ಬೆಂಗಳೂರು: ದಿವಂಗತ ನಟ ಪುನೀತ್ ಕುಟುಂಬಸ್ಥರು ಐದನೇ ದಿನದ ಶಾಸ್ತ್ರ ಹಾಲುತುಪ್ಪದ ಪೂಜೆ ಬಳಿಕ ಅಪ್ಪು ಸಮಾಧಿ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ನೀಡಲಾಗಿದೆ.
ಬೆಳಗ್ಗೆಯಿಂದ ಸ್ಟುಡಿಯೋ ಹೊರಗೆ ಕಾದುನಿಂತಿದ್ದ ಅಭಿಮಾನಿ ಬಳಗಕ್ಕೆ ಸಂಜೆ 6.30ಕ್ಕೆ, ಅಪ್ಪು ಸಮಾಧಿ ದರ್ಶನಕ್ಕೆ ಅವಕಾಶ ನೀಡಲಾಯ್ತು. ಕೆಲ ಅಭಿಮಾನಿಗಳು ಅಪ್ಪು ಸಮಾಧಿ ದರ್ಶಿಸಿ ಭಾವುಕರಾದರು. ನಾಳೆ ಬೆಳಗ್ಗೆ 9 ಗಂಟೆಯಿಂದ ಸಂಜೆ ಏಳು ಗಂಟೆಯವರೆಗೆ ಪ್ರತಿನಿತ್ಯ ಅಪ್ಪು ಸಮಾಧಿ ದರ್ಶನಕ್ಕೆ ಅವಕಾಶ ನೀಡುವುದಾಗಿ ಬಿಬಿಎಂಪಿ ತಿಳಿಸಿದೆ.
ಸಮಾಧಿ ದರ್ಶನಕ್ಕೆ ಅವಕಾಶ ನೀಡುವ ಕುರಿತಂತೆ ಸಂಜೆಯವರೆಗೂ ಗೊಂದಲ ಮುಂದುವರಿದಿತ್ತು. ಓರ್ವ ಅಭಿಮಾನಿಯಂತೂ ಬ್ಲೇಡ್ ಹಿಡಿದು ಆತ್ಮಹತ್ಯೆ ಮಾಡ್ಕೊಳ್ಳೋದಾಗಿ ಬೆದರಿಸಿದ. ಕೊನೆಗೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಬೇಕಾದ ಅನಿವಾರ್ಯತೆ ಎದುರಾಯಿತು. ಇದನ್ನೂ ಓದಿ: ಅಪ್ಪು ಜೊತೆಗಿನ ಲಾಸ್ಟ್ ಸೆಲ್ಫಿ ಶೇರ್ ಮಾಡಿದ ರಾಘಣ್ಣ
ಪುನೀತ್ ಅಕಾಲಿಕ ನಿಧನಕ್ಕೆ ಮರುಗಿದವರೇ ಇಲ್ಲ. ಕೋಟ್ಯಂತರ ಅಭಿಮಾನಿಗಳ ಪ್ರಾರ್ಥನೆಯಲ್ಲಿ ಒಬ್ಬರ ಪ್ರಾರ್ಥನೆಯಾದರೂ ಫಲಿಸಬಾರದಿತ್ತೇ ಎಂದು ಈಗಲೂ ಕಣ್ಣೀರಿಡುತ್ತಿದ್ದಾರೆ. ಆದರೆ ಪುನೀತ್ ರಾಜ್ಕುಮಾರ್ ಅವರ ಕೊನೆ ಕ್ಷಣದ ವಿಡಿಯೋ ನೋಡಿದ್ರೇ ಇನ್ನಷ್ಟು ಭಾವುಕರಾಗುವುದು ಸುಳ್ಳಲ್ಲ. ಜಿಮ್ ಮಾಡುವ ವೇಳೆ ಎದೆ ನೋವು ಕಾಣಿಸಿಕೊಂಡ ಪರಿಣಾಮ ಪುನೀತ್ ರಾಜ್ಕುಮಾರ್ ಆಸ್ಪತ್ರೆಗೆ ಹೋಗಿದ್ರು. ಏನೂ ಆಗಿಲ್ಲ ಎಂಬಂತೆಯೇ ಶುಕ್ರವಾರ ಬೆಳಗ್ಗೆ 11 ಗಂಟೆಗೆ ಮನೆಯಿಂದ ಕಾರು ಹತ್ತಿದ್ರು. ಪತ್ನಿ ಜೊತೆ ಬಿಳಿ ಕಾರಿನಲ್ಲಿ ಹಿಂಬದಿ ಸೀಟಿನಲ್ಲಿ ಕೂತು ಆಸ್ಪತ್ರೆಗೆ ಹೋಗಿದ್ದರು. ಆದರೆ ಇದಾದ ಅರ್ಧ ಗಂಟೆಯಲ್ಲೇ ಪುನೀತ್ ಪ್ರಾಣಪಕ್ಷಿ ಹಾರಿ ಹೋಗಿತ್ತು. ಇದನ್ನೂ ಓದಿ: ಅಪ್ಪು ಕೊನೆ ಕ್ಷಣದ ವಿಡಿಯೋ ಲಭ್ಯ