ಚಿಕ್ಕಬಳ್ಳಾಪುರ: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪಕ್ಕದಲ್ಲಿ ಈಗಾಗಲೇ ಕೆಐಡಿಬಿ ಹಂತ-ಹಂತವಾಗಿ ಭೂಮಿ ಸ್ವಾಧೀನ ಪಡಿಸಿಕೊಳ್ತಿದೆ. ಈ ಹಿನ್ನೆಲೆ ರೈತರು ಆಕ್ರೋಶಗೊಂಡಿದ್ದು, ಇಂದು ಬೃಹತ್ ಟ್ರಾಕ್ಟರ್ ರ್ಯಾಲಿ ಮಾಡಿದ್ದಾರೆ.
ಕಳೆದ ಮೂರು ವರ್ಷಗಳಿಂದ ಸಾವಿರಾರು ಎಕರೆ ರೈತರ ಭೂಮಿಯನ್ನ ಸ್ವಾಧೀನಪಡಿಸಿಕೊಂಡಿದ್ದ ಕೆಐಡಿಬಿ, ಇದೀಗ ಎರಡನೇ ಹಂತವಾಗಿ ರೈತರ ಫಲವತ್ತಾದ ಭೂಮಿ ಸ್ವಾಧೀನಕ್ಕೆ ಮುಂದಾಗಿದೆ. ಇದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ ಇಂದು ರೈತರು ಟ್ರಾಕ್ಟರ್ ರ್ಯಾಲಿ ಮಾಡಿಕೊಂಡು ಬೆಂಗಳೂರು ಗ್ರಾಮಾಂತರ ಜಿಲ್ಲಾ ಡಿಸಿ ಭವನಕ್ಕೆ ಲಗ್ಗೆ ಇಟ್ಟು ಆಕ್ರೋಶ ಹೊರಹಾಕಿದ್ದಾರೆ.
ಸರ್ಕಾರ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪಕ್ಕದ ದೇವನಹಳ್ಳಿಯ ಹಲವು ಹಳ್ಳಿಗಳಲ್ಲಿ ಮುಂದಿನ ದಿನ ಕೈಗಾರಿಕೆ ಅನುಕೂಲವಾಗಲಿ ಎಂದು ಸಾವಿರಾರು ಎಕರೆ ಭೂಮಿಯನ್ನ ಸ್ವಾಧೀನಪಡಿಸಿಕೊಂಡಿದೆ. ರೈತರಿಗೆ ಮೊದಲನೇ ಹಂತದ ಭೂಮಿಗೆ ಪರಿಹಾರ ಕೊಡುವ ಪ್ರಕ್ರಿಯೆ ಕೂಡ ಮುಗಿದಿಲ್ಲ. ಇದೀಗ 13 ಹಳ್ಳಿಗಳ 1700 ಎಕರೆ ರೈತರ ಭೂಮಿಯನ್ನ ಎರಡನೇ ಹಂತದಲ್ಲಿ ಭೂ ಸ್ವಾಧೀನಕ್ಕೆ ಮುಂದಾಗಿದ್ದು, ರೈತರ ಆಕ್ರೋಶಗೊಂಡಿದ್ದಾರೆ. ಇದನ್ನೂ ಓದಿ: ಮತ್ತೆ ಕ್ಲೋಸ್ ಆಯ್ತು ಫ್ಲೈಓವರ್ – ಕಳಪೆ ಕಾಮಗಾರಿ ಎಂದ ತಜ್ಞರು
15 ದಿನಗಳಿಂದ ಭೂ-ಸ್ವಾಧೀನ ಕೈಬಿಡುವಂತೆ ರೈತರು ಧರಣಿ ನಡೆಸಿ 15 ದಿನಗಳ ಗಡುವನ್ನ ನೀಡಿದ್ದರು. ಆದ್ರೆ ಫಲಿತಾಂಶ ಬಾರದ ಕಾರಣ ಇಂದು 13 ಹಳ್ಳಿಗಳ ರೈತರು ಡಿಸಿ ಕಚೇರಿವರೆಗೂ ಟ್ರಾಕ್ಟರ್ ರ್ಯಾಲಿ ನಡೆಸಿ ಭೂ ಸ್ವಾಧೀನ ಪ್ರಕ್ರಿಯೆ ಕೈಬಿಡುವಂತೆ ಆಗ್ರಹಿಸಿದ್ದಾರೆ. ರೈತರು ಇಂದು ಟ್ರಾಕ್ಟರ್ ರ್ಯಾಲಿ ನಡೆಸಲು, ಎಲ್ಲ ಹಳ್ಳಿಗಳಿಂದ ಟ್ರಾಕ್ಟರ್ ಗಳು ಚನ್ನರಾಯಪಟ್ಟಣಕ್ಕೆ ತಂದು ಡಿಸಿ ಕಚೇರಿಗೆ ಹೊರಡಲು ಯೋಜನೆ ರೂಪಿಸಿದ್ದರು. ಹೀಗಾಗಿ ಪೊಲೀಸ್ ಇಲಾಖೆ ಅಧಿವೇಶನ ಹಿನ್ನೆಲೆ ರೈತರ ಹೋರಾಟ ಜೋರಾಗಬಹುದೆಂದು ಟ್ರಾಕ್ಟರ್ ಗಳನ್ನ ಸೀಜ್ ಮಾಡಲು ಬೆಳಗ್ಗೆಯಿಂದ ಮುಂದಾಗಿದ್ದರು.
