ಮಡಿಕೇರಿ: ಗಾಳಿ ವೇಗದಲ್ಲಿ ವಿಶ್ವದೆಲ್ಲಡೆ ಹಬ್ಬುತ್ತಿರುವ ಕೊರೊನಾ ತಡೆಯುವುದಕ್ಕೆ ರಾಜ್ಯ ಸರ್ಕಾರ ವಾರಗಳ ಕಾಲ ಜಾತ್ರೆ, ಉತ್ಸವ ಮುಂತಾದವುಗಳಿಗೆ ಬ್ರೇಕ್ ಹಾಕಿದೆ. ಆದರೆ ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಮಲೆತಿರಿಕೆ ಬೆಟ್ಟದಲ್ಲಿ ಸಾವಿರಾರು ಜನರು ಒಂದೆಡೆ ಸೇರಿ ಜಾತ್ರೆ ಆಚರಿಸುತ್ತಿದ್ದಾರೆ.
ಬೆಟ್ಟದ ಮೇಲಿರುವ ಶಿವನ ದೇವಾಲಯದಲ್ಲಿ ನಡೆಯುವ ಈ ಜಾತ್ರೆಗೆ ಸುತ್ತಮುತ್ತ 12 ಹಳ್ಳಿಗಳಿಂದ ಎರಡು ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿದ್ದಾರೆ. ಒಂದೆಡೆ ಸರ್ಕಾರ ಕೊರೊನಾ ವೈರಸ್ ಅನ್ನು ನಿಯಂತ್ರಿಸುವುದಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರೆ, ಇಲ್ಲಿ ಮಾತ್ರ ಸರ್ಕಾರದ ಈ ನಿಯಮವನ್ನು ಗಾಳಿಗೆ ತೂರಿ ಜಾತ್ರೆ ನಡೆಸಲಾಗುತ್ತಿದೆ.
ಪ್ರತಿ ವರ್ಷ ಮಾರ್ಚ್ 14ರಂದು ಈ ಜಾತ್ರೆ ನಡೆಯುತ್ತಾ ಬಂದಿದ್ದು, ಅದೇ ರೀತಿ ಬಾರಿಯೂ ಜಾತ್ರೆ ನಡೆಯುತ್ತಿದೆ. ಇದು ಜಿಲ್ಲಾಡಳಿತದ ಗಮನಕ್ಕೆ ಬಂದಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಜನರು ಮಾತ್ರ ನಾವು 14 ದಿನಗಳಿಂದ ಅತ್ಯಂತ ಶುದ್ಧದಿಂದ ಇದ್ದು 14ನೇ ದಿನದಂದು ಜಾತ್ರೆ ಆಚರಿಸುತ್ತೇವೆ. ಅದಕ್ಕಿಂತ ಮುಖ್ಯವಾಗಿ ಇಲ್ಲಿಗೆ ಯಾರೂ ಹೊರರಾಜ್ಯ ಅಥವಾ ಹೊರ ದೇಶದವರು ಬರುವುದಿಲ್ಲ. ಆದರಿಂದ ನಮಗೆ ಕೊರೊನಾ ಹರಡುತ್ತದೆ ಎಂಬ ಆತಂಕವಿಲ್ಲ ಎನ್ನುತ್ತಿದ್ದಾರೆ.