ಡೆಹ್ರಾಡೂನ್: ಉತ್ತರಾಖಂಡದಲ್ಲಿ (Uttarakhand) ಕುಸಿದ ಸುರಂಗದಿಂದ (Tunnel Collapse) ರಕ್ಷಿಸಲ್ಪಟ್ಟ 41 ಕಾರ್ಮಿಕರ ಆರೋಗ್ಯ ಸ್ಥಿತಿ ಬಗ್ಗೆ ವೈದ್ಯರು ಮಾಹಿತಿ ಹಂಚಿಕೊಂಡಿದ್ದಾರೆ. ಎಲ್ಲರೂ ಆರೋಗ್ಯವಾಗಿದ್ದಾರೆ.. ಬೇಗ ಡಿಸ್ಚಾರ್ಜ್ ಮಾಡಿ ಮನೆಗೆ ಕಳುಹಿಸಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ.
ರಕ್ಷಣೆ ಬೆನ್ನಲ್ಲೇ 41 ಕಾರ್ಮಿಕರನ್ನು ರಿಷಿಕೇಶದ ಏಮ್ಸ್ನಲ್ಲಿ ಆರೋಗ್ಯ ತಪಾಸಣೆಗೆ ಒಳಪಡಿಸಲಾಗಿದೆ. ಇಂದು ಎಲ್ಲರನ್ನೂ ಮನೆಗೆ ಕಳುಹಿಸುವ ಸಾಧ್ಯತೆ ಇದೆ. ಎಲ್ಲರನ್ನೂ ಪ್ರಾಥಮಿಕ ತಪಾಸಣೆಗೆ ಒಳಪಡಿಸಲಾಗಿದ್ದು, ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ಸುರಂಗದಿಂದ ಕಾರ್ಮಿಕ ಬಚಾವಾದ್ರೂ ಅಪ್ಪನನ್ನು ಕೊನೇಸಲ ಜೀವಂತವಾಗಿ ನೋಡಲು ಸಿಗಲೇ ಇಲ್ಲ ಅವಕಾಶ
ಎಲ್ಲ ಕಾರ್ಮಿಕರು ಆರೋಗ್ಯವಾಗಿದ್ದಾರೆ. ಅವರನ್ನು ರೋಗಿಗಳೆಂದು ನಾವು ಕರೆಯುವುದಿಲ್ಲ. ಅವರ ರಕ್ತದೊತ್ತಡ, ಜೀವಾಣುಗಳು, ಆಮ್ಲಜನಕೀಕರಣ ಎಲ್ಲವೂ ನಾರ್ಮಲ್ ಇದೆ. ನಾವು ಪ್ರಾಥಮಿಕ ಆರೋಗ್ಯ ತಪಾಸಣೆ ಮಾಡಿದ್ದೇವೆ. ಅದರ ವರದಿ ಶೀಘ್ರವೇ ಬರಲಿದೆ. ಹೃದಯ ಸಂಬಂಧಿ ಸಮಸ್ಯೆ ಏನಾದರೂ ಇದೆಯೇ ಎಂಬುದನ್ನು ತಿಳಿಯಲು ಇಸಿಜಿ ಪರೀಕ್ಷೆ ನಡೆಸಲಾಗುವುದು ಎಂದು ಎಐಐಎಂಎಸ್-ಋಷಿಕೇಶದ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಸಿಇಒ ಪ್ರೊಫೆಸರ್ ಮೀನು ಸಿಂಗ್ ತಿಳಿಸಿದ್ದಾರೆ.
ಕಾರ್ಮಿಕರಿಗೆ ಯಾವುದೇ ಕಾಯಿಲೆ ಇಲ್ಲ. ಅವರನ್ನು ಮನೆಗೆ ಕಳುಹಿಸುವ ಬಗ್ಗೆ ಇಂದು ನಿರ್ಧಾರ ತೆಗೆದುಕೊಳ್ಳಲಾಗುವುದು ವೈದ್ಯರು ಹೇಳಿದ್ದಾರೆ. ಸುಮಾರು 17 ದಿನಗಳ ರಕ್ಷಣಾ ಕಾರ್ಯಾಚರಣೆಯ ನಂತರ ಮಂಗಳವಾರ 41 ಕಾರ್ಮಿಕರನ್ನು ಸುರಂಗದಿಂದ ರಕ್ಷಿಸಲಾಗಿತ್ತು. ಇದನ್ನೂ ಓದಿ: 41 ಕಾರ್ಮಿಕರ ರಕ್ಷಣೆ ಬೆನ್ನಲ್ಲೇ ಭಾವುಕರಾಗಿದ್ದ ಪ್ರಧಾನಿ ಮೋದಿ
ಎನ್ಡಿಆರ್ಎಫ್, ಭಾರತೀಯ ಸೇನೆ, ಪೊಲೀಸರು ಮತ್ತು ಹಲವಾರು ಇತರ ಏಜೆನ್ಸಿಗಳು ಉತ್ತರಾಖಂಡ್ನ ಕುಸಿದ ಸಿಲ್ಕ್ಯಾರಾ ಸುರಂಗದ ಕೆಳಗೆ ಸಿಲುಕಿದ್ದ ಕಾರ್ಮಿಕರನ್ನು ರಕ್ಷಿಸಿದ್ದರು. ಕಾರ್ಯಾಚರಣೆಯ ಪ್ರಮುಖ ವ್ಯಕ್ತಿ ಸುರಂಗ ತಜ್ಞ ಅರಾಲ್ಡ್ ಡಿಕ್ಸ್ ಅವರು ರಕ್ಷಣಾ ಸಮಯದಲ್ಲಿ ಸರ್ಕಾರ ಮತ್ತು ಏಜೆನ್ಸಿಗಳಿಗೆ ಸಲಹೆ ನೀಡಿದ್ದರು.