ನಬಾರ್ಡ್ ನೆರವು ಕಡಿತದಿಂದ ರೈತರಿಗೆ ಸಂಕಷ್ಟ – ಜಿ.ಕುಮಾರ್ ನಾಯಕ್ ಕಳವಳ

Public TV
2 Min Read
G Kumar Naik

ನವದೆಹಲಿ: ಅಲ್ಪಾವಧಿ ಬೆಳೆ ಸಾಲ ವಿತರಣೆಗೆ ಸಾಧ್ಯವಾಗುವಂತೆ ಪ್ರಸಕ್ತ ಸಾಲಿನಲ್ಲಿ ಕರ್ನಾಟಕಕ್ಕೆ ಒದಗಿಸಿರುವ ನಬಾರ್ಡ್ (NABARD) ನೆರವು ಕಡಿತಗೊಳಿಸಿರುವುದರಿಂದ ರೈತರು ಸಂಕಷ್ಟಕ್ಕೆ ಈಡಾಗಿದ್ದಾರೆ. ಈ ಬಗ್ಗೆ ಕೇಂದ್ರ ಸರ್ಕಾರ ತುರ್ತು ಗಮನ ಹರಿಸಬೇಕು ಎಂದು ರಾಯಚೂರು (Raichuru) ಸಂಸದ ಜಿ.ಕುಮಾರ್ ನಾಯಕ್ (G Kumar Naik) ಕಳವಳ ವ್ಯಕ್ತಪಡಿಸಿದರು.

ಲೋಕಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಹಣಕಾಸು ಸಚಿವರಿಗೆ ಸೋಮವಾರ ಪ್ರಶ್ನೆ ಕೇಳಿದ ಅವರು, ರಾಷ್ಟ್ರೀಕೃತ ಬ್ಯಾಂಕ್‌ಗಳು ನಗರ ಪ್ರದೇಶದ ಜನರಿಗೆ ಹೆಚ್ಚು ಸಾಲ ಕೊಡುತ್ತವೆ. ಅವುಗಳ ಬಡ್ಡಿ ದರ ಹೆಚ್ಚು ಇರುತ್ತವೆ. ಆದರೆ, ಕೃಷಿಕರಿಗೆ ಸಾಲ ನೀಡಲು ಹಿಂದೇಟು ಹಾಕುತ್ತವೆ. ನಬಾರ್ಡ್ ನೆರವು ಕಡಿತದಿಂದ ಕಲ್ಯಾಣ ಕರ್ನಾಟಕ, ಅಭಿವೃದ್ಧಿ ಆಕಾಂಕ್ಷಿ ಹಾಗೂ ಹಿಂದುಳಿದ ಜಿಲ್ಲೆಗಳ ರೈತರಿಗೆ ಭಾರಿ ತೊಂದರೆ ಆಗಿದೆ ಎಂದು ಗಮನಸೆಳೆದರು.ಇದನ್ನೂ ಓದಿ: PUBLiC TV Impact | ಬಾಣಂತಿಯರ ಸಾವಿನ ವರದಿ ಬೆನ್ನಲ್ಲೇ ಎಚ್ಚೆತ್ತ ಜಿಲ್ಲಾಡಳಿತ – ಆಸ್ಪತ್ರೆಗೆ ಅಧಿಕಾರಿಗಳು ಭೇಟಿ

2024-25ನೇ ಸಾಲಿನಲ್ಲಿ ಕರ್ನಾಟಕ ಸರ್ಕಾರವು 35 ಲಕ್ಷ ರೈತರಿಗೆ 25 ಸಾವಿರ ಕೋಟಿ ರೂ. ಅಲ್ಪಾವಧಿ ಕೃಷಿ ಸಾಲ ವಿತರಿಸುವ ಗುರಿ ಹೊಂದಿದೆ. 2023-24ರಲ್ಲಿ ರಾಜ್ಯಕ್ಕೆ ನಬಾರ್ಡ್ 5,600 ಕೋಟಿ ರೂ. ಸಾಲ ಕೊಟ್ಟಿತ್ತು. ಈ ವರ್ಷ ಅದನ್ನು 2400 ಕೋಟಿ ರೂ.ಗೆ ಇಳಿಸಲಾಗಿದೆ. ಸಣ್ಣ ರೈತರಿಗೆ ಸಾಲ ಸಿಗದ ಸ್ಥಿತಿ ನಿರ್ಮಾಣವಾಗಿದೆ ಎಂದರು.

ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಉತ್ತರಿಸಿ, ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ಈ ಪ್ರಕ್ರಿಯೆ ಸುಗಮವಾಗಿ ನಡೆಯುತ್ತಿದೆ. ಸಣ್ಣ ರೈತರ ಉನ್ನತಿಗೆ ಸರ್ಕಾರ ಗಮನ ಹರಿಸಿದೆ ಎಂದು ಪ್ರತಿಕ್ರಿಯಿಸಿದರು. ಇದನ್ನೂ ಓದಿ: ‘ಯುಐ’ ಚಿತ್ರದ ಭಾಗವಾಗಿರೋದು ನನ್ನ ಅದೃಷ್ಟ: ನಿಧಿ ಸುಬ್ಬಯ್ಯ

Share This Article