ಬೆಂಗಳೂರು: ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆಗೆ ರಾಜ್ಯ ಚುನಾವಣಾ ಆಯೋಗ ಸರ್ವ ಸಿದ್ಧತೆಯಲ್ಲಿ ತೊಡಗಿದೆ. ಚುನಾವಣೆಗೆ ಅಗತ್ಯವಿರುವ ವೋಟಿಂಗ್ ಮೆಷೀನ್ಗಳನ್ನು ಚುನಾವಣಾ ಆಯೋಗ ಗುಜರಾತ್ನಿಂದ ತರಿಸಿಕೊಂಡಿದೆ.
ಬೆಂಗಳೂರಿನ ಕಂದಾಯ ಭವನಕ್ಕೆ ಇವಿಎಂ ಯಂತ್ರಗಳನ್ನು ತರಿಸಲಾಗಿದೆ. ಒಟ್ಟು 3860 ಯಂತ್ರಗಳನ್ನು ತರಿಸಲಾಗಿದ್ದು, ಗುಜರಾತ್ನಿಂದ ಬೆಂಗಳೂರಿಗೆ ಒಟ್ಟು 5 ಲಾರಿಗಳ ಮೂಲಕ ಭಾನುವಾರ ರಾತ್ರಿ ಇವಿಎಂ ಯಂತ್ರಗಳನ್ನು ತೆಗೆದುಕೊಂಡು ಬರಲಾಗಿದೆ.
ಬೆಂಗಳೂರಿನ ಕಂದಾಯ ಭವನದಲ್ಲಿ ಇವಿಎಂ ಯಂತ್ರಗಳನ್ನ ಇರಿಸಲಾಗಿದ್ದು, 7 ಕ್ಷೇತ್ರಗಳಿಗೆ ಬಳಕೆಯಾಗಲಿರುವ ಈ ಯಂತ್ರಗಳನ್ನು ಇಂದು ಆರ್ಎಂಸಿ ಯಾರ್ಡ್ ನಲ್ಲಿ ಡಿಸಿ ನೇತೃತ್ವದಲ್ಲಿ ಸ್ಥಳಾಂತರ ಮಾಡುವ ಸಾಧ್ಯತೆ ಇದೆ.
ಈ ಬಗ್ಗೆ ಅಪರ ಜಿಲ್ಲಾಧಿಕಾರಿ ಜಗದೀಶ್ ಮಾತನಾಡಿ, 2018ರ ಚುನಾವಣೆ ಪ್ರಯುಕ್ತ ಇವಿಎಂ ಯಂತ್ರಗಳನ್ನ ತರಲಾಗಿದೆ. ಗುಜರಾತ್ನ ಮೂರು ಜಿಲ್ಲೆಗಳಿಂದ ಯಂತ್ರಗಳು ಆಗಮಿಸಿವೆ. 3,090 ಬ್ಯಾಲೆಟ್ ಯುನಿಟ್ಸ್, 770 ಕಂಟ್ರೋಲ್ ಯುನಿಟ್ ಬಂದಿವೆ. ಬಂದಿರೋ ಯಂತ್ರಗಳನ್ನ ಸ್ಟ್ರಾಂಗ್ ರೂಮ್ನಲ್ಲಿಡಲಾಗಿದೆ. ಭದ್ರತೆಗಾಗಿ ಆರು ಸಿಸಿಟಿವಿ ಕ್ಯಾಮೆರಾಗಳ ಜೊತೆ ರೌಂಡ್ ಕ್ಲಾಕ್ ಸೆಕ್ಯೂರಿಟಿ ನೇಮಿಸಲಾಗಿದೆ ಅಂತ ಹೇಳಿದ್ರು.
ಇಂದು ಎಲ್ಲಾ ಪಕ್ಷಗಳ ಮುಖಂಡರು ಹಾಗು ಏಜೆಂಟ್ಗಳ ನೇತೃತ್ವದಲ್ಲಿ ಕೊಠಡಿ ತೆರೆಯಲಾಗುತ್ತೆ. ಮಹದೇವಪುರ, ದಾಸರಹಳ್ಳಿ, ಬೆಂಗಳೂರು ದಕ್ಷಿಣ, ಯಲಹಂಕ, ಯಶವಂತಪುರ, ಬ್ಯಾಟರಾಯನಪುರ, ಆನೇಕಲ್ ಕ್ಷೇತ್ರಗಳಿಗೆ ಇವಿಎಂ ಆಗಮಿಸಿದೆ. 3 ಸಾವಿರ ಕಂಟ್ರೋಲ್ ಯುನಿಟ್ಗಳನ್ನ ಬಿಇಎಲ್ನಿಂದ ತರಿಸಲಾಗಿದೆ. ಉಳಿದ ಕ್ಷೇತ್ರಗಳಿಗೆ ಬೇರೆ ಕಡೆ ವ್ಯವಸ್ಥೆ ಮಾಡಲಾಗಿದೆ ಅಂತ ತಿಳಿಸಿದ್ರು.
ಜಿಲ್ಲಾಧಿಕಾರಿ ಶಂಕರ್ ಮಾತನಾಡಿ, ಕಂಟ್ರೋಲ್ ರೂಮ್ ಉತ್ತಮವಾಗಿದೆ. ಪೊಲೀಸ್ ಹಾಗೂ ಸಿಸಿ ಕ್ಯಾಮೆರಾ ವ್ಯವಸ್ಥೆ ಮಾಡಲಾಗಿದೆ. ಬಿಬಿಎಂಪಿ ಆಯುಕ್ತರು ಜಿಲ್ಲಾ ಚುನಾವಣಾ ಉಸ್ತುವಾರಿ ವಹಿಸಿರುತ್ತಾರೆ. ನಾಳೆ ಎಫ್.ಎಲ್.ಸಿ ಇದೆ. ಎಲ್ಲಾ ಪಕ್ಷದ ಮುಖಂಡರನ್ನ ಬರಲು ಸೂಚಿಸಿದ್ದೇವೆ. ಇವಿಎಂ ಬಗ್ಗೆ ಅನುಮಾನಗಳಿದ್ದಲ್ಲಿ ನಾಳೆ ಪರಿಶೀಲನೆ ಮಾಡಿಸುತ್ತೇವೆ. ಬಳಿಕ ಸ್ಟ್ರಾಂಗ್ ರೂಮ್ನಿಂದ ನಿರ್ಮಿಸಲಾಗುವುದು. ಆ ಬಳಿಕ ಯಾರನ್ನೂ ಬಿಡಲಾಗುವುದಿಲ್ಲ ಎಂದು ಹೇಳಿದ್ರು.