ಕೊಪ್ಪಳ: ಸಾಮಾನ್ಯವಾಗಿ ಹೊಲಗಳಲ್ಲಿ ಕಳೆ ತಗೆಯಲು ಎತ್ತುಗಳು ಬೇಕು. ಆದರೆ ರೈತರೊಬ್ಬರು ಎತ್ತುಗಳಿಲ್ಲದೆ ಬೆಳೆಗಳ ಮಧ್ಯೆ ಬೆಳೆದ ಕಳೆಯನ್ನ ತೆಗೆದಿದ್ದಾರೆ
ಹೌದು ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಬಿನ್ನಾಳ ಗ್ರಾಮದಲ್ಲಿ ರೈತ ಶಿವಾನಂದ ಕರೆಯಣ್ಣವರ ಎತ್ತುಗಳಿಲ್ಲದೆ ಕಳೆ ತೆಗೆದಿದ್ದಾರೆ. ಕೃಷಿ ಸಂಪರ್ಕ ಕೇಂದ್ರದಲ್ಲಿ ದೊರೆಯುತ್ತಿರುವ ಕೈ ಚಾಲಿತ ಯಂತ್ರದಲ್ಲಿ ಶಿವಾನಂದ ತನ್ನ ಹೊಲದಲ್ಲಿ ಬೆಳೆದ ಕಳೆ ತಗೆಯಲು ಮುಂದಾಗಿದ್ದಾರೆ. ಎತ್ತುಗಳಿಲ್ಲದ ಕಾರಣ ಬಾಡಿಗೆ ಎತ್ತು ತಂದು ಕಳೆ ತಗೆಯಲು ಹಣವಿರದ ಕಾರಣ ಕೈ ಚಾಲಿತ ಯಂತ್ರದ ಮೊರೆ ಹೋಗಿದ್ದರು.
ಸಾಮಾನ್ಯವಾಗಿ ಒಂದು ಎಕರೆಯಲ್ಲಿ ಕಳೆ(ಕಸ) ತಗೆಯಲು ಎತ್ತುಗಳಿಗೆ 500 ರಿಂದ 1000 ಬಾಡಿಗೆ ನೀಡಬೇಕಾಗುತ್ತದೆ. ಬಾಡಿಗೆ ನೀಡಿದರೂ ಎತ್ತುಗಳು ಸರಿಯಾದ ಸಮಯಕ್ಕೆ ಸಿಗೋದಿಲ್ಲ. ಇದರಿಂದ ರೋಸಿಗೋದ ಶಿವಾನಂದ ಕೃಷಿ ಸಂಪರ್ಕ ಕೇಂದ್ರದ ಸಹಾಯ ಕೇಳಿದ್ದಾರೆ.
ಅಧಿಕಾರಿಗಳು ಕೈ ಚಾಲಿತ ಯಂತ್ರದ ಬಗ್ಗೆ ಮಾಹಿತಿ ನೀಡಿದ್ದಾರೆ. ಎತ್ತುಗಳ ಬದಲಿಗೆ ಇದೆ ಒಳ್ಳೆಯದು ಅಂದುಕೊಂಡ ರೈತ ಶಿವಾನಂದ ಇದೀಗ ಕೈ ಚಾಲಿತ ಯಂತ್ರದಿಂದ ಕಳೆ ತೆಗೆದಿದ್ದಾರೆ. ಎತ್ತುಗಳಿಂದ ದಿನವಿಡಿ ಕೆಲಸ ಮಾಡಿದರೂ ಒಂದು ಎಕರೆ ಕಳೆ ತಗೆಯಲು ಸಾಧ್ಯವಿಲ್ಲ. ಆದರೆ ಈ ಯಂತ್ರದಿಂದ ಒಂದು ದಿನಕ್ಕೆ ಎರಡರಿಂದ ಮೂರು ಎಕರೆ ಕಳೆ ತಗೆಯಬಹುದು ಎಂದು ಶಿವಾನಂದ ಹೇಳಿದ್ದಾರೆ.