– ಆಪ್ತ ಮಿತ್ರನ ಹೇಳಿಕೆಗೆ ರಾಮುಲು ಭಾವುಕ
ಬಳ್ಳಾರಿ: ಮಾಜಿ ಸಚಿವ ಗಣಿಧಣಿ ಜನಾರ್ದನ ರೆಡ್ಡಿ ಸೂಕ್ಷ್ಮತೆಯ ರಾಜಕೀಯ ಮಾತುಗಳು ಮತ್ತೊಮ್ಮೆ ತೀವ್ರ ಚರ್ಚೆಗೆ ಗ್ರಾಸವಾಗುವಂತೆ ಮಾಡಿದೆ.
ರಾಜಕೀಯ ಬೇಡ ಎನ್ನುತ್ತಲೇ ತಾವು ಸ್ಪರ್ಧೆ ಮಾಡಿದ್ರೆ ಗೆಲ್ಲುವ ಅವಕಾಶಗಳಿರುವ ಕ್ಷೇತ್ರದ ಪಟ್ಟಿ ಹೇಳಿದರು. ಒಂದೇ ವೇದಿಕೆಯಲ್ಲಿ ರಾಮುಲು ಅಭಿವೃದ್ಧಿ ಕುರಿತು ಅಸಹಾಯಕತೆ ತೋಡಿಕೊಂಡ್ರೆ, ರೆಡ್ಡಿ ನಾನು ಬಳ್ಳಾರಿಗೆ ಬಂದಿದ್ದೇನೆ, ಅಭಿವೃದ್ಧಿ ಮಾಡುವುದಾಗಿ ಎಂದು ಅಭಯ ಕೊಡುತ್ತಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಚಿವ ಶ್ರೀರಾಮುಲು, ಜನಾರ್ದನರೆಡ್ಡಿ ಮಾಡಿದಷ್ಟು ಅಭಿವೃದ್ಧಿ ಕೆಲಸ ನನ್ನಿಂದ ಆಗಲ್ಲ. ಜನಾರ್ದನ ರೆಡ್ಡಿ ಒಂದು ಸಲ ಕ್ಯಾಬಿನೇಟ್ ನಲ್ಲಿ ಕುಳಿತು ಮಾತಾಡಿದ್ರೆ, ಅದರ ಖದರ್ ಬೇರೆನೇ ಇರುತ್ತೆ. ಕ್ಯಾಬಿನೆಟ್ ನಲ್ಲಿ ನಮ್ಮೂರಿಗೆ ಇದು ಬೇಕು, ಅದು ಬೇಕು ಹಣ ಬೇಕು ಅಂದ್ರೆ ತಕ್ಷಣ ಸಿಎಂ ಕೊಡುತ್ತಿದ್ದರು. ಜನಾರ್ದನ ರೆಡ್ಡಿಗೆ ಅಷ್ಟು ಶಕ್ತಿ ಇತ್ತು, ಆದರೆ ನನಗೆ ಆ ಶಕ್ತಿ ಇಲ್ಲ. ಯಾಕಂದ್ರೆ 34 ಜನ ಸಚಿವರಲ್ಲಿ ರಾಮುಲು ಕೂಡಾ ಒಬ್ಬ ಅಷ್ಟೇ. ಒಮ್ಮೆ ನಾನೇದ್ರು ಗಟ್ಟಿ ಮಾತಾಡಿದ್ರೆ ಏನಾಗುತ್ತೆ ಏನೋ ಅಂತಾ ಜೋರು ಧ್ವನಿಯಲ್ಲಿ ಕೂಡ ಮಾತಾಡಲ್ಲ. ಹೀಗಾಗಿ ನಾವು ಪ್ರಯತ್ನ ಮಾಡ್ತಾ ಇದ್ದೇವೆ. ನಿಮ್ಮ ಸಹಕಾರ ಬೇಕು ಎಂದು ಜನರ ಬಳಿ ಬೆಂಬಲ ಕೇಳಿದರು. ಇದನ್ನೂ ಓದಿ: ಸರ್ಕಾರವೇ ಹಿಜಬ್ ಪ್ರಕರಣ ಮಾಡ್ತಿದೆ: ಎಂ.ಬಿ ಪಾಟೀಲ್
ರಾಮುಲು ಬಳಿಕ ಮಾತನಾಡುತ್ತಾ ನನಗೆ ರಾಜಕೀಯ ಬೇಡ ಬೇಡ ಎನ್ನುತ್ತಲ್ಲೇ ಜನಾರ್ದನ ರೆಡ್ಡಿ ಐದಾರು ಕ್ಷೇತ್ರಗಳ ಪಟ್ಟಿ ಕೊಟ್ಟರು. ನನ್ನ ಅಣ್ಣಂದಿರು ಇಬ್ಬರು ಶಾಸಕರಿದ್ದರೆ ನಾನು ಶಾಸಕನಿದ್ದಂತೆ. ನನ್ನ ಮಿತ್ರ ರಾಮುಲು ಬಳ್ಳಾರಿ ಉಸ್ತುವಾರಿ ಮಂತ್ರಿ ಆಗಿದ್ದು, ನಾನೇ ಮಂತ್ರಿಯಾದಂತೆ. ನಾನು ಚುನಾವಣೆಗೆ ನಿಲ್ಲಲು ಬಯಸಿದರೆ ಬಳ್ಳಾರಿ, ಗಂಗಾವತಿ, ಕೊಪ್ಪಳ, ಯಲಬುರ್ಗ, ಬೆಂಗಳೂರಿನ ಕೆಆರ್ ಪುರಂ, ಬಿಟಿಎಂ ಲೇಔಟ್, ಕೋಲಾರದಲ್ಲಿ ನಮಗೆ ಡಿಮ್ಯಾಂಡ್ ಇದೆ. ಕೇವಲ ರಾಜಕೀಯಕ್ಕಾಗಿ ನಾನು ಬಳ್ಳಾರಿಗೆ ಬಂದಿಲ್ಲ, ಬಳ್ಳಾರಿಯಲ್ಲಿ ಇನ್ನೊಂದೆರಡು ವರ್ಷದಲ್ಲಿ ವರ್ಲ್ಡ್ ಕಪ್ ಕ್ರಿಕೆಟ್ ನಡೆಯುವ ಮಟ್ಟಕ್ಕೆ ಅಭಿವೃದ್ಧಿ ಮಾಡುವೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಮಹಿಳೆಯಿಂದ ಬ್ಲಾಕ್ಮೇಲ್ ಆರೋಪ- ತೇಲ್ಕೂರ್ರಿಂದ ವಿವರಣೆ ಕೇಳಿದ ಕಟೀಲ್
ಜನಾರ್ದನ ರೆಡ್ಡಿ ಹೇಳಿದ ಕೆಲಸಗಳು ಸ್ಪೀಡ್ ಆಗಿ ನಡೀತಾ ಇತ್ತು, ಈಗ ಅಗಲ್ಲ ಅಂತ ಶ್ರೀರಾಮುಲು ಹೇಳಿದರು. ನೀನೇನು ಚಿಂತೆ ಮಾಡಬೇಡ. ನಾನು ಮತ್ತೆ ಬಳ್ಳಾರಿಗೆ ಬಂದಿದ್ದೇನೆ ಎಂದು ರಾಮುಲು ಅಸಹಾಯಕತೆಗೆ ರೆಡ್ಡಿ ಅಭಯ ನೀಡಿದರು. ಒಟ್ಟಿನಲ್ಲಿ ರಾಜಕೀಯ ಬರೋ ಇಚ್ಛೆ ಇದ್ದರೂ ಅದನ್ನು ಮಾಧ್ಯಮದ ಮೇಲೆ ಹಾಕೋ ಮೂಲಕ ರಾಜಕೀಯ ಆಸೆಯನ್ನು ಜನಾರ್ದನ ರೆಡ್ಡಿ ಬಿಚ್ಚಿಟ್ಟರು.