನರು ಓಡಾಟ ಮಾಡುತ್ತಿದ್ದಾರೆ. ಈ ಹಳೆ ಸೇತುವೆಯಲ್ಲಿ ದಸ್ತಗೀರ್ ಗೌಂಡಿ ಬೈಕ್ ಚಲಾಯಿಸಿದ ಪರಿಣಾಮ ಈ ದುರಂತ ಸಂಭವಿಸಿದೆ. ಸ್ಥಳಕ್ಕೆ ಎಸ್.ಪಿ ರಿಷ್ಯಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.