ತುಮಕೂರು: ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ಅವರ ಕ್ಷೇತ್ರ ಕೊರಟಗೆರೆಯಲ್ಲಿ ಒಂಟಿ ಕುಟುಂಬವೊಂದು ಯುವಕನೋರ್ವನ ಕಾಟದಿಂದ ಬೇಸತ್ತು ಹೋಗಿದೆ.
ಯುವಕನ ಕಾಟದಿಂದಾಗಿ ಕುಟುಂಬ ಮನೆಯಿಂದ ಹೊರಕ್ಕೆ ಬಾರದೇ ಬೀಗ ಹಾಕಿಕೊಂಡು ಕೂರುವ ಅನಿವಾರ್ಯತೆ ಎದುರಾಗಿದೆ. ಮೋರಗಾನಹಳ್ಳಿಯ ವನಜಾಕ್ಷಿ ಕುಟುಂಬಕ್ಕೆ ಪಕ್ಕದ ಮನೆಯ ನಟೇಶ್ ಎಂಬ ಯುವಕ ಕಾಟ ಕೊಡುತ್ತಿದ್ದಾನೆ. ಇದ್ದಕಿದ್ದ ಹಾಗೆ ಮನೆ ಮೇಲೆ ಕಲ್ಲು ಎಸೀತಾನೆ. ಮನೆಯವರು ಹೊರಗಡೆ ಬಂದರೆ ವಿದ್ಯುತ್ ಬಲ್ಬ್ ಎಸೆದು ಹಲ್ಲೆ ಮಾಡಲು ಮುಂದಾಗ್ತಾನೆ.
ಇದೀಗ ಈ ಯುವಕನ ಕಿರುಕುಳದಿಂದ ವನಜಾಕ್ಷಿ ಕುಟುಂಬ ನೊಂದುಹೋಗಿದೆ. ವನಜಾಕ್ಷಿ ಪತಿ ಬೆಂಗಳೂರಲ್ಲಿ ಕೆಲಸ ಮಾಡುತಿದ್ದು, ವಾರಕೊಮ್ಮೆ ಬಂದು ಹೋಗ್ತಾರೆ. ಪತಿ ಇಲ್ಲದೆ ಇದ್ದ ಸಂದರ್ಭ ನೋಡಿ ನಟೇಶ್, ವೃದ್ಧರು, ಮಕ್ಕಳು ಎನ್ನದೆ ಹಿಂಸೆ ನೀಡ್ತಾ ಇದ್ದಾನೆ. ಕಳೆದ ಎರಡು ತಿಂಗಳಿನಿಂದ ನಟೇಶ್ ಈ ವಿಚಿತ್ರ ವರ್ತನೆ ಮಾಡುತ್ತಿದ್ದಾನೆ. ಒಂದು ವಾರದ ಹಿಂದೆ ವನಜಾಕ್ಷಿ ಮನೆಯಿಂದ ಹೊರಕ್ಕೆ ಬಂದು ಮೊಬೈಲಲ್ಲಿ ಮಾತನಾಡುತ್ತಿದ್ದಾಗ ಮೈಮೇಲೆ ಬಲ್ಬ್ ಎಸೆದಿದ್ದಾನೆ. ಅದೃಷ್ಟವಶಾತ್ ಈ ವೇಳೆ ಬಚಾವ್ ಆಗಿದ್ದಾರೆ.
ಅಷ್ಟಕ್ಕೂ ಈ ಯುವಕನ ವರ್ತನೆಗೆ ಹಳೆಯ ದ್ವೇಷ ಕಾರಣವಂತೆ. ವನಜಾಕ್ಷಿ ಅವರ ನೀರಿನ ಪೈಪ್ ಈತನೇ ಒಡೆದು ಹಾಕಿ ಪುನಃ ರಿಪೇರಿ ಮಾಡಿಕೊಟ್ಟಿದ್ದನಂತೆ. ಇದನ್ನೇ ನೆಪವಾಗಿಸಿಕೊಂಡು ದ್ವೇಷ ಸಾಧಿಸ್ತಾ ಇದ್ದಾನೆ. ಈ ಬಗ್ಗೆ ಕೋಳಾಲ ಪೊಲೀಸರಿಗೆ ದೂರು ನಿಡಿದ್ರೆ ಅವರು ಕೂಡಾ ದೂರು ಸ್ವೀಕರಿಸುತ್ತಿಲ್ಲ. ಅಲ್ಲದೇ ದೂರು ಕೊಟ್ಟರೆ ಊರಿನಿಂದ ಬಹಿಷ್ಕಾರ ಹಾಕುವ ಬೆದರಿಕೆ ಹಾಕಿದ್ದಾರೆ. ಹಾಗಾಗಿ ದಿಕ್ಕು ಕಾಣದೇ ಊರು ತೊರೆಯುವ ನಿರ್ಧಾರ ಕೈಗೊಂಡಿರುವುದಾಗಿ ಕುಟುಂಬ ಪಬ್ಲಿಕ್ ಟಿವಿ ಜೊತೆ ತನ್ನ ಅಳಲು ತೋಡಿಕೊಂಡಿದೆ.