ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಹದ್ದು ಮೀರುತ್ತಿದೆ ಪುಡಾರಿಗಳ ಹಾವಳಿ. ದಿನ ಕಳೆದಂತೆ ನಗರದಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ. ಮದುವೆ ಮುಗಿಸಿ ಮನೆಗೆ ಬರುತ್ತಿದ್ದ ಕುಟುಂಬದ ಮೇಲೆ ಅಪರಿಚಿತರ ಗ್ಯಾಂಗ್ ಅಟ್ಯಾಕ್ ಮಾಡಿರುವ ಘಟನೆ ಕೆಜಿ ಹಳ್ಳಿಯ ಪಿಳ್ಳಣ್ಣ ಗಾರ್ಡನ್ ಬಳಿ ನಡೆದಿತ್ತು. ಈ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬೆಂಗಳೂರಿನಲ್ಲಿ ಇತ್ತೀಚಿಗೆ ಹೊಡಿ ಬಡಿ ಪ್ರವೃತ್ತಿ ಅತಿಯಾಗುತ್ತಿದೆ. ಸಾರ್ವಜನಿಕರು ತಡರಾತ್ರಿ ಓಡಾಡುವುದಕ್ಕೆ ಭಯಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಸಯ್ಯದ್ ನೌಶದ್ ಎಂಬವರು ಅಕ್ಕನ ಮಗಳ ಮದುವೆ ಮುಗಿಸಿಕೊಂಡು ಕೆಜಿ ಹಳ್ಳಿಯ ಪಿಳ್ಳಣ್ಣ ಗಾರ್ಡನ್ ನಲ್ಲಿರುವ ಮನೆಗೆ ಕುಟುಂಬದೊಂದಿಗೆ ಬರುತ್ತಿರುವಾಗ ನಾಲ್ಕೈದು ಮಂದಿಯ ಗ್ಯಾಂಗ್ ಮರದ ದೊಣ್ಣೆಯಿಂದ ಹಲ್ಲೆ ಮಾಡಿ ಕ್ಷಣಾರ್ಧದಲ್ಲಿ ಅಲ್ಲಿಂದ ಪರಾರಿಯಾಗಿತ್ತು. ಇದನ್ನೂ ಓದಿ: ಸುಪ್ರೀಂಕೋರ್ಟ್ ಮುಂಭಾಗದಲ್ಲಿಯೇ ಆತ್ಮಹತ್ಯೆಗೆ ಯತ್ನಿಸಿದ ಇಬ್ಬರು
ಕಾರು ಇಳಿಯೋಕು ಬಿಡದೆ ಕಾರು ತಡೆದು ಮನಸ್ಸೋ ಇಚ್ಛೆ ಥಳಿಸಿದ ಅಪರಿಚಿತರ ಗ್ಯಾಂಗ್ ಅಲ್ಲಿಂದ ಎಸ್ಕೇಪ್ ಆಗಿದ್ದು, ಹಲ್ಲೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಬಗ್ಗೆ ಕೆಜಿ ಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸದ್ಯ ಘಟನೆ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಆರೋಪಿಗಳ ಪ್ರಾಥಮಿಕ ತನಿಖೆ ವೇಳೆ ಮಳೆ ಬರುತ್ತಿರುವಾಗ ಮಳೆ ನೀರು ನಮ್ಮ ಮೇಲೆ ಚೆಲ್ಲಿದ್ದಕ್ಕೆ ಹಲ್ಲೆ ಮಾಡಿದ್ದಾಗಿ ಹೇಳಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಮನೆಯಲ್ಲೇ ತಾಳಿ ಕಟ್ಟಿ ಸಹ ನಟಿ ಜೊತೆ ಮದುವೆ ನಾಟಕ, ಒಡವೆ ಎಗರಿಸಿ ಎಸ್ಕೇಪ್