ಚಿತ್ರದುರ್ಗ: ಗೃಹ ಸಚಿವ ಆರಗ ಜ್ಞಾನೇಂದ್ರ ಅನ್ಫಿಟ್, ಸಿದ್ದರಾಮಯ್ಯನ ಮುಟ್ಟಿದ್ರೆ ಕ್ರಾಂತಿಯಾಗುತ್ತೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ್ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಸಿದ್ದರಾಮಯ್ಯ ಅವರಿಗೆ ಜೀವ ಬೆದರಿಕೆಯಿದೆ ಎಂಬ ವಿಚಾರದ ಕುರಿತು ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕರು, ಯಾವುದಕ್ಕೂ ಹೆದರಲ್ಲ. ಸಿದ್ದರಾಮಯ್ಯ ಅವರನ್ನ ಯಾರೂ ಮುಟ್ಟಲು ಸಾಧ್ಯವಿಲ್ಲ. ಸಿದ್ದರಾಮಯ್ಯ ಅವರನ್ನ ಮುಟ್ಟುವ ಪ್ರಯತ್ನ ಮಾಡಿದ್ರೆ ರಾಜ್ಯದ ಜನತೆ ತಕ್ಕ ಪಾಠ ಕಲಿಸುತ್ತಾರೆ. ಒಂದು ಮೊಟ್ಟೆ ಎಸೆದಿದ್ದಕ್ಕೆ ಇವರಿಗೆ ಪಾಠ ಕಲಿಸಿದ್ದಾರೆ. ಅವರನ್ನ ಮುಟ್ಟುವುದು, ಏನಾದ್ರೂ ಮಾಡುವುದು ಮಾಡಿದ್ರೆ, ರಾಜ್ಯದಲ್ಲಿ ದೊಡ್ಡ ಕ್ರಾಂತಿ ಆಗುತ್ತದೆ ಎಂದು ಸಿಡಿಮಿಡಿಗೊಂಡರು.
ಇದೇ ವೇಳೆ ಸಿದ್ದರಾಮಯ್ಯ ಹಠಮಾರಿ ಎಂಬ ಯಡಿಯೂರಪ್ಪ ಹೇಳಿಕೆ ಕುರಿತು ಮಾತನಾಡಿ, ಸಿದ್ದರಾಮಯ್ಯ ಯಡಿಯೂರಪ್ಪ ಅವರಷ್ಟು ಹಠವಾದಿಯಲ್ಲ. ಯಡಿಯೂರಪ್ಪ ಸ್ವಭಾವ ನನಗೂ ಗೊತ್ತು, ಅವರು ಬಹಳ ಹಠಮಾರಿ. ಮಡಿಕೇರಿ ಚಲೋ ಆಗಿದ್ದು, ವಿಪಕ್ಷ ನಾಯಕರ ಮೇಲೆ ಮೊಟ್ಟೆ ಎಸೆಯುವ ಕೆಲಸ ಮಾಡಿದ್ರಿಂದ. ಈ ಘಟನೆಗೆ ಮುಖ್ಯಮಂತ್ರಿಗಳು, ಗೃಹ ಸಚಿವರು ನೇರ ಹೊಣೆ. ಯಡಿಯೂರಪ್ಪ ಅವರಿಗೆ ಇದನ್ನ ಹೇಳಿ. ಭದ್ರತಾ ವೈಫಲ್ಯದಿಂದ ಚಿಲ್ಲರೆ ಕೆಲಸಗಳಿಂದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಕಿಡಿಕಾರಿದರು.
ಗೃಹ ಮಂತ್ರಿ ಅಸಮರ್ಥರು, ಅನ್ಫಿಟ್ ಆಗಿದ್ದಾರೆ. ರಾಜ್ಯದ ಜನತೆಗೆ ಸಿದ್ದರಾಮಯ್ಯ ಯೋಗ್ಯತೆ ಏನು, ಪ್ರತಾಪ್ ಸಿಂಹ ಯೋಗ್ಯತೆ ಏನು ಅಂತ ಗೊತ್ತಿದೆ. ರಾಜ್ಯದಲ್ಲಿ ಭಾವನೆ ಕದಡುವ ಕೆಲಸ ಬಿಟ್ಟು, ಜನರ ಬದುಕು ಕಟ್ಟುವ ಕೆಲಸ ಮಾಡಬೇಕು. ಮೊಟ್ಟೆ ಎಸೆತ, ಸಾವರ್ಕರ್ ಫೋಟೋ ಬರೀ ಇದೇ ಆಯ್ತು, ಇದು ಹೊಟ್ಟೆ ತುಂಬಲ್ಲ. ಸರ್ಕಾರದ ವೈಫಲ್ಯ ಮುಚ್ಚಿಕೊಳ್ಳಲು ಭಾವನೆ ಕೆರಳಿಸುವ ಕೆಲಸ ಆಗುತ್ತಿದೆ ಎಂದರು. ಇದನ್ನೂ ಓದಿ: ಸಿದ್ದರಾಮಯ್ಯಗೆ ಕೋಟಿ ಕೋಟಿ ನಮನ – ಸಚಿವ ಸುಧಾಕರ್
ಸಾವರ್ಕರ್ ಸ್ವಾತಂತ್ರ್ಯ ಹೋರಾಟ ಮಾಡಿದ್ದಾರೆ ಇದು ಐತಿಹಾಸಿಕ ಸತ್ಯ. ಇದಕ್ಕೆ ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಸಾವರ್ಕರ್ ಅವರು ಬ್ರಿಟಿಷರಿಗೆ ತಪ್ಪೊಪ್ಪಿಗೆ ಪತ್ರ ಬರೆದುಕೊಟ್ಟಿದ್ದು ಐತಿಹಾಸಿಕ ಸತ್ಯ. ಸಾವರ್ಕರ್ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಜೈಲಿಗೆ ಹೋಗಿದ್ದರು. ನಂತರ ತಪ್ಪೊಪ್ಪಿಗೆ ಪತ್ರವನ್ನೂ ಕೂಡ ಬರೆದಿದ್ದು ಅಷ್ಟೇ ಸತ್ಯ ಎಂದರು.