ವಿಜಯಪುರ: ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ ಲಾಲ್ ಬಹಾದ್ದೂರ್ ಶಾಸ್ತ್ರಿ ಜಲಾಶಯದ ವಿದ್ಯುತ್ ಉತ್ಪಾದನಾ ಘಟಕ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಂಪೂರ್ಣ ಸ್ಥಗಿತಗೊಂಡಿದೆ.
ಆಲಮಟ್ಟಿ ವಿದ್ಯುತ್ ಉತ್ಪಾದನಾ ಘಟಕದಲ್ಲೇ ನೀರು ನುಗ್ಗಿದ್ದು, ವಿದ್ಯುತ್ ಉತ್ಪಾದನೆ ಮಾಡುತ್ತಿದ್ದ 6 ಘಟಕಗಳು ಜಲಾವೃತಗೊಂಡಿವೆ. ಇದರಿಂದ ನಿತ್ಯ ಉತ್ಪಾದನೆ ಆಗುತ್ತಿದ್ದ ಆರು ವಿದ್ಯುತ್ ಉತ್ಪಾದನಾ ಘಟಕಗಳು ಸಂಪೂರ್ಣ ಸ್ಥಗಿತವಾಗಿವೆ. ವಿದ್ಯುತ್ ಉತ್ಪಾದನೆ ವೇಳೆ ಹೊರಬರುವ ಹೆಚ್ಚುವರಿ ನೀರನ್ನು ರಾತ್ರಿಯಿಡಿ ಹೊರ ಹಾಕಬೇಕಿದ್ದ ಸಿಬ್ಬಂದಿ ನಿದ್ರೆಗೆ ಜಾರಿದ ಪರಿಣಾಮ ಈ ಅನಾಹುತ ಸಂಭವಿಸಿದೆ. ಹೆಚ್ಚುವರಿ ನೀರು ಹೊರ ಹಾಕುತ್ತಿದ್ದ 120 ಹೆಚ್ಪಿ ಸಾಮಥ್ರ್ಯದ ಮೂರು ಬೃಹತ್ ವಾಟರ್ ಲಿಫ್ಟಿಂಗ್ ಮೋಟಾರಗಳು ಸಹ ಸುಟ್ಟು ಭಸ್ಮವಾಗಿವೆ.
ವಾಟರ್ ಲಿಫ್ಟಿಂಗ್ ಮೋಟಾರು ಸುಟ್ಟು ಭಸ್ಮವಾದ ಪರಿಣಾಮ ಲಕ್ಷಾಂತರ ರೂ. ಮೌಲ್ಯದ ವಿದ್ಯುತ್ ಉತ್ಪಾದನೆ ನಿಂತಿದೆ. ಒಟ್ಟು 6 ಘಟಕಗಳಿಂದ ನಿತ್ಯ 290 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಆಗುತ್ತಿತ್ತು. ಅಧಿಕಾರಿಗಳ ಬೇಜವಾಬ್ದಾರಿ ಇಷ್ಟೆಲ್ಲ ನಷ್ಟ ಹಾಗೂ ಅನಾಹುತ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಸದ್ಯ ಈ ಬಗ್ಗೆ ತನಿಖೆ ಹಾಗೂ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ಜನಿಕರು ಒತ್ತಾಯಿಸಿದ್ದಾರೆ.