ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿಯವರ (Narendra Modi) ಫೋಟೋ ಬಳಸಬೇಡ ಎಂದು ಹೇಳಲು ಇವರು ಯಾರು ಎಂದು ಪ್ರಶ್ನಿಸುವ ಮೂಲಕ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಅವರು ಬಿಜೆಪಿ ನಾಯಕರ ವಿರುದ್ಧ ಕೆಂಡಾಮಂಡಲರಾಗಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಮೋದಿ ಫೋಟೋ (Modi Photo) ಬಳಸಬೇಡಿ ಅಂತಿದ್ದಾರೆ. ಅವರು ಮೋದಿ ಫೋಟೋ ಬಿಟ್ಟು ಚುನಾವಣೆ ನಡೆಸಲಿ. ಯಡಿಯೂರಪ್ಪ, ರಾಘವೇಂದ್ರ, ವಿಜಯೇಂದ್ರ ಫೋಟೋ ಇಟ್ಟುಕೊಂಡು ಚುನಾವಣೆ ನಡೆಸಲಿ. ಯಡಿಯೂರಪ್ಪ, ವಿಜಯೇಂದ್ರ ಫೋಟೋ ಹಾಕಿಕೊಂಡು ಚುನಾವಣೆ ನಡೆಸಲಿ ನೋಡೋಣ. ನನಗೆ ನರೇಂದ್ರ ಮೋದಿ ಫೋಟೋ ಹಾಕಬೇಡಿ ಅನ್ನಲು ಅವರು ಯಾರು?. ಕೋರ್ಟ್, ಚುನಾವಣಾ ಆಯೋಗ ಏನು ತೀರ್ಮಾನ ಕೊಡುತ್ತದೋ ನೋಡೋಣ ಎಂದು ಹೇಳಿದ್ದಾರೆ.
ಪಕ್ಷದಿಂದ ನನ್ನ ಉಚ್ಛಾಟಿಸಿಲ್ಲ: ನಾನು ಚುನಾವಣೆಗೆ ಸ್ಪರ್ಧೆ ಮಾಡ್ತೀನಿ ಅಂತಾ ಹೇಳಿದ್ದೇನೆ. ಆದರೂ ಇದುವರೆಗೆ ನನ್ನನ್ನು ಪಕ್ಷದಿಂದ ಉಚ್ಛಾಟನೆ ಮಾಡಿಲ್ಲ. ನನ್ನನ್ನು ಉಚ್ಛಾಟನೆ ಮಾಡದಿರಲು ಏನು ಕಾರಣ ಗೊತ್ತಿಲ್ಲ. ನಾನು ಉಚ್ಛಾಟನೆ ಮಾಡಲಿ ಅಂತಾ ಕಾಯ್ತಿದ್ದೇನೆ ಎಂದು ಹೇಳಿದರು. ಇದೇ ವೇಳೆ, ಈಶ್ವರಪ್ಪ ಮುಸ್ಲಿಮರಿಗೆ ಸುಖಾ ಸುಮ್ಮನೆ ತೊಂದರೆ ಮಾಡಲ್ಲ. ರಾಷ್ಟ್ರಭಕ್ತ ಮುಸ್ಲಿಮರು ನನಗೆ ಮತ ಹಾಕ್ತಾರೆ ಎಂಬ ವಿಶ್ವಾಸ ಇದೆ ಎಂದರು. ಇದನ್ನೂ ಓದಿ: ಮೋದಿ ಫೋಟೋ ಬಳಕೆ – ಈಶ್ವರಪ್ಪ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು
ಕೆವಿಯಟ್ ಸಲ್ಲಿಕೆ: ಮೋದಿ ಭಾವಚಿತ್ರ ಬಳಸಿಕೊಳ್ಳಲು ಮುನ್ನೆಚ್ಚರಿಕಾ ಕ್ರಮವಾಗಿ ಈಶ್ವರಪ್ಪ ಅವರು ನ್ಯಾಯಾಲಯದಲ್ಲಿ ಕೆವಿಯಟ್ ಸಲ್ಲಿಸಿದ್ದಾರೆ. ಭಾವಚಿತ್ರವನ್ನು ಬಳಸಿಕೊಳ್ಳುವುದನ್ನು ಕಾನೂನಾತ್ಮಕವಾಗಿ ತಡೆಯುವ ಯಾರಾದರೂ ಪ್ರಯತ್ನಿಸಿದರೆ ಅದಕ್ಕೆ ಹಿನ್ನಡೆಯಾಗಲಿದೆ ಎಂಬುದು ಅವರ ಲೆಕ್ಕಾಚಾರವಾಗಿದೆ. ಭಾರತದ ಪ್ರಧಾನಿಯ ಭಾವಚಿತ್ರವನ್ನು ಉಪಯೋಗಿಸುತ್ತಿದ್ದು, ಸಂವಿಧಾನದಲ್ಲಿ ಎಲ್ಲಾ ಭಾರತೀಯರು ಪ್ರಧಾನಿಯ ಭಾವಚಿತ್ರವನ್ನು ಬಳಸಿಕೊಳ್ಳಲು ಅವಕಾಶವಿದೆ. ಇದನ್ನೂ ಓದಿ: ನನ್ನ ರಕ್ತದ ಕಣಕಣದಲ್ಲೂ ಬಿಜೆಪಿ ಇದೆ, ನಾನು ಸಾಯೋವರೆಗೂ ಮೋದಿ ಜೊತೆಗೆ ಇರ್ತೀನಿ: ಈಶ್ವರಪ್ಪ
ಈಶ್ವರಪ್ಪ ಅವರು, ಸಲ್ಲಿಸಿರುವ ಕೆವಿಯಟ್ ಅವಧಿ ಮೂರು ತಿಂಗಳಾಗಿರುತ್ತದೆ. ಅಷ್ಟರಲ್ಲಿ ಚುನಾವಣೆ ಮುಗಿದಿರುತ್ತದೆ. ಯಾರು ಕೂಡ ಇದರ ವಿರುದ್ಧ ತಡೆ ತರಲು ಬರುವುದಿಲ್ಲ ಎನ್ನುವುದು ಅವರ ಯೋಚನೆ. ಇದರಿಂದ ಮೋದಿ ಭಾವಚಿತ್ರ ಬಳಸಿಕೊಳ್ಳಲು ಈಶ್ವರಪ್ಪನವರಿಗೆ ಯಾವುದೇ ಸಮಸ್ಯೆ ಇರುವುದಿಲ್ಲ.