ಬೆಂಗಳೂರು: ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟಗೊಂಡಿದೆ. ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಸಚಿವ ವೈಜನಾಥ್ ಪಾಟೀಲ್ ತಮ್ಮ ಮಗ ವಿಕ್ರಮ ಪಾಟೀಲ್ ಗೆ ಟಿಕೆಟ್ ಕೊಡದಿದ್ದಕ್ಕೆ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ವಿರುದ್ಧ ಸಿಡಿದೆದ್ದಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಇಂದು ಪ್ರೆಸ್ಮೀಟ್ ನಡೆಯುತ್ತಿದ್ದ ವೇದಿಕೆ ಮೇಲೆ ಅಧ್ಯಕ್ಷರೇ ಅಧ್ಯಕ್ಷರೇ ಎಂದು ಮಾಜಿ ಸಚಿವ ವೈಜನಾಥ್ ಪಾಟೀಲ್ ಕಿರುಚಾಡಿದ್ರು. ಪ್ರೆಸ್ ಮೀಟ್ ಮುಗಿದ ನಂತರ ಪರಮೇಶ್ವರ್ ಹೊರಟಿದ್ದರು. ಈ ವೇಳೆ ವೈಜನಾಥ್ ಪಾಟೀಲ್ ವೇದಿಕೆ ಮೇಲೆ ಆಗಮಿಸಿದ್ರು. ಆದ್ರೆ ಅದನ್ನು ಗಮನಿಸದೆ ಪರಮೇಶ್ವರ್ ಎದ್ದು ಹೊರಟರು. ಇದರಿಂದ ಕೋಪಗೊಂಡ ವೈಜನಾಥ್ ಏರುಧ್ವನಿಯಲ್ಲಿ, ಮಾತಾಡ್ತಿದ್ರೆ ಓಡೋಗ್ತೀರಲ್ರೀ ಅಧ್ಯಕ್ಷರೇ…ಏಯ್ ಅಧ್ಯಕ್ಷ… ಏಯ್ ಚಮ್ಚಾ ಅಂತ ಕಿರುಚಾಡಿದ್ರು.
ನಮ್ಮಂತವರ ಮಾತಿಗೆ ಬೆಲೆ ಇಲ್ಲ. ಧರಂ ಸಿಂಗ್ರಂತವರ ಮಕ್ಕಳನ್ನು ಎಂಎಲ್ಎ-ಎಂಎಲ್ಸಿ ಮಾಡ್ತೀರ ಎಂದು ಕಿರುಚಿದ ವೈಜನಾಥ್ ಪಾಟೀಲ್, ಏಯ್ ಓಡ್ ಬ್ಯಾಡಲೆ, ಚಮಚಾಗಿರಿ ಮಾಡಬ್ಯಾಡ ಅಂದ್ರು.
ಹೈದರಾಬಾದ್ ಕರ್ನಾಟಕ ಭಾಗವನ್ನ ಕಡೆಗಣಿಸಿದ್ದಾರೆ. ಅನ್ಯಾಯ ಮಾಡಿದ್ದಾರೆ. ಉತ್ತರ ಕರ್ನಾಟಕ ಭಾಗದ ನಾಯಕರಿಗೆ ರಾಜ್ಯ ಅಧ್ಯಕ್ಷ, ಸಿಎಂ ಸ್ಥಾನ ಕೊಡಬೇಕು ಎಂದು ಆಗ್ರಹಿಸಿದ್ರು. ಪರಮೇಶ್ವರ್ ಚಮಚಾಗಿರಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ರು.