ಲಕ್ನೋ: ಗ್ಯಾಂಗ್ ಸ್ಟಾರ್, ರಾಜಕಾರಣಿ ಅತೀಕ್ ಅಹ್ಮದ್ ಪುತ್ರ (Atiq Ahmed) ಅಸಾದ್ ಮತ್ತು ಸಹಚರನನ್ನು ಕೊಲ್ಲಲು ನಕಲಿ ಎನ್ಕೌಂಟರ್ (Fake Encounter) ಮಾಡಲಾಗಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ (Akhilesh Yadav) ಸರ್ಕಾರದ ವಿರುದ್ಧ ಆರೋಪ ಮಾಡಿದ್ದಾರೆ.
ರಾಜ್ಯವನ್ನು ಕಾಡುತ್ತಿರುವ ನೈಜ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಆಡಳಿತ ಪಕ್ಷ ನಕಲಿ ಎನ್ಕೌಂಟರ್ ನಡೆಸುತ್ತಿದೆ ಎಂದು ಆರೋಪಿಸಿದರು. ಇದನ್ನೂ ಓದಿ: ಉಮೇಶ್ ಪಾಲ್ ಹತ್ಯೆ ಕೇಸ್ – ಗ್ಯಾಂಗ್ ಸ್ಟಾರ್ ಅತಿಕ್ ಪುತ್ರ ಎನ್ಕೌಂಟರ್ಗೆ ಬಲಿ
ಬಿಜೆಪಿಗೆ (BJP) ನ್ಯಾಯಾಲಯಗಳ ಮೇಲೆ ನಂಬಿಕೆ ಇಲ್ಲ. ಅಧಿಕಾರದಲ್ಲಿರುವವರು ಯಾರು ಬದುಕಬೇಕು ಅಥವಾ ಸಾಯಬೇಕು ಎಂದು ನಿರ್ಧರಿಸಲು ಸಾಧ್ಯವಿಲ್ಲ. ಇಂದಿನ ಮತ್ತು ಇತ್ತೀಚಿನ ಎನ್ಕೌಂಟರ್ಗಳ ಬಗ್ಗೆಯೂ ಸಮಗ್ರ ತನಿಖೆಯಾಗಬೇಕು ಎಂದು ಅವರು ಆಗ್ರಹಿಸಿದರು.
ಅಸದ್ ಮತ್ತು ಗುಲಾಮ್ ಮೋಟಾರ್ ಸೈಕಲ್ನಲ್ಲಿ ಪರಾರಿಯಾಗಲು ಪ್ರಯತ್ನಿಸುತ್ತಿದ್ದಾಗ ಝಾನ್ಸಿಯಲ್ಲಿ ವಿಶೇಷ ಕಾರ್ಯಪಡೆ ತಂಡವು ಅವರನ್ನು ತಡೆದಿದೆ. ಈ ವೇಳೆ ಅವರು ಸಿಬ್ಬಂದಿಯ ಮೇಲೆ ಗುಂಡು ಹಾರಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಬಲಿಯಾಗಿದ್ದಾರೆ. ಇವರಿಂದ ಅತ್ಯಾಧುನಿಕ ವಿದೇಶಿ ನಿರ್ಮಿತ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.