ಮೈಸೂರು: ಖಾಸಗಿ ಫೈನಾನ್ಸ್ ಕಂಪೆನಿಯಿಂದ ನೋಟಿಸ್ ಪಡೆದ ರೈತ ಕುಸಿದು ಬಿದ್ದು ಸಾವನ್ನಪ್ಪಿರುವ ದಾರುಣ ಘಟನೆ ಮೈಸೂರಿನಲ್ಲಿ ನಡೆದಿದೆ.
30 ವರ್ಷದ ಪುಟ್ಟೇಗೌಡ ಮೃತ ರೈತ. ನಂಜನಗೂಡು ತಾಲೂಕು ಕಂದೇಗಾಲ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಎರಡು ವರ್ಷಗಳ ಹಿಂದೆ ಮಹೇಂದ್ರ ಫೈನಾನ್ಸ್ ಸಂಸ್ಥೆಯಿಂದ ಪುಟ್ಟೇಗೌಡ ಅವರು ಟ್ರ್ಯಾಕ್ಟರ್ ಖರೀದಿಗಾಗಿ 6 ಲಕ್ಷ ರೂ. ಸಾಲ ಪಡೆದಿದ್ದರು. ಆದ್ರೆ ಸಾಲದ ಹಣ ಹಿಂದಿರುಗಿಸಲು ವಿಳಂಬವಾದ ಹಿನ್ನಲೆಯಲ್ಲಿ ಇಂದು ಬ್ಯಾಂಕ್ ಸಿಬ್ಬಂದಿ ಮನೆಗೆ ಬಂದು ಟ್ರ್ಯಾಕ್ಟರ್ ಜಪ್ತಿ ಮಾಡುವುದಾಗಿ ನೊಟೀಸ್ ನೀಡಿದ್ದಾರೆ.
ನೋಟಿಸ್ ಪಡೆಯುತ್ತಿದ್ದಂತೆಯೇ ಪುಟ್ಟೇಗೌಡ ಅವರು ಕುಸಿದು ಬಿದ್ದಿದ್ದು, ಕೆಲ ಕ್ಷಣಗಳಲ್ಲೇ ಸಾವನ್ನಪ್ಪಿದ್ದಾರೆ. ನೋಟಿಸ್ ನಿಂದ ಪುಟ್ಟೇಗೌಡ ಅವರಿಗೆ ಅಘಾತವಾಗಿ ಹೃದಯಾಘಾತವಾಗಿರುವ ಶಂಕೆ ವ್ಯಕ್ತವಾಗಿದೆ.