ಪರಿಣಾಮ 100ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳನ್ನ ನಿಯೋಜನೆ ಮಾಡಲಾಗಿತ್ತು. ಜೊತೆಗೆ ಚನ್ನರಾಯಪಟ್ಟಣ ಸರ್ಕಲ್ ನಿಂದ ಟ್ರಾಕ್ಟರ್ ಗಳು ತೆರಳಲು ಪೊಲೀಸರು ನಿರಾಕರಿಸಿದ್ರು. ಈ ಹೋರಾಟ ನೇತೃತ್ವ ವಹಿಸಿದ್ದ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಬೈರೇಗೌಡ ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಕೊನೆಗೆ ನಾಲ್ಕು ಟ್ರಾಕ್ಟರ್ ಗಳಿಗೆ ಪೊಲೀಸರು ತೆರಳಲು ಅನುಮತಿ ನೀಡಿದ್ದು, ಟ್ರಾಕ್ಟರ್ ಗಳಲ್ಲೆ ಕುಳಿತ ರೈತರು ಡಿಸಿ ಕಚೇರಿವರೆಗೂ ರ್ಯಾಲಿಯಲ್ಲಿ ತೆರಳಿ ಭೂ-ಸ್ವಾಧೀನ ಕೈಬಿಡುವಂತೆ ಪ್ರತಿಭಟನೆ ನಡೆಸಿದ್ರು. ಇದನ್ನೂ ಓದಿ: ಪ್ರಿಯತಮನ ಕೊಲೆ ಮಾಡಿದ ಪ್ರಿಯತಮೆ 7 ವರ್ಷದ ಬಳಿಕ ಅರೆಸ್ಟ್!
ಕೃಷಿ ಆಧಾರಿತ ಭೂಮಿಗಳನ್ನ ಸರ್ಕಾರ ಸ್ವಾಧೀನಪಡಿಸಿಕೊಂಡು ರೈತರನ್ನ ಸಂಕಷ್ಟಕ್ಕೆ ದುಡುತ್ತಿದೆ ಅಂತ ಆಕ್ರೋಶ ಹೊರಹಾಕಿದ್ರು. ವಿಮಾನ ನಿಲ್ದಾಣದ ಪಕ್ಕದ ಚನ್ನರಾಯಪಟ್ಟಣ ಹೋಬಳಿಯ ಹಲವು ಹಳ್ಳಿಗಳ ರೈತರ ಭೂಮಿಯನ್ನ ಮುಂದಿನ ಕೈಗಾರಿಕಾ ಘಟಕ ಸ್ಥಾಪನೆಗೆ ಕೆಐಡಿಬಿ ಭೂ-ಸ್ವಾಧೀನಕ್ಕೆ ಮುಂದಾಗಿದೆ. ಇದಕ್ಕೆ ಹಲವು ರೈತರು ತೀವ್ರ ವಿರೋಧ ವ್ಯಕ್ತಪಡಿಸಿ ಎರಡು ಬಾರಿ ಬೃಹತ್ ಹೋರಾಟ ಮಾಡಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.