ದಾವಣಗೆರೆ: ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಜನಾಂದೋಲನ ನಡೆಸುತ್ತಿದ್ದಾರೆ ವಿನಃ ಬೇರೆ ಉದ್ದೇಶಕ್ಕಲ್ಲ. ಪಾಪ ಕಾಂಗ್ರೆಸ್ ಅವರಿಗೆ ಅವರ ನಾಯಕ, ವಿರೋಧ ಪಕ್ಷದ ನಾಯಕ, ರಾಷ್ಟ್ರೀಯ ನಾಯಕನನ್ನ ಆಯ್ಕೆ ಮಾಡಿಕೊಳ್ಳಲು ಆಗಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.
ನಗರದ ಶಿರಮಗೊಂಡನಹಳ್ಳಿಯ ಶಾಸಕ ರವೀಂದ್ರನಾಥ್ ರವರ ಮನೆಗೆ ಭೇಟಿ ನೀಡಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಅಸ್ತಿತ್ವ ಉಳಿಸಿಕೊಳ್ಳಲು ಜನಾಂದೋಲನ ಮಾಡುತ್ತಿದೆ. ಜೊತೆಗೆ ಸಿದ್ದರಾಮಯ್ಯ ಅಡಳಿತ ನಡೆಸುವಾಗ ನಾನೇ ದೇವರಾಜ್ ಅರಸ್ ಎಂದು ಬಿಂಬಿಸಿಕೊಳ್ಳುತ್ತಿದ್ದರು. ಆದರೆ ಈಗ ಅದೆಲ್ಲ ಸುಳ್ಳಾಗಿದೆ ಎಂದು ಮತ್ತೆ ಮಾಜಿ ಸಿಎಂ ಅವರ ಕಾಲೆಳೆದರು. ಇದನ್ನೂ ಓದಿ:ಸಿದ್ದರಾಮಯ್ಯ ಒಬ್ಬ ದಡ್ಡ ವಡ್ಡ, ತಲೆ ಇಲ್ಲ – ಈಶ್ವರಪ್ಪ
ಈಗಾಗಲೇ ರಾಜ್ಯ ಸರ್ಕಾರ ಜಲಪ್ರಳಯದ ನೆರೆ ಸಂತ್ರಸ್ತರಿಗೆ ಏನೆಲ್ಲಾ ಪರಿಹಾರ ಕ್ರಮ ತೆಗೆದುಕೊಳ್ಳಬೇಕು ಎಂಬ ಬಗ್ಗೆ ಸಮರೋಪಾದಿಯಲ್ಲಿ ವಿಚಾರ ನಡೆಸಿದೆ. ಕೇಂದ್ರದ ತಂಡಗಳು ಸರ್ವೆ ಮುಗಿಸಿದ್ದು, ಕೇಂದ್ರದಿಂದ ಶೀಘ್ರದಲ್ಲೇ ರಾಜ್ಯಕ್ಕೆ ಪರಿಹಾರ ಘೋಷಣೆಯಾಗುವುದು. ಅಲ್ಲದೆ ಕರ್ನಾಟಕ ಹೊರತುಪಡಿಸಿ ಬೇರೆ ರಾಜ್ಯಗಳಲ್ಲಿ ಕೂಡ ಜಲಪ್ರವಾಹ ಹಾನಿ ಸೃಷ್ಟಿಸಿದ್ದು, ಎಲ್ಲಾ ರಾಜ್ಯಗಳಿಗೆ ಪರಿಹಾರ ಘೋಷಣೆ ಸಂದರ್ಭದಲ್ಲಿ ರಾಜ್ಯಕ್ಕೂ ಘೋಷಣೆ ಮಾಡಲಾಗುತ್ತದೆ. ಉತ್ತರ ಕರ್ನಾಟಕದ ಜನರ ಅನುಕೂಲಕ್ಕೆ ಬೆಳಗಾವಿಯಲ್ಲಿ ಆಡಳಿತಾತ್ಮಕ ಕೇಂದ್ರ ತೆರೆಯಲು ತೀರ್ಮಾನಿಸಿದ್ದೇವೆ ಎಂದು ತಿಳಿಸಿದರು.