ದಿಸ್ಪುರ್: ದೇಶದಲ್ಲಿ ಒಬ್ಬನೇ ಒಬ್ಬ ಅಕ್ರಮ ವಲಸಿಗನಿಗೆ ಉಳಿದುಕೊಳ್ಳಲು ಅವಕಾಶ ನೀಡುವುದಿಲ್ಲ, ಅಕ್ರಮವಾಗಿ ಬಂದ ಎಲ್ಲರನ್ನೂ ಓಡಿಸುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅಸ್ಸಾಂನಲ್ಲಿ ಗುಡುಗಿದ್ದಾರೆ.
ಗೃಹ ಸಚಿವರಾದ ಬಳಿಕ ಅಸ್ಸಾಂಗೆ ಮೊದಲ ಬಾರಿ ಭೇಟಿಕೊಟ್ಟ ಅಮಿತ್ ಶಾ ಅವರು ಅಸ್ಸಾಂ ರಾಷ್ಟ್ರೀಯ ಪೌರತ್ವ ನೋಂದಣಿ(ಎನ್ಆರ್ಸಿ) ಕುರಿತಾಗಿ ಮಾತನಾಡಿದ್ದಾರೆ. ಎನ್ಆರ್ಸಿ ಕುರಿತಾಗಿ ವಿವಿಧ ರೀತಿಯ ಪ್ರಶ್ನೆಗಳು, ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಆದರೆ ಅಕ್ರಮ ವಲಸಿಗರ ವಿರುದ್ಧ ಕಠಿಣ ಕ್ರಮಕ್ಕೆ ಕೇಂದ್ರ ಸರ್ಕಾರ ಬದ್ಧವಾಗಿದೆ. ಒಬ್ಬನೇ ಒಬ್ಬ ಅಕ್ರಮ ವಲಸಿಗನಿಗೆ ದೇಶದಲ್ಲಿ ಉಳಿದುಕೊಳ್ಳಲು ಅವಕಾಶ ನೀಡುವುದಿಲ್ಲ, ಓಡಿಸುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ:ಅಸ್ಸಾಂನಲ್ಲಿ NRC ಪಟ್ಟಿ ಅಂತಿಮ- 19 ಲಕ್ಷ ಜನರು ಪಟ್ಟಿಯಿಂದ ಹೊರಗೆ
ಹಾಗೆಯೇ ಕೇಂದ್ರ ಸರ್ಕಾರ ಈಶಾನ್ಯ ರಾಜ್ಯಗಳಿಗೆ ವಿಶೇಷ ಸ್ಥಾನಮಾನ ನೀಡಲಾಗಿರುವ 371 ಅನುಚ್ಚೇದವನ್ನು ರದ್ದು ಮಾಡುವ ಯಾವುದೇ ಉದ್ದೇಶವನ್ನು ಹೊಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಜಮ್ಮು- ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಗೂ, ಈಶಾನ್ಯ ರಾಜ್ಯಗಳಲ್ಲಿ ಜಾರಿಯಲ್ಲಿರುವ 371 ಪರಿಚ್ಚೇದಗಳ ನಡುವೆ ಸಾಕಷ್ಟು ವ್ಯತ್ಯಾಸವಿದೆ. ಈ ಸ್ಥಾನಮಾನವನ್ನು ರದ್ದು ಮಾಡುವ ನಿರ್ಧಾರಕ್ಕೆ ಕೇಂದ್ರ ಸರ್ಕಾರ ಕೈ ಹಾಕುವುದಿಲ್ಲ. ಈ ಬಗ್ಗೆ ಹರಿದಾಡುತ್ತಿರುವುದು ಸುಳ್ಳು ಸುದ್ದಿ ಎಂದು ಅಮಿತ್ ಶಾ ತಿಳಿಸಿದ್ದಾರೆ.
ಅಂತಿಮ ಎನ್ಆರ್ಸಿ ಪಟ್ಟಿಯನ್ನು ಬಿಡುಗಡೆ ಮಾಡಿದ ನಂತರ, ಕೆಲವು ಬಿಜೆಪಿ ನಾಯಕರು ಅಸ್ಸಾಂನ ಜನಸಂಖ್ಯೆಯಲ್ಲಿ 18% ಜನರು ಬಂಗಾಳಿ ಹಿಂದೂಗಳ ಇದ್ದಾರೆ, ಆದರೆ ಅವರನ್ನು ಪಕ್ಷದ ವೋಟ್ ಬ್ಯಾಂಕಿನಿಂದ ಹೊರಗಿಡಲಾಗಿದೆ ಎಂದು ನಿರಾಶೆ ವ್ಯಕ್ತಪಡಿಸಿದ್ದರು. ಅಂತಿಮ ಪಟ್ಟಿಗೆ ಹೊರತಾಗಿ, ವಲಸೆ ಮುಸ್ಲಿಮರ ಪ್ರಾಬಲ್ಯವಿರುವ ರಾಜ್ಯದ ಕೆಲ ಜಿಲ್ಲೆಗಳ ಜನರಲ್ಲಿ ತಮ್ಮನ್ನೂ ವೋಟ್ ಬ್ಯಾಂಕಿನಿಂದ ಹೊರಗಿಡಬಹುದು ಎಂಬ ಆತಂಕ ಮನೆಮಾಡಿದೆ.
ಈ ಹಿಂದೆ ಅಮಿತ್ ಶಾ ಅವರು ರಾಜಸ್ಥಾನದಲ್ಲಿ ಚುನಾವಣೆ ಪ್ರಚಾರಕ್ಕೆ ತೆರೆಳಿದ್ದ ವೇಳೆ, ಬಾಂಗ್ಲಾದೇಶಿ ವಲಸಿಗರು ಗೆದ್ದಲುಗಳು ಇದ್ದಂತೆ ಅವರನ್ನು ಮತದಾರರ ಪಟ್ಟಿದಿಂದ ಹೊರ ಇಡಲಾಗುತ್ತದೆ ಎಂದು ಹೇಳಿಕೆ ನೀಡಿದ್ದರು.