– ಅಮರಣಾಂತ ಉಪವಾಸ ಸತ್ಯಾಗ್ರಹದ ಎಚ್ಚರಿಕೆ ನೀಡಿದ ರೈತರು
ವಿಜಯಪುರ: ಜಿಲ್ಲೆಯಲ್ಲಿ ವಕ್ಫ್ ವಿರೋಧಿಸಿ ರೈತರು ಅಹೋರಾತ್ರಿ ಹೋರಾಟ ನಡೆಸಿದ್ದು, ಯಶಸ್ವಿಯಾಗಿ ಮುಂದುವರಿದಿದೆ.
ವಕ್ಫ್ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಕಚೇರಿ ಎದುರೇ ಠಿಕಾಣಿ ಹೂಡಿರುವ ರೈತರು ರಾತ್ರಿಯಿಂದಲೂ ಪ್ರತಿಭಟನೆ ನಡೆಸುತ್ತಿದ್ದಾರೆ.
ರಾಜ್ಯದಲ್ಲಿ ದೀಪಾವಳಿ ಸಂಭ್ರಮ ಮನೆ ಮಾಡಿದ್ದರೆ, ವಿಜಯಪುರ ರೈತರು ಕರಾಳ ದೀಪಾವಳಿ ಆಚರಿಸುತ್ತಿದ್ದಾರೆ. ನಗರದ ಸಿದ್ದೇಶ್ವರ ದೇವಸ್ಥಾನದಿಂದ ಪ್ರತಿಭಟನಾ ಮೆರವಣಿಗೆ ಪ್ರಾರಂಭಿಸಿದ ರೈತ ಸಂಘಟನೆಗಳು ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.ಇದನ್ನೂ ಓದಿ: ಇಂದು ಬೆಳಗ್ಗೆ 10:30ಕ್ಕೆ ದರ್ಶನ್ ಜಾಮೀನು ಭವಿಷ್ಯ ಪ್ರಕಟ
ನಗರದ ಗಾಂಧಿಚೌಕ್ನಲ್ಲಿ ಮಾನವ ಸರಪಳಿ ನಿರ್ಮಿಸಿ ಆಕ್ರೋಶ ವ್ಯಕ್ತಪಡಿಸಿ, ಅಲ್ಲಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಸಾಗಿತು. ಜಿಲ್ಲಾಧಿಕಾರಿಗಳ ಕಚೇರಿಯ ಎದುರು ಸಿಎಂ ಸಿದ್ದರಾಮಯ್ಯ, ಸಚಿವ ಜಮೀರ ಅಹ್ಮದ್ ಬ್ಯಾನರ್ಗಳನ್ನು ಹಿಡಿದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲಿಯೇ ಅಡುಗೆ, ಊಟ ಮಾಡಿ ಅಲ್ಲಿಯೇ ಮಲಗಿ ಅಹೋರಾತ್ರಿ ಅನಿರ್ದಿಷ್ಟ ಹೋರಾಟ ಪ್ರಾರಂಭಿಸಿದ್ದಾರೆ.
ರಾಜ್ಯ ಸರ್ಕಾರ ಕೇವಲ ಯಾವುದೋ ಒಂದು ಆದೇಶ ಪ್ರತಿ ತೋರಿಸಿ ನಮ್ಮನ್ನ ಯಾಮಾರಿಸಲು ಸಾಧ್ಯವಿಲ್ಲ. ಎಲ್ಲಿಯವರೆಗೂ ರೈತರ ಪಹಣಿಯಲ್ಲಿರುವ ವಕ್ಫ್ ಬೋರ್ಡ್ ಹೆಸರು ತೆಗೆದು ಹಾಕುವುದಿಲ್ಲವೋ ಅಲ್ಲಿಯವರೆಗೂ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದು ಎಚ್ಚರಿಸಿದ್ದಾರೆ.
ಸರ್ಕಾರ ಈ ಹೋರಾಟಕ್ಕೆ ಜಗ್ಗದಿದ್ದರೆ ಶವಸಂಸ್ಕಾರ, ತಿಥಿ ಕಾರ್ಯಕ್ರಮ, ಕತ್ತೆ ಚಳವಳಿ ಸೇರಿದಂತೆ ಅಮರಣಾಂತ ಉಪವಾಸ ಸತ್ಯಾಗ್ರಹ ಮಾಡುತ್ತೇವೆ. ಅನ್ನದಾತರ ಪಾಲಿಗೆ ಈ ಬಾರಿ ರಾಜ್ಯ ಸರ್ಕಾರ ಕರಾಳ ದೀಪಾವಳಿಯನ್ನು ಉಡುಗೊರೆಯಾಗಿ ನೀಡಿದೆ. ಇನ್ನೂ ಸ್ಥಳಕ್ಕೆ ಇಂದು (ಅ.30) ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಭೇಟಿ ನೀಡುವಂತೆ ರೈತರು ಹೋರಾಟಕ್ಕೆ ಬೆಂಬಲ ನೀಡಲಿದ್ದಾರೆ. ಇದು ಅನ್ನದಾತರ ಹೋರಾಟ. ಇದಕ್ಕೆ ಯಾರೇ ಬೆಂಬಲ ನೀಡಿದರು ನಾವು ಸ್ವಾಗತ ಮಾಡುತ್ತೇವೆ ಎಂದು ರೈತರು ಹೇಳಿದ್ದಾರೆ.
ಈ ಹೋರಾಟವನ್ನು ಕೈಬಿಡಲು ರಾತ್ರೋರಾತ್ರಿ ಎಡಿಸಿ ಸೋಮಲಿಂಗ ಗೆಣ್ಣೂರ ಬಂದು ರೈತರಿಗೆ ಇಂಡಿ ಎಸಿ ಆದೇಶದ ಕಾಪಿ ತೋರಿಸಿ ಹೋರಾಟ ಕೈ ಬಿಡಲು ಮನವಿ ಮಾಡಿದರು. ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ ಸೇರಿದಂತೆ ಪೊಲೀಸ್ ಸಿಬ್ಬಂದಿ ರೈತರಿಗೆ ಹೋರಾಟ ಕೈಬಿಡಲು ಒತ್ತಾಯಿಸಿದರು. ಆದರೆ ರೈತರು ಇದ್ಯಾವುದಕ್ಕೂ ಒಪ್ಪಲಿಲ್ಲ. ಡಿಸಿ ಕಚೇರಿ ಎದುರು ಸ್ಥಳ ಖಾಲಿ ಮಾಡಿ ನಿಮಗೆ ಬೇರೆ ಜಾಗ ಕೊಡುತ್ತೇವೆ ಅಲ್ಲಿ ಹೋರಾಟ ಮುಂದುವರೆಸಿ ಎಂದು ತಿಳಿಸಿದರು. ಪೊಲೀಸ್ ಹಾಗೂ ರೈತರ ಮಧ್ಯೆ ಮಾತಿನ ಚಕಮಕಿ ಏರ್ಪಟ್ಟು, ರೈತರು ಇಂದು (ಬುಧವಾರ) ಹೋರಾಟ ಮುಂದುವರಿಸುವುದಾಗಿ ಹೇಳಿದ್ದಾರೆ.ಇದನ್ನೂ ಓದಿ: ದಿನ ಭವಿಷ್ಯ 30-10-2024