-ನೋವಾಗುತ್ತೆ, ಏನೂ ಮಾಡಲು ಸಾಧ್ಯವಿಲ್ಲ
ರಾಮನಗರ: ಗಣೇಶ ಹಬ್ಬದ ದಿನವೂ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಲಯ(ಇಡಿ) ವಿಚಾರಣೆಗೆ ಕರೆದಿರುವುದು ಕುಟುಂಬಸ್ಥರನ್ನು ಬೇಸರಕ್ಕೀಡು ಮಾಡಿದೆ.
ಈ ಬಗ್ಗೆ ಮಾತನಾಡಿದ ಡಿಕೆಶಿ ತಾಯಿ, ಹಬ್ಬಕ್ಕಿಂತ ಹೆಚ್ಚಾಗಿ ಇಂದು ಆತನ ತಂದೆ ಹಾಗೂ ಅಜ್ಜಿ-ತಾತನಿಗೆ ಪೂಜೆ ಮಾಡುತ್ತಿದ್ದರು. ಆದರೆ ಅದಕ್ಕು ಕೂಡ ಒಂದು ಅವಕಾಶ ಕೊಟ್ಟಿಲ್ಲ. ಏನು ಹೇಳಿ ಏನ್ ಪ್ರಯೋಜನ. ಬಾಯಿಗೆ ಬಂದಂತೆ ಮಾತಾಡಬಹುದು. ಆದರೆ ಅದರಿಂದ ಪ್ರಯೋಜನವಾದರೂ ಏನು ಎಂದು ಪ್ರಶ್ನಿಸುವ ಮೂಲಕ ಕಣ್ಣೀರು ಹಾಕಿದ್ದಾರೆ.
ಯಜಮಾನರಿಗೆ ಎಡೆ ಇಡಲು ಇಬ್ಬರು ಮಕ್ಕಳು ಕೂಡ ಇಲ್ಲ. ಬಹಳ ದುಃಖವಾಗುತ್ತದೆ. ನಿನ್ನೆ ರಾತ್ರಿ 10 ಗಂಟೆವರೆಗೆ ಬರಬಹುದು ಎಂದು ಕಾದೆವು. ಬರೋದಕ್ಕೆ ಸಾಧ್ಯವಿಲ್ಲ ಅಂತೆ. ಹೀಗಾಗಿ ನನ್ನ ಮೊಮ್ಮಗ ಬರುತ್ತಾನೆ. ಆತ ಬಂದ ಬಳಿಕ ನಾವು ಪೂಜೆ ಮಾಡುತ್ತೇವೆ ಎಂದರು.
ಪ್ರತೀ ವರ್ಷ ಈ ಹಬ್ಬದಲ್ಲಿ ಎಲ್ಲರೂ ಸೇರುತ್ತಿದ್ದರು. ಆದರೆ ಇದೇ ಮೊದಲ ಬಾರಿಗೆ ಇನ್ನ ಇಬ್ಬರು ಮಕ್ಕಳು ಕೂಡ ಹಬ್ಬ ಆಚರಿಸಲು ಇಲ್ಲ. ಏನು ಮಾಡಲೂ ಸಾಧ್ಯವಿಲ್ಲ. ಬಹಳ ನೋವಾಗುತ್ತದೆ ಎಂದು ಹೇಳಿದರು.
ಇತ್ತ ಇಡಿ ವಿಚಾರಣೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ ತಂದೆಯನ್ನು ನೆನಪಿಸಿಕೊಂಡು ಕಣ್ಣೀರು ಹಾಕಿದರು. ನನ್ನ ತಂದೆಗೆ ಎಡೆ ಇಡಲು ಕೂಡ ಬಿಟ್ಟಿಲ್ಲ. ಪರವಾಗಿಲ್ಲ ಎಲ್ಲವನ್ನೂ ಎದುರಿಸಲು ಸಿದ್ಧನಿದ್ದೇನೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